ನವದೆಹಲಿ: 26/11 ಮುಂಬೈ ಮತ್ತು ಪಠಾಣ್ಕೋಟ್ ಭಯೋತ್ಪಾದಕ ದಾಳಿಯ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮತ್ತು ಭಯೋತ್ಪಾದಕ ಗುಂಪುಗಳು ಅದರ ನೆಲದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಭಾರತ ಮತ್ತು ಅಮೆರಿಕ ಪಾಕಿಸ್ಥಾನಕ್ಕೆ ಆಗ್ರಹ ಮಾಡಿವೆ.
ಮೂರನೇ ಯುಎಸ್-ಇಂಡಿಯಾ ಭಯೋತ್ಪಾದನಾ ವಿರೋಧಿ ಜಂಟಿ ಕಾರ್ಯ ಪಡೆ ಸಂವಾದದ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯ ಪ್ರಕಾರ, ಪಾಕಿಸ್ಥಾನವು ತನ್ನ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶವನ್ನು ಉಗ್ರರು ಬಳಸದಂತೆ ನೋಡಿಕೊಳ್ಳಲು ಕ್ಷಿಪ್ರ, ನಿರಂತರ ಮತ್ತು ಸ್ಥಿರ ಕ್ರಮಗಳನ್ನು ತೆಗೆದುಕೊಳ್ಳುವ ತುರ್ತು ಅಗತ್ಯವನ್ನು ಎರಡು ಕಡೆಯವರು ಒತ್ತಿಹೇಳಿದ್ದಾರೆ. 26/11 ಮುಂಬೈ ದಾಳಿ ಮತ್ತು ಪಠಾಣ್ಕೋಟ್ ದಾಳಿ ಸೇರಿದಂತೆ ಹಲವು ದಾಳಿಯ ಆರೋಪಿಗಳ ವಿರುದ್ಧ ಕ್ರಮಕೈಗೊಂಡು ತಕ್ಷಣವೇ ಸಂತ್ರಸ್ಥರಿಗೆ ನ್ಯಾಯ ಒದಗಿಸುವಂತೆ ಉಭಯ ದೇಶಗಳು ಪಾಕಿಸ್ಥಾನವನ್ನು ಆಗ್ರಹಿಸಿವೆ.
2008ರ ಮುಂಬೈ ಭಯೋತ್ಪಾದಕ ದಾಳಿಯನ್ನು ಪಾಕಿಸ್ಥಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೋಯ್ಬಾ ನಡೆಸಿದ್ದು, ಇದರಲ್ಲಿ 170 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ಮಾತುಕತೆಯ ಸಂದರ್ಭದಲ್ಲಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಜನರು ಮತ್ತು ಸರ್ಕಾರಕ್ಕೆ ಬೆಂಬಲವನ್ನು ನೀಡುವ ಬಗ್ಗೆ ಅಮೆರಿಕಾ ಪುನರುಚ್ಚರಿಸಿತು. ಭಾರತದ ವಿದೇಶಾಂಗ ಸಚಿವಾಲಯದ ಭಯೋತ್ಪಾದನಾ ನಿಗ್ರಹ ಜಂಟಿ ಕಾರ್ಯದರ್ಶಿ ಮಹಾವೀರ್ ಸಿಂಗ್ವಿ ಮತ್ತು ಭಯೋತ್ಪಾದನಾ ನಿಗ್ರಹದ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಸಂಯೋಜಕ ನಾಥನ್ ಎ.ನೇತೃತ್ವದಲ್ಲಿ ಮಾತುಕತೆ ನಡೆಯಿತು.
2019 ರ ಪುಲ್ವಾಮಾ ದಾಳಿಯ ನಂತರ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡುವಲ್ಲಿ ಯುಎಸ್ ಪ್ರಮುಖ ಪಾತ್ರ ವಹಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.