ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತದಾದ್ಯಂತ ವಲಸೆ ಕಾರ್ಮಿಕರೂ ಸೇರಿದಂತೆ ಕಾರ್ಮಿಕ ಕಲ್ಯಾಣ ಮತ್ತು ಉದ್ಯೋಗಕ್ಕಾಗಿ ಕೇಂದ್ರ ಸರ್ಕಾರವು ಹಲವಾರು ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.
ಕಾರ್ಮಿಕ ವಿಷಯವು ಸಮವರ್ತಿ ಪಟ್ಟಿಯಲ್ಲಿದೆ. ಆದ್ದರಿಂದ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ವಿಷಯಗಳ ಬಗ್ಗೆ ಕಾನೂನು ರಚಿಸಬಹುದು. ಇದಲ್ಲದೆ, ವಲಸೆ ಕಾರ್ಮಿಕ ಕಾಯ್ದೆ ಸೇರಿದಂತೆ ಬಹುತೇಕ ಕೇಂದ್ರ ಕಾರ್ಮಿಕ ಕಾಯಿದೆಗಳನ್ನು ರಾಜ್ಯ ಸರ್ಕಾರವು ಪ್ರತ್ಯೇಕವಾಗಿ ಜಾರಿಗೆ ತರುತ್ತಿದೆ. ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವರು ಹೇಳಿದರು.
ಲಾಕ್ ಡೌನ್ ಘೋಷಣೆಯಾದ ಕೂಡಲೇ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಎಲ್ಲಾ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ನಿಧಿಯಿಂದ ನಿರ್ಮಾಣ ಕಾರ್ಮಿಕರಿಗೆ ಹಣಕಾಸಿನ ನೆರವು ನೀಡುವಂತೆ ಸೂಚನೆಗಳನ್ನು ಕಳುಹಿಸಲಾಯಿತು. ಇಲ್ಲಿಯವರೆಗೆ ಸುಮಾರು ಎರಡು ಕೋಟಿ ವಲಸೆ ಕಾರ್ಮಿಕರಿಗೆ ವಿವಿಧ ರಾಜ್ಯಗಳು ನಿರ್ವಹಿಸುತ್ತಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸೆಸ್ ನಿಧಿಯಿಂದ ನೇರವಾಗಿ 5000.00 ಕೋಟಿ ರೂ. ನೀಡಲಾಗಿದೆ ಎಂದು ಅವರು ತಿಳಿಸಿದರು.
ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಕುಂದುಕೊರತೆಗಳನ್ನು ಬಗೆಹರಿಸಲು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ದೇಶಾದ್ಯಂತ 20 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿತ್ತು. ಲಾಕ್ ಡೌನ್ ಸಮಯದಲ್ಲಿ, ಕಾರ್ಮಿಕರ 15000 ಕ್ಕೂ ಹೆಚ್ಚು ದೂರುಗಳನ್ನು ಈ ನಿಯಂತ್ರಣ ಕೊಠಡಿಗಳ ಮೂಲಕ ಬಗೆಹರಿಸಲಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಧ್ಯಸ್ಥಿಕೆಯಿಂದಾಗಿ ಎರಡು ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಅವರ ಸುಮಾರು 295 ಕೋಟಿ ರೂ ಬಾಕಿ ವೇತನವನ್ನು ಕೊಡಿಸಲಾಗಿರುವುದಾಗಿಯೂ ಅವರು ಮಾಹಿತಿ ನೀಡಿದರು.
ಲಾಕ್ಡೌನ್ ನಂತರ ದೇಶದ ಬಡ, ನಿರ್ಗತಿಕ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸಹಾಯ ಮಾಡಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ 1.7 ಲಕ್ಷ ಕೋಟಿ ರೂ. ಈ ಪ್ಯಾಕೇಜ್ ಅಡಿಯಲ್ಲಿ 80 ಕೋಟಿ ಜನರಿಗೆ 5 ಕೆ.ಜಿ. ಗೋಧಿ / ಅಕ್ಕಿ ಮತ್ತು 1 ಕೆ.ಜಿ. ದ್ವಿದಳ ಧಾನ್ಯಗಳನ್ನು ಒದಗಿಸಲಾಗುತ್ತಿದೆ. ಎಲ್ಲಾ ಫಲಾನುಭವಿಗಳಿಗೆ 2020 ರ ನವೆಂಬರ್ ವರೆಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುವುದು. ಸಾಂಕ್ರಾಮಿಕದ ಸಂದರ್ಭದಲ್ಲಿ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ಸರ್ಕಾರದ ಗುರಿಯಾಗಿದೆ.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆ ಅಡಿಯಲ್ಲಿ ದಿನಗೂಲಿಯನ್ನು 182 ರಿಂದ 202 ರೂ.ಗೆ ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದರು.
ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಭಾರತ ಸರ್ಕಾರವು ಒಂದು ವರ್ಷದವರೆಗೆ 10,000 ರೂ. ವರೆಗಿನ ಮೇಲಾಧಾರ ಮುಕ್ತ ಮೂಲ ಬಂಡವಾಳ ಸಾಲಕ್ಕೆ ಅನುಕೂಲವಾಗುವಂತೆ ಪಿಎಂ ಸ್ವನಿಧಿ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ತಮ್ಮ ತವರು ರಾಜ್ಯಗಳಿಗೆ ಹಿಂದಿರುಗಿದ ವಲಸೆ ಕಾರ್ಮಿಕರ ಉದ್ಯೋಗಕ್ಕೆ ಅನುಕೂಲವಾಗುವಂತೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನವನ್ನು 116 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ. ಈ ಅಭಿಯಾನದಡಿಯಲ್ಲಿ, ವಲಸೆ ಕಾರ್ಮಿಕರ ಪಾಲ್ಗೊಳ್ಳುವಿಕೆಯೊಂದಿಗೆ ಗ್ರಾಮೀಣ ಮೂಲಸೌಕರ್ಯವನ್ನು ನಿರ್ಮಿಸಲಾಗುವುದು ಮತ್ತು ಈ ಉದ್ದೇಶಕ್ಕಾಗಿ ಸುಮಾರು 50,000 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುವುದು. ಇದೇ ರೀತಿ, ವಲಸೆ ಕಾರ್ಮಿಕರ ಉದ್ಯೋಗಕ್ಕೆ ಅನುಕೂಲವಾಗುವಂತೆ ಸಾರಿಗೆ ಸಚಿವಾಲಯವು ರಸ್ತೆ, ಹೆದ್ದಾರಿ ಇತ್ಯಾದಿಗಳನ್ನು ನಿರ್ಮಿಸಲು ವಲಸೆ ಕಾರ್ಮಿಕರನ್ನು ಒಳಗೊಂಡ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ ಎಂದವರು ತಿಳಿಸಿದರು.
ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಎಂಎಸ್ಎಂಇ ವಲಯವನ್ನು ಬಲಪಡಿಸಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಿರ್ದಿಷ್ಟವಾಗಿ ಆತ್ಮನಿರ್ಭರ ಭಾರತ ಅಡಿಯಲ್ಲಿ ಇಪ್ಪತ್ತು ಲಕ್ಷ ಕೋಟಿ ರೂ.ಗಳ ಹಣಕಾಸು ಪ್ಯಾಕೇಜ್ ಅನ್ನು ಪ್ರಾರಂಭಿಸಲಾಗಿದೆ.
ಕಾರ್ಮಿಕರಿಗೆ ತಮ್ಮ ಇಪಿಎಫ್ ಖಾತೆಯ ಮೂಲಕ ಕನಿಷ್ಠ ಹಣಕಾಸಿನ ನೆರವು ನೀಡುವ ಸಲುವಾಗಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಎಲ್ಲಾ ಇಪಿಎಫ್ ಸದಸ್ಯರಿಗೆ ತಮ್ಮ ಇಪಿಎಫ್ ಖಾತೆ ಒಟ್ಟು ಭವಿಷ್ಯ ನಿಧಿಯ 75% ರಷ್ಟನ್ನು ಹಿಂಪಡೆಯಲು ಅನುಮತಿ ನೀಡಿದೆ. ಇಲ್ಲಿಯವರೆಗೆ ಸುಮಾರು 39,000 ಕೋಟಿ ರೂ.ಗಳನ್ನು ಇಪಿಎಫ್ಒ ಸದಸ್ಯರು ಹಿಂಪಡೆದಿದ್ದಾರೆ.
ಕೆಲಸಕ್ಕಾಗಿ ಮತ್ತೆ ನಿರ್ದಿಷ್ಟ ರಾಜ್ಯಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರಿಗೆ ಅನುಕೂಲವಾಗುವಂತೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2020 ರ ಜುಲೈ 27 ರಂದು ಎಲ್ಲಾ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹಾ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ, ಮಾರ್ಗಸೂಚಿಗಳ ಅಡಿಯಲ್ಲಿ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಉದ್ಯೋಗಕ್ಕಾಗಿ ಹಿಂತಿರುಗುತ್ತಿರುವ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಮಟ್ಟದ ನೋಡಲ್ ಅಧಿಕಾರಿಯನ್ನು ನಾಮನಿರ್ದೇಶನ ಮಾಡಲು ನಿರ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರೂಪಿಸಿದ ಶಿಷ್ಟಾಚಾರದ ಪ್ರಕಾರ ವಲಸೆ ಕಾರ್ಮಿಕರನ್ನು ಪರೀಕ್ಷಿಸಲು ಮೂಲ ಮತ್ತು ಕೆಲಸ ನೀಡುವ ರಾಜ್ಯವು ಸಹಕರಿಸುತ್ತವೆ. ವಲಸೆ ಕಾರ್ಮಿಕರನ್ನು ಸುಲಭವಾಗಿ ಗುರುತಿಸಲು ಮತ್ತು ಅವರ ಕಲ್ಯಾಣ ಕ್ರಮಗಳಿಗಾಗಿ ಸರಿಯಾದ ದತ್ತಾಂಶವನ್ನು ಸಿದ್ಧಪಡಿಸುವಂತೆ ರಾಜ್ಯಗಳಿಗೆ ನಿರ್ದೇಶಿಸಲಾಗಿದೆ. ಈ ಮಾಹಿತಿಯು ಅವರನ್ನು ಭಾರತ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ದಾಖಲಿಸಲು ನೆರವಾಗುತ್ತದೆ ಎಂದು ಸಚಿವರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.