ಮೈಸೂರು: ಕೊರೋನಾ ಸಂಕಷ್ಟದ ಅವಧಿಯಲ್ಲಿ ಮೈಸೂರಿನ ಆಯುಬ್ ಅಹ್ಮದ್ ಅವರು 120 ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಕ್ರಿಯೆಗೆ ನೆರವಾಗಿ ‘ಬಾಡಿ ಮಿಯಾನ್’ ಎಂದೇ ಜನಪ್ರಿಯತೆ ಗಳಿಸಿದ್ದಾರೆ. ಮೈಸೂರಿನ ಸಿಟಿ ಕಾರ್ಪೊರೇಷನ್ ಜೊತೆ ಕೈಜೋಡಿಸಿ ಈ ಸಮಾಜಮುಖಿ ಕಾರ್ಯ ನಡೆಸುವ ಮೂಲಕ ಮನೆ ಮಾತಾಗಿದ್ದಾರೆ.
ಅಹಮದ್ ಅವರು ಯಾವುದೇ ವಾರಸುದಾರರನ್ನು ಹೊಂದಿರದ ಅನಾಥ ಶವಗಳಿಗೆ ಗೌರವಪೂರಕ ಅಂತ್ಯಕ್ರಿಯೆ ನಡೆಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ ಕಠಿಣ ಪರಿಶ್ರಮದ ಕಾರಣದಿಂದ ಟಿಎನ್ಐಇಯಲ್ಲಿಯೂ ಸ್ಥಾನ ಪಡೆದಿದ್ದಾರೆ. ಈ ವರೆಗೆ ಸುಮಾರು 10 ಸಾವಿರಗಳಷ್ಟು ವಿವಿಧ ಜಾತಿ, ಮತ ಧರ್ಮಗಳಿಗೆ ಸೇರಿದ ಶವಗಳ ಅಂತ್ಯಕ್ರಿಯೆ ನಡೆಸಿದ ಕೀರ್ತಿ ಇವರದ್ದು.
ಮೈಸೂರು ನಗರ ನಿಗಮದ ಆರೋಗ್ಯಾಧಿಕಾರಿ ಡಾ. ಜಯಂತ್ ಅವರ ಪ್ರಕಾರ, ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಸೋಂಕಿತರ ದೇಹಗಳನ್ನು ಅಂತ್ಯಕ್ರಿಯೆ ನಡೆಸುವ ಕೆಲಸಕ್ಕೆ ಮುಂದೆ ಬರುವವರೇ ಇಲ್ಲ. ಆದರೆ ಆಯುಬ್ ಅಹಮದ್ ಅವರನ್ನು ಸಂಪರ್ಕಿಸಿ ಅಂತ್ಯಕ್ರಿಯೆ ನಡೆಸುವ ಬಗ್ಗೆ ಹೇಳಿದಾಗ ಅವರು ಅದಕ್ಕೆ ಧೈರ್ಯದಿಂದ ಒಪ್ಪಿಕೊಂಡರು. ಈ ಕೆಲಸವನ್ನು ಆಯುಬ್ ಅವರು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ ಎಂದು ಜಯಂತ್ ತಿಳಿಸಿದ್ದಾರೆ. ಇವರ ಈ ಮಹತ್ಕಾರ್ಯಕ್ಕೆ ನಿಗಮದ ವತಿಯಿಂದ ಗೌರವ ಧನ ನೀಡುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಪೀಡಿತರ ಶವ ಸಂಸ್ಕಾರದ ಜೊತೆಗೆ ಆಯುಬ್ ಅವರು ಮತ್ತೊಂದು ಸಮಾಜಮುಖಿ ಮಾದರಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಸಂಕಷ್ಟದ ಅವಧಿಯಲ್ಲಿ ಬಡ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನೂ ನೀಡುತ್ತಾ ಬರುತ್ತಿದ್ದು, ಆ ಮೂಲಕವೂ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.