ನವದೆಹಲಿ: ಕೊರೋನಾ ಸಂಕಷ್ಟದ ನಡುವೆಯೂ ದೇಶದಲ್ಲಿ ಇಂದು ಸ್ವಾತಂತ್ರ್ಯ ದಿನದ ಸಂಭ್ರಮ ಮನೆ ಮಾಡಿದೆ. 74 ನೇ ಸ್ವಾತಂತ್ರೋತ್ಸವದ ಈ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನಡೆಸಿ ,ಭಾರತದ ಸಮಸ್ತ ಜನರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಅವರು ದೇಶದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಜಾಗತಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕೊರೋನಾ ಲಸಿಕೆಯ ಬಗ್ಗೆಯೂ ಸುಳಿವು ನೀಡಿದ್ದು, ಮೂರು ಹಂತಗಳಲ್ಲಿ ಕೊರೋನಾ ಲಸಿಕೆಯನ್ನು ಪ್ರಯೋಗಕ್ಕೆ ಒಳಪಡಿಸಲಾಗುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಸ್ವಾವಲಂಬಿ ಆತ್ಮನಿರ್ಭರ ಭಾರತ ನಿರ್ಮಾಣದ ಬಗ್ಗೆಯೂ ಮಾತನಾಡಿರುವ ಮೋದಿ, ದೇಶವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ, ಅದಕ್ಕೆ ಉತ್ತೇಜನ ನೀಡುವ ಸಲುವಾಗಿ 100 ಕ್ಕೂ ಅಧಿಕ ರಕ್ಷಣಾ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಾಗಿರುವುದಾಗಿಯೂ ಅವರು ತಿಳಿಸಿದ್ದಾರೆ.
ಇನ್ನು ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ವರ್ಷದಲ್ಲಿ ಅನೇಕ ರೀತಿಯ ಬದಲಾವಣೆಗಳಾಗಿವೆ. ಇಲ್ಲಿನ ಮಹಿಳೆಯರು ಮತ್ತು ಜನ ಸಾಮಾನ್ಯರಿಗೆ ಅವರ ಹಕ್ಕುಗಳನ್ನು ಮರಳಿ ಪಡೆದ ಸಂತೋಷ ಸಿಕ್ಕಿದ್ದು, ಅಭಿವೃದ್ಧಿಯತ್ತಲೂ ಗಮನ ಹರಿಸುವಂತಾಗಿದೆ ಎಂದು ಹೇಳಿದ್ದಾರೆ.
ದೇಶದ ಗಡಿ ಸಮಸ್ಯೆಗಳ ಬಗೆಗೂ ಮಾತನಾಡಿರುವ ಪ್ರಧಾನಿ ಮೋದಿ, ಗಡಿ ಹಂಚಿಕೊಂಡ ರಾಷ್ಟ್ರಗಳಷ್ಟೇ ನೆರೆಯ ರಾಷ್ಟ್ರವಲ್ಲ. ಬದಲಾಗಿ ನಮ್ಮೊಂದಿಗೆ ಸ್ನೇಹದಿಂದಿರುವ, ಉತ್ತಮ ಬಾಂಧವ್ಯ ಹೊಂದಿರುವ ರಾಷ್ಟ್ರಗಳೂ ನೆರೆಯ ರಾಷ್ಟ್ರಗಳೇ ಆಗಿವೆ ಎಂದು ಹೇಳಿದ್ದಾರೆ. ಜೊತೆಗೆ ಗಡಿಯಲ್ಲಿ ಭಾರತದ ತಂಟೆಗೆ ಬರುತ್ತಿರುವವರಿಗೆ ತಕ್ಕ ಉತ್ತರವನ್ನು ಸೇನೆ ನೀಡುತ್ತಿದ್ದು, ಅವುಗಳನ್ನು ಮಟ್ಟ ಹಾಕಲು ದೇಶದ ವೀರ ಯೋಧರು ಸದಾ ಸನ್ನದ್ಧರಿದ್ದಾರೆ. ಆತಂಕವಾದ, ಉಗ್ರವಾದ, ವಿಸ್ತಾರವಾದ ಯಾವುದೇ ಇರಲಿ ಇವೆಲ್ಲವನ್ನೂ ಎದುರಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದೂ ಮೋದಿ ಶತ್ರುಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ, ಮಹಿಳಾ ಕಲ್ಯಾಣ, ದ್ವೀಪ ಪ್ರದೇಶಗಳ ಅಭಿವೃದ್ಧಿ, ಆತ್ಮನಿರ್ಭರ ಭಾರತ, ಕೃಷಿ ಕ್ಷೇತ್ರ, ಆರ್ಥಿಕ ಸ್ಥಿತಿಗತಿಗಳನ್ನು ಭದ್ರಗೊಳಿಸುವುದು ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿಗೆ ಪೂರಕವಾದ, ಜನಸ್ನೇಹಿ ಕ್ರಮಗಳ ಬಗ್ಗೆಯೂ ಮೋದಿ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ.
ಈ ಬಾರಿ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಅವರ 7ನೇ ವರ್ಷದ ಧ್ವಜಾರೋಹಣವಾಗಿದ್ದು, ಮುಂದಿನ ವರ್ಷದಲ್ಲಿ ಮತ್ತಷ್ಟು ಅಭಿವೃದ್ಧಿಯ ಬದಲಾವಣೆಗಳ ಜೊತೆಗೆ ಮತ್ತೆ ಸ್ವಾತಂತ್ರ್ಯ ದಿನವನ್ನು ಆಚರಿಸುವ ಭರವಸೆ, ಕನಸನ್ನೂ ಮೋದಿ ಜನರಲ್ಲಿ ಈ ಸಂದರ್ಭದಲ್ಲಿ ಬಿತ್ತಿದ್ದಾರೆ. ಆತ್ಮನಿರ್ಭರ ಭಾರತದ ಶಂಖನಾದ ದೇಶದಲ್ಲಿ ಈಗ ಮೊಳಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.