ಬೆಂಗಳೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಫೈರ್ ಸ್ಟೇಷನ್ (ಅಗ್ನಿ ಶಾಮಕ ಠಾಣೆ) ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಇದು ರಾಜ್ಯದ 214 ನೇ ಅಗ್ನಿಶಾಮಕ ಠಾಣೆಯಾಗಿರಲಿದ್ದು, ಕರಾವಳಿ ಭಾಗಕ್ಕೆ ಸಂಬಂಧಿಸಿದಂತೆ 5 ನೇಯ ಫೈರ್ ಸ್ಟೇಷನ್ ಆಗಿರಲಿದೆ. ಉಡುಪಿ, ಮಲ್ಪೆ, ಕಾರ್ಕಳ, ಕುಂದಾಪುರದಲ್ಲಿ ಫೈರ್ ಸ್ಟೇಷನ್ ಗಳಿದ್ದು, 5 ನೇಯ ಠಾಣೆ ಬೈಂದೂರಿನ ಯಡ್ತರೆಯಲ್ಲಿ ಆರಂಭವಾಗಲಿರುವುದಾಗಿ ಅವರು ತಿಳಿಸಿದ್ದಾರೆ. ಇದು ಗಂಗೊಳ್ಳಿಯ ಮೀನುಗಾರಿಕಾ ವಲಯ ಸೇರಿದಂತೆ ಸಮೀಪದ ಪ್ರದೇಶಗಳಲ್ಲಿ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಶೀಘ್ರ ಸೇವೆ ನೀಡುವಲ್ಲಿ ಹೆಚ್ಚು ಉಪಯುಕ್ತವಾಗಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ಒಟ್ಟು 10 ಫೈರ್ ಸ್ಟೇಷನ್ಗಳನ್ನು ಆರಂಭಿಸಲು ಸರ್ಕಾರ ಕಾರ್ಯಯೋಜನೆಗಳನ್ನು ಹಾಕಿಕೊಂಡಿದ್ದು, ಇದಕ್ಕಾಗಿ 25 ಕೋಟಿ ರೂ. ಗಳ ಅನುದಾನ ನೀಡಿದೆ. ಇದರಲ್ಲಿ ಬೈಂದೂರು ಫೈರ್ ಸ್ಟೇಷನ್ ಸಹ ಒಂದು. ಈ ಕಟ್ಟಡವನ್ನು ಸುಮಾರು ಒಂದು ಎಕರೆ ಪ್ರದೇಶದಲ್ಲಿ, 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಅವ,ಉ ತಿಳಿಸಿದ್ದಾರೆ.
ಜೊತೆಗೆ ರಾಜ್ಯದ ಅಗ್ನಿಶಾಮಕ ದಳದಲ್ಲಿ ಖಾಲಿ ಇರುವ 2482 ಹುದ್ದೆಗಳಲ್ಲಿ, 1567 ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ನೇರ ನೇಮಕಾತಿ ನಡೆಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಅಲ್ಲದೆ ಬೈಂದೂರಿನ ಫೈರ್ ಸ್ಟೇಷನ್ಗೆ 14 ಮಂದಿ ತರಬೇತಿ ಪಡೆದಿರುವ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುವುದಾಗಿಯೂ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.