ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳನ್ನು ನಿರಂತರವಾಗಿ ಅರ್ಥಪೂರ್ಣ ಕಲಿಕೆಯಲ್ಲಿ ಭಾಗಿಯಾಗುವಂತೆ ಮಾಡಲು ಎನ್ಸಿಇಆರ್ಟಿ ಶಿಕ್ಷಣ ಸಚಿವಾಲಯದ ಮಾರ್ಗದರ್ಶನದಲ್ಲಿ I-XIIನೇ ತರಗತಿವರೆಗೆ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗಾಗಿ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಅಭಿವೃದ್ಧಿಪಡಿಸಿದೆ.
ಇದನ್ನು ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಮತ್ತು ಶಿಕ್ಷಕರ ನೆರವಿನಿಂದ ಜಾರಿಗೊಳಿಸಲಾಗುವುದು. ನಾಲ್ಕು ವಾರಗಳ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್(ಎಎಸಿ) ಮತ್ತು ಪ್ರಾಥಮಿಕ ಮತ್ತು ಪ್ರೌಢ ಹಂತಕ್ಕಾಗಿ ಎಂಟು ವಾರಗಳ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಈ ಮೊದಲೇ ಬಿಡುಗಡೆ ಮಾಡಲಾಗಿದ್ದು, ಸದ್ಯ ವರ್ಚುವಲ್ ರೂಪದಲ್ಲಿ ಪ್ರೌಢ ಹಂತಕ್ಕೆ ಮುಂದಿನ ಎಂಟು ವಾರಗಳ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಖ್ ಅವರು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಈ ವೇಳಾಪಟ್ಟಿ ಶಿಕ್ಷಕರಿಗೆ ನಾನಾ ಬಗೆಯ ತಾಂತ್ರಿಕ ಸಾಮಾಗ್ರಿಗಳ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಗೆ ಮಾರ್ಗಸೂಚಿಗಳನ್ನು ಒಳಗೊಂಡಿದೆ. ಮೊಬೈಲ್ ಫೋನ್ ಹೊಂದಿರುವ ಬಹುತೇಕರಲ್ಲಿ ಅಂತರ್ಜಾಲ ಸಂಪರ್ಕ ಇರುವುದಿಲ್ಲ ಅಥವಾ ವಾಟ್ಸ್ ಅಪ್, ಫೇಸ್ ಬುಕ್, ಟ್ವಿಟರ್, ಗೂಗಲ್ ಇತ್ಯಾದಿ ನಾನಾ ಸಾಮಾಜಿಕ ಮಾಧ್ಯಮಗಳ ಬಳಕೆ ಲಭ್ಯವಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕ್ಯಾಲೆಂಡರ್ ಮೂಲಕ ಶಿಕ್ಷಕರಿಗೆ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮೊಬೈಲ್ ಫೋನ್ ನ ಎಸ್ಎಂಎಸ್ ಅಥವಾ ವಾಯ್ಸ್ ಕಾಲ್ ಮೂಲಕ ನೆರವಾಗಲು ಮಾರ್ಗದರ್ಶನ ನೀಡುತ್ತದೆ ಎಂದು ಸಚಿವರು ಹೇಳಿದರು. ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಲೆಂಡರ್ ಜಾರಿಗೊಳಿಸಲು ಪೋಷಕರು ನೆರವು ನೀಡುವುದನ್ನು ನಿರೀಕ್ಷಿಸಲಾಗುತ್ತಿದೆ.
ಶೈಕ್ಷಣಿಕ ವೇಳಾಪಟ್ಟಿ ದಿವ್ಯಾಂಗ ಮಕ್ಕಳು(ವಿಶೇಷಚೇತನ) ಸೇರಿ ಎಲ್ಲ ವರ್ಗದ ಮಕ್ಕಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದ್ದು, ಅದರಲ್ಲಿ ಆಡಿಯೋ ಬುಕ್ ಲಿಂಕ್, ರೇಡಿಯೋ ಕಾರ್ಯಕ್ರಮ ಮತ್ತು ವಿಡಿಯೋ ಕಾರ್ಯಕ್ರಮಗಳು ಒಳಗೊಂಡಿವೆ.
ಈ ವೇಳಾಪಟ್ಟಿಯಲ್ಲಿ ಪ್ರತಿ ವಾರದ ಯೋಜನೆಗಳು ಇದ್ದು, ಅದರಲ್ಲಿ ಆಸಕ್ತಿಕರ ಮತ್ತು ಸವಾಲಿನಂತಹ ಚಟುವಟಿಕೆಗಳು ಒಳಗೊಂಡಿವೆ. ಪ್ರತಿಯೊಂದು ಪಾಠ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮ ಅಥವಾ ಪಠ್ಯ ಪುಸ್ತಕಗಳ ಉಲ್ಲೇಖವಿರುತ್ತದೆ. ಅದಕ್ಕಿಂತ ಮುಖ್ಯವಾಗಿ ಇದು ವಿಷಯಗಳನ್ನು ಮತ್ತು ಕಲಿಕೆಯ ಫಲಿತಾಂಶಗಳನ್ನು ಗುರುತಿಸುತ್ತದೆ. ಕಲಿಕೆಯ ಫಲಿತಾಂಶ ನೀಡುವಂತಹ ವಿಷಯಗಳನ್ನು ಗುರುತಿಸುವ ಉದ್ದೇಶದಿಂದಾಗಿ ಶಿಕ್ಷಕರು ಮತ್ತು ಪೋಷಕರಿಗೆ ಮಕ್ಕಳು ಕಲಿಕೆಯಲ್ಲಿ ಸಾಧಿಸಿರುವ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಸಾಧ್ಯವಾಗಲಿದೆ. ಪಠ್ಯಕ್ರಮದ ಹೊರತಾಗಿಯೂ ಕಲಿಕೆಗೆ ಅವಕಾಶವಿದೆ. ವೇಳಾಪಟ್ಟಿಯಲ್ಲಿ ನೀಡಲಾಗಿರುವ ಚಟುವಟಿಕೆಗಳು ಫಲಿತಾಂಶ ಆಧಾರಿತವಾಗಿದ್ದು, ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪಠ್ಯ ಪುಸ್ತಕಗಳನ್ನು ಬಳಸಿ, ಇರುವ ಸಂಪನ್ಮೂಲದಲ್ಲೇ ಆ ಫಲಿತಾಂಶಗಳನ್ನು ಪಡೆಯಬಹುದಾಗಿದೆ.
ಇದರಲ್ಲಿ ಪ್ರಯೋಗಾತ್ಮಕ ಕಲಿಕಾ ಚಟುವಟಿಕೆಗಳಾದ ಕಲಾ ಶಿಕ್ಷಣ, ದೈಹಿಕ ಅಭ್ಯಾಸ, ಯೋಗ, ವೃತ್ತಿಶಿಕ್ಷಣ ಕೌಶಲ್ಯ ಮತ್ತಿತರವು ಸೇರಿವೆ. ಈ ವೇಳಾಪಟ್ಟಿ ತರಗತಿವಾರು ಮತ್ತು ವಿಷಯವಾರು ಚಟುವಟಿಕೆಗಳ ಅನುಕ್ರಮ ಪದ್ಧತಿ ಒಳಗೊಂಡಿದೆ. ಈ ವೇಳಾಪಟ್ಟಿಯಲ್ಲಿ ಹಿಂದಿ, ಇಂಗ್ಲಿಷ್, ಉರ್ದು ಮತ್ತು ಸಂಸ್ಕೃತ ಸೇರಿ ನಾಲ್ಕು ಭಾಷೆಗಳ ವಿಷಯಗಳ ಚಟುವಟಿಕೆಗಳು ಸೇರಿವೆ. ಈ ವೇಳಾಪಟ್ಟಿಯಲ್ಲಿ ಶಿಕ್ಷಕರು, ಮಕ್ಕಳು ಮತ್ತು ಪೋಷಕರಲ್ಲಿನ ಒತ್ತಡ ತಗ್ಗಿಸುವುದು ಮತ್ತು ಆತಂಕ ನಿವಾರಿಸುವ ಚಟುವಟಿಕೆ ಕಾರ್ಯತಂತ್ರಗಳಿಗೂ ಅವಕಾಶವಿದೆ. ಈ ವೇಳಾಪಟ್ಟಿಯಲ್ಲಿ ಭಾರತ ಸರ್ಕಾರದ ಇ-ಪಾಠಶಾಲಾ, ಎನ್ ಆರ್ ಒ ಇ ಆರ್ ಮತ್ತು ದೀಕ್ಷಾ ಪೋರ್ಟಲ್ ನಲ್ಲಿ ಲಭ್ಯವಿರುವ ಇ-ಪಠ್ಯ ಪಾಠಗಳ ಲಿಂಕ್ ಒಳಗೊಂಡಿವೆ.
ಎಲ್ಲಾ ಸೂಚಿಸಲಾದ ಚಟುವಟಿಕೆಗಳು ಸಲಹೆಯ ರೂಪದಲ್ಲಿರುತ್ತವೆ ಮತ್ತು ಲಿಖಿತವಲ್ಲ. ಕ್ರಮಬದ್ಧವಾಗಿ ಪಾಲನೆ ಮಾಡುವುದು ಕಡ್ಡಾಯವಲ್ಲ. ಶಿಕ್ಷಕರು ಮತ್ತು ಪೋಷಕರು ಚಟುವಟಿಕೆಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಬಳಸಿಕೊಳ್ಳಬಹುದು ಮತ್ತು ಯಾವ ಚಟುವಟಿಕೆಗಳಲ್ಲಿ ಮಕ್ಕಳು ಆಸಕ್ತಿ ತೋರುತ್ತಾರೋ ಅಂತಹವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಎನ್ ಸಿ ಇ ಆರ್ ಟಿ ಈಗಾಗಲೇ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗಾಗಿ, ಟಿವಿ ಚಾನಲ್ ಸ್ವಯಂಪ್ರಭಾ(ಕಿಶೋರ್ ಮಂಚ್) (ಉಚಿತ ಡಿಟಿಎಚ್ ಚಾನಲ್ 128, ಡಿಶ್ ಟಿವಿ ಚಾನಲ್ # 950, ಸನ್ ಡೈರೆಕ್ಟ್ #793, ಜಿಯೊ ಟಿವಿ, ಟಾಟಾಸ್ಕೈ #756, ಏರ್ ಟೆಲ್ ಚಾನಲ್ #440, ವಿಡಿಯೋಕಾನ್ ಚಾನಲ್ # 477), ಕಿಶೋರ್ ಮಂಚ್ ಆಪ್(ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು) ಮತ್ತು ಯೂಟ್ಯೂಬ್ ಚಾನಲ್ ಲೈವ್ (ಎನ್ಸಿಇಆರ್ಟಿ ಅಧಿಕೃತ ಚಾನಲ್) ಮೂಲಕ ನೇರ ಸಂವಾದಾತ್ಮಕ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ದಿನ ಸೋಮವಾರದಿಂದ ಶನಿವಾರದವರೆಗೆ ಪ್ರತಿ ತರಗತಿಗೆ I-Xರ ವರೆಗೆ ಒಂದು ಗಂಟೆ ನೇರ ಬೋಧನಾ ಕಾರ್ಯಕ್ರಮ ಪ್ರಸಾರವಾಗಲಿದ್ದು, ಅದಕ್ಕಾಗಿ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದೆ. XI ಮತ್ತು XIIನೇ ತರಗತಿಗಳಿಗೆ ವಾರಕ್ಕೆ ಪ್ರತಿ ತರಗತಿಗೆ ಎರಡು ಗಂಟೆಗಳ ನೇರ ಪ್ರಸಾರವಿರುತ್ತದೆ. ಹೆಚ್ಚುವರಿಯಾಗಿ ವೀಕ್ಷಕರ ಜೊತೆ ಸಂವಾದ, ಕಲಿಕಾ ಪಠ್ಯಗಳ ಕುರಿತಂತೆ ಚಟುವಟಿಕೆಗಳನ್ನು ನೇರ ಪ್ರಸಾರದಲ್ಲಿ ತೋರಿಸಲಾಗುವುದು. ವಿಡಿಯೋ ಕಾನ್ಫರೆನ್ಸ್ ಮೂಲಕ ಎಸ್ ಸಿ ಇ ಆರ್ ಟಿ ಎಸ್/ಎಸ್ಐಇಎಸ್ ಶಿಕ್ಷಣ ನಿರ್ದೇಶನಾಲಯಗಳು, ಕೇಂದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಮಿತಿ ಮತ್ತು ಸಿಬಿಎಸ್ಇಗಳ ಮೂಲಕ ಈ ಕ್ಯಾಲೆಂಡರ್ ನ ಅಂಶಗಳನ್ನು ತಲುಪಿಸಲಾಗುವುದು. ಪ್ರೌಢಹಂತದ ಈ ಎಂಟು ವಾರಗಳ ಕ್ಯಾಲೆಂಡರ್ ಅನ್ನು ಎನ್ಸಿಇಆರ್ಟಿ ವೆಬ್ ಸೈಟ್ ನಲ್ಲಿ ಹಾಕಲಾಗಿದ್ದು, ಆ ಮೂಲಕ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗುತ್ತಿದೆ.
ಇದು ಕೋವಿಡ್-19 ಎದುರಿಸಲು ಸಕಾರಾತ್ಮಕ ಮಾರ್ಗೋಪಾಯಗಳನ್ನು ಹುಡುಕಲು ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಪ್ರಾಂಶುಪಾಲರು ಮತ್ತು ಪೋಷಕರಿಗೆ ನೆರವಾಗಲಿದೆ ಹಾಗೂ ಮಕ್ಕಳಿಗೆ ಮನೆಯಲ್ಲಿಯೇ ಆನ್ ಲೈನ್ ಶಿಕ್ಷಣ ಬೋಧನಾ ಸಂಪನ್ಮೂಲಗಳನ್ನು ಬಳಸಿ, ಕಲಿಕೆಯ ಸಾಮರ್ಥ್ಯವೃದ್ಧಿಗೆ ಸಹಾಯಕವಾಗಲಿದೆ ಎಂದು ಸಚಿವರು ಈ ಕುರಿತು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.