ನವದೆಹಲಿ: ಕುಸಿಯುತ್ತಿರುವ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಯತ್ನಿಸುತ್ತಿರುವ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ ಮಹತ್ವದ ಪ್ರಕಟನೆ ಮಾಡಿದ್ದಾರೆ. ರಜೆ ಪ್ರಯಾಣ ರಿಯಾಯಿತಿ (ಎಲ್ಟಿಸಿ) ನಗದು ವೋಚರ್ ಯೋಜನೆ, ಮತ್ತೊಂದು ವಿಶೇಷ ಹಬ್ಬದ ಮುಂಗಡ ಯೋಜನೆಯನ್ನು ಅವರು ಘೋಷಿಸಿದ್ದಾರೆ. ಗ್ರಾಹಕರ ಬೇಡಿಕೆಯನ್ನು ಉತ್ತೇಜಿಸುವ ಸಲುವಾಗಿ ಇದನ್ನು ಘೋಷಣೆ ಮಾಡಲಾಗಿದೆ.
ಬೇಡಿಕೆಯನ್ನು ವೃದ್ಧಿಸಲು, ಗ್ರಾಹಕರ ಖರ್ಚು ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಲು ಉದ್ಯೋಗಿಗಳಿಗೆ 10 ಸಾವಿರ ರೂಪಾಯಿ ಬಡ್ಡಿ ರಹಿತ ಹಬ್ಬದ ಮುಂಗಡ ಯೋಜನೆಯನ್ನು ಕೇಂದ್ರ ಸರ್ಕಾರ ಉಪಕ್ರಮದಡಿ ಒದಗಿಸುತ್ತಿದೆ.
ನಗದು ವೋಚರ್ಗಳನ್ನು ಆಹಾರಯೇತರ, ಶೇ.12 ಹಾಗೂ ಹೆಚ್ಚಿನ ಜಿಎಸ್ ಟಿ ರೇಟೆಡ್ ಉತ್ಪನ್ನಗಳನ್ನು ಖರೀದಿಸಲು ಮಾತ್ರ ಬಳಕೆ ಮಾಡಬಹುದಾಗಿದ್ದು, ಜಿಎಸ್ ಟಿ ನೋಂದಾಯಿತ ಔಟ್ ಲೆಟ್ಗಳಲ್ಲಿ ಡಿಜಿಟಲ್ ಮೋಡ್ ಮೂಲಕ ಪಾವತಿ ಮಾಡಬೇಕಾಗುತ್ತದೆ.
ರುಪೇ ಕಾರ್ಡ್ ರೂಪದಲ್ಲಿ 10 ಸಾವಿರ ರೂಪಾಯಿ ಮುಂಗಡ ದೊರೆಯಲಿದ್ದು, ಮಾ.31, 2021 ವರೆಗೂ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಣವನ್ನು 10 ಕಂತುಗಳಲ್ಲಿ ಮರುಪಾವತಿ ಮಾಡಬಹುದಾಗಿದ್ದು, ಕೇಂದ್ರ ಸರ್ಕಾರ ಇದಕ್ಕಾಗಿ 4,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ಹಿಂದೆ ಕೇಂದ್ರ ಸರ್ಕಾರದ ಉದ್ಯೋಗಿಗಳು ತಮಗೆ ಬೇಕಾದ ಕಡೆಗೆ ಭೇಟಿ ನೀಡಲು ಹಾಗೂ ಒಂದು ಬಾರಿ ಊರಿಗೆ ತೆರಳುವ ವೆಚ್ಚವನ್ನು ಎಲ್ ಟಿಸಿ ರೂಪದಲ್ಲಿ ಪಡೆಯುತ್ತಿದ್ದರು. ಆದರೆ ಈ ಬಾರಿ ಕೋವಿಡ್-19 ಕಾರಣದಿಂದಾಗಿ ಪ್ರಯಾಣ ನಿರ್ಬಂಧ ಇರುವ ಕಾರಣ ಎಲ್ ಟಿಸಿ ಬದಲಿಗೆ ನಗದು ವೋಚರ್ ಗಳನ್ನು ನೀಡಲಾಗುತ್ತದೆ ಎಂದು ಸಚಿವೆ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ 43 ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕೌನ್ಸಿಲ್ ಸಭೆಗೂ ಕೆಲವು ಗಂಟೆಗಳ ಮೊದಲು ಇದನ್ನು ಅವರು ಘೋಷಿಸಿದ್ದಾರೆ.
“ಪ್ರಸ್ತುತ ಘೋಷಣೆ ಮಾಡಲಾಗಿರುವ ಪ್ರಸ್ತಾಪಗಳು ಬೇಡಿಕೆಯನ್ನು ಪ್ರೋತ್ಸಾಹಿಸಲಿದೆ” ಎಂದು ಅವರು ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.