ನವದೆಹಲಿ: ಕಳೆದ ಕೆಲ ತಿಂಗಳಿನಿಂದ ಭಾರತ ಮತ್ತು ಚೀನಾ ನಡುವೆ ಲಡಾಖ್ ಗಡಿ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಬಿಕ್ಕಟ್ಟು ಶಮನಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಮಾತುಕತೆ ನಡೆಸಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಮತ್ತು ಚೀನಾದ ವಾಂಗ್ ಯಿ ನಡುವೆ ಈ ಮಹತ್ವದ ಚರ್ಚೆ ನಡೆದಿದ್ದು, ಈ ಸಭೆಯಲ್ಲಿ ಐದು ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಉಭಯ ರಾಷ್ಟ್ರಗಳು ರೂಪಿಸಿರುವುದಾಗಿ ತಿಳಿದು ಬಂದಿದೆ. ಶೀಘ್ರದಲ್ಲೇ ಗಡಿ ಭಾಗದಿಂದ ಸೇನೆಯನ್ನು ಹಿಂಪಡೆಯುವುದು, ಬಿಕ್ಕಟ್ಟು ಶಮದ ಸಲುವಾಗಿ ನಡೆಸುವ ಯಾವುದೇ ಕ್ರಮಗಳಿಗೆ ಅಡ್ಡಗಾಲು ಹಾಕದಿರುವುದು, ಒಪ್ಪಂದದಲ್ಲಿ ಉಲ್ಲೇಖಿಸಲಾದಂತೆ ಉಭಯ ದೇಶದ ಸೈನಿಕರು ಅಂತರ ಕಾಪಾಡಿಕೊಳ್ಳುವುದು, ಗಡಿ ನಿರ್ವಹಣೆ ಶಿಷ್ಟಾಚಾರಗಳ ಪಾಲನೆ ಮಾಡುವ ಸಂಬಂಧ ಈ ಮಾರ್ಗಸೂಚಿಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅದರಂತೆ ಉಭಯ ದೇಶಗಳ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ನಾಯಕರ ಮಾರ್ಗದರ್ಶನ ಪಡೆಯುವಂತೆಯೂ ಈ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ಈ ಸಭೆಯಲ್ಲಿ ಎರಡು ದೇಶಗಳ ನಡುವಿನ ಭಿನ್ನಾಭಿಪ್ರಾಯಗಳು ವಿವಾದವಾಗಿ ಮಾರ್ಪಾಡಾಗದಂತೆ ಎಚ್ಚರಿಕೆಯ ಹೆಜ್ಜೆಗಳನ್ನಿಡುವಂತೆಯೂ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ನಾಯಕರು ಜಂಟಿ ಹೇಳಿಕೆಗಳನ್ನು ನೀಡಿದ್ದು, ಆ ಮೂಲಕ ಈ ಉದ್ವಿಗ್ನ ಪರಿಸ್ಥಿತಿ ಶಮನಕ್ಕೆ ಪ್ರಯತ್ನ ನಡೆಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ. ಈ ವೇಳೆ ಲಡಾಖ್ ಗಡಿಯಲ್ಲಿ ಚೀನಾ ಬೃಹತ್ ಸೇನೆಯನ್ನು ನಿಯೋಜನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಚೀನಾ ಸಚಿವರಿಂದ ಸಮಂಜಸ ಉತ್ತರ ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ.
ಗಡಿಯಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣ ಮಾಡುವ ಮೂಲಕ ಚೀನಾ ದ್ವಿಪಕ್ಷೀಯ ಒಪ್ಪಂದ ಮತ್ತು ಶಿಷ್ಟಾಚಾರಕ್ಕೆ ಅಪಚಾರ ಎಸಗಿರುವುದಾಗಿಯೂ ಈ ಸಭೆಯಲ್ಲಿ ಜೈಶಂಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಡಿಯ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಚೀನಾ ಸಹಕಾರ ನೀಡುತ್ತಿಲ್ಲ ಎಂದೂ ಅವರು ಆರೋಪ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.