ನವದೆಹಲಿ: ರಾಷ್ಟ್ರದ ರಕ್ಷಣೆಯ ವಿಚಾರಕ್ಕೆ ಬಂದಾಗ ಭಾರತೀಯ ಸೇನೆ ಸದಾ ಮುಂದಿರುತ್ತದೆ. ಇಂತಹ ಧೈರ್ಯಶಾಲಿ ಯೋಧರ ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ಕಾರ್ಯಾಚರಣೆಗೆ ಪೂರಕವಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿಯೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತದ 74 ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ದೇಶದ ಎಲ್ಲಾ ಯೋಧರಿಗೆ, ಜನರಿಗೆ ಶುಭಾಶಯಗಳನ್ನು ಕೋರಿ ಬಳಿಕ ಮಾತನಾಡಿದ ಅವರು, ಭಾರತ ಯಾವುದೇ ರಾಷ್ಟ್ರದ ಮೇಲೆಯೂ ವಿಸ್ತರಣಾ ಮನೋಭಾವದಿಂದ ಯುದ್ಧ ಮಾಡಲು ಹೋಗುವುದಿಲ್ಲ. ಭಾರತ ಮಾನವತೆಯ ಸ್ನೇಹವನ್ನು ಗಳಿಸುವುದರಲ್ಲಿ ನಂಬಿಕೆ ಇರಿಸಿದೆಯೇ ಹೊರತು ಯುದ್ಧದಲ್ಲಲ್ಲ.ಇದರರ್ಥ ಭಾರತ ಯುದ್ಧ ಮಾಡುವುದಿಲ್ಲವೆಂದಲ್ಲ. ಬದಲಾಗಿ, ನಮ್ಮ ಮೇಲೆ ಆಕ್ರಮಣವೆಸಗಿದವರ ಹುಟ್ಟಡಗಿಸುವ ಕಲೆ ಭಾರತಕ್ಕೆ ಗೊತ್ತಿದೆ. ಇದು ಆತ್ಮರಕ್ಷಣೆಗಾಗಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತೀಯ ವಾಯುಸೇನೆ ಇತ್ತೀಚಿನ ವರೆಗೆ ಆಧುನಿಕ ಯುದ್ಧ ವಿಮಾನಗಳ ಕೊರತೆ ಇತ್ತು. ಆದರೆ ಪ್ರಧಾನಿ ಮೋದಿ ಅವರು ಸದ್ಯ ಐದು ರಫೇಲ್ ಯುದ್ಧ ವಿಮಾನಗಳನ್ನು ಅಂಬಾಲ ವಾಯುನೆಲೆಗೆ ನೀಡಿ ಮತ್ತಷ್ಟು ಹುರುಪು ತುಂಬಿದ್ದಾರೆ. ಜೊತೆಗೆ ಸೈನ್ಯಕ್ಕೆ ಅಗತ್ಯ ಮೂಲ ಸೌಕರ್ಯ, ಸ್ವಾತಂತ್ರ್ಯ ನೀಡುವ ಮೂಲಕ ಸಶಕ್ತವನ್ನಾಗಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ಅನುಮೋದಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಗಲ್ವಾನ್ ಸಂಘರ್ಷದಲ್ಲಿ ಮಡಿದ ಹುತಾತ್ಮ ಯೋಧರಿಗೆ ರಾಜನಾಥ್ ಸಿಂಗ್ ಗೌರವ ಸಲ್ಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.