ನವದೆಹಲಿ: ಆರೆಸ್ಸೆಸ್ನ ಶಿಕ್ಷಣ ಸಂಸ್ಥೆ ವಿದ್ಯಾ ಭಾರತಿಯು ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನವನ್ನು ಸೆ. 11 ರಿಂದ ಆರಂಭ ಮಾಡುವುದಾಗಿ ಮಾಹಿತಿ ನೀಡಿದೆ. ಈ ಅಭಿಯಾನದ ಮೂಲಕ ಎನ್ಇಪಿಯ ಸುಧಾರಣಾ ವ್ಯಾಪ್ತಿ, ಪ್ರಮಾಣ ಮತ್ತು ಪ್ರಭಾವಗಳ ಬಗ್ಗೆ ಸಮಗ್ರ ಚರ್ಚೆ, ಹೊಸ ನೀತಿಯನ್ನು ಜನರಿಗೆ ಸರಿಯಾದ ರೀತಿಯಲ್ಲಿ ತಲುಪಿಸುವ ಕಾರ್ಯ ನಡೆಸಲಿರುವುದಾಗಿಯೂ ಸಂಸ್ಥೆ ತಿಳಿಸಿದೆ.
ಸೆ. 25 ರಿಂದ ಅಕ್ಟೋಬರ್ 2 ರ ವರೆಗೆ www.mynep.in ರಲ್ಲಿ ಆನ್ಲೈನ್ ಕಂಟೆಸ್ಟ್ ಸಹ ನಡೆಯಲಿದೆ. ಇದರಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತಹ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಈ ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ನಡೆಸಲು ಸಂಸ್ಥೆ ತೀರ್ಮಾನಿಸಿದ್ದು, 9-12 ನೇ ತರಗತಿ, ಪದವಿಪೂರ್ವ ಮತ್ತು ಸ್ನಾತಕೋತ್ತರ, ನಾಗರಿಕರು ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಸುವುದಾಗಿಯೂ ತಿಳಿಸಿದೆ.
ಭಾರತ ಕೇಂದ್ರಿತ ಶಿಕ್ಷಣ, ಸಮಗ್ರ ಶಿಕ್ಷಣ, ಜ್ಞಾನಾಧಾರಿತ ಸಮಾಜ ಮತ್ತು ಗುಣಮಟ್ಟದ ಶಿಕ್ಷಣ ಎಂಬ ನಾಲ್ಕು ಹಂತಗಳಲ್ಲಿ ಈ ಸ್ಪರ್ಧೆ ನಡೆಸಲಿದೆ. 13 ಭಾಷೆಗಳಲ್ಲಿ myNEP ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆ ಈ ಸಂಬಂಧ ಮಾಹಿತಿ ನೀಡಿದೆ. ಪ್ರತಿಯೊಬ್ಬ ಸ್ಪರ್ಧಿಗೂ ಪ್ರಮಾಣಪತ್ರಗಳನ್ನು ನೀಡುವುದಾಗಿಯೂ ತಿಳಿಸಿದೆ.
ಈ ಸ್ಪರ್ಧೆಯಲ್ಲಿ ಚಿತ್ರಕಲೆ, ಪ್ರಧಾನಿಗೆ ಪತ್ರ, ಭಾಷಣ ಬರೆಯುವುದು, ಪ್ರಬಂಧ ಬರೆಯುವುದು, ಕಿರುಚಿತ್ರ ತಯಾರಿ, ಡಿಜಿಟಲ್ ಡಿಸೈನಿಂಗ್, ಟ್ವಿಟ್ಟರ್ ಥ್ರೆಡ್ ಕಾಂಪೋಸಿಷನ್ ಮೊದಲಾದವುಗಳು ಇರಲಿದೆ. ಜೊತೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸಂವಾದಾತ್ಮಕ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಈ ಎಲ್ಲವುಗಳ ಫಲಿತಾಂಶ ಅಕ್ಟೋಬರ್ 5 ರಂದು ಹೊರಬೀಳಲಿದೆ. ಈ ಅಭಿಯಾನವನ್ನು ಮುನ್ನಡೆಸಲು ಎನ್ಇಪಿ ರಾಯಭಾರಿಗಳನ್ನೂ ನೇಮಕ ಮಾಡಲಾಗಿದೆ. ಈ ಎಲ್ಲಾ ಆನ್ಲೈನ್ ಸ್ಪರ್ಧೆಗಳನ್ನು ಅವರೇ ಮುನ್ನಡೆಸಲಿದ್ದಾರೆ. ಶಿಕ್ಷಣ ಸಂಸ್ಥೆಗಳು ಈ ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.
ಈ ಸಂಬಂಧ ಮಾಹಿತಿ ನೀಡಿರುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮ್ ಅರೌಕರ್, ಈ ಅಭಿಯಾನ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ನಾಗರಿಕರನ್ನು ಕೇಂದ್ರೀಕರಿಸಿ ರೂಪಿಸಲಾಗಿದೆ. ಇದಕ್ಕಾಗಿ ಸ್ಪರ್ಧಾ ಸರಣಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. myNEP ಸ್ಪರ್ಧೆ 13 ಭಾಷೆಗಳಲ್ಲಿ ನಡೆಯಲಿದೆ. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಉತ್ತಮ ಅನುಭವ ಸಿಗಲಿದೆ ಎಂದಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಓದಿ :
Vidya Bharati NEP Competition - English
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.