ಬ್ರಿಟಿಷರ ಆಡಳಿತದಿಂದ ಮುಕ್ತಿ ಹೊಂದಿದ ನಮ್ಮ ದೇಶ ಸ್ವತಂತ್ರವಾಗಿ ಉಸಿರಾಡಿ ಇಂದಿಗೆ 74 ವರ್ಷ. ಆಂಗ್ಲರ ಕಪಿಮುಷ್ಠಿಯಲ್ಲಿದ್ದ ದೇಶ ಅನೇಕ ಮಂದಗಾಮಿ, ತೀವ್ರಗಾಮಿ, ಅಹಿಂಸಾತ್ಮಕ ಹೋರಾಟಗಳ ಮೂಲಕ ಬಿಡುಗಡೆಗೊಂಡು ನಾವಿನ್ನು ಸ್ವತಂತ್ರರು ಎಂದು ಘೋಷಿಸಿಕೊಂಡ ಪರ್ವ ದಿನ. ಪರಕೀಯರ ದಾಸ್ಯದ ಸಂಕೋಲೆಯಲ್ಲಿ ಕಣ್ಣೀರಿಡುತ್ತಿದ್ದ ತಾಯಿ ಭಾರತಿಯನ್ನು ಸ್ವಾತಂತ್ರ್ಯಗೊಳಿಸಿ ಆಕೆಯ ಕಣ್ಣೀರೊರೆಸಿದ ಸುದಿನ. ಸರ್ವತಂತ್ರ ಸ್ವತಂತ್ರದ ಕಲ್ಪನೆಯ ಸ್ವಾತಂತ್ರ್ಯ, ಭಾರತೀಯರಾದ ನಮಗೆ ನಮ್ಮ ಹಿರಿಯರನೇಕರ ಹೋರಾಟದ ಫಲವಾಗಿ ದೊರೆತು 74 ವರುಷಗಳಾಗಿವೆ. ಈ ಸುಸಂದರ್ಭದ ಶುಭಾಷಯಗಳನ್ನು ತಿಳಿಸುತ್ತಾ…
ಭಾರತ 1947 ರಲ್ಲಿಯೇ ಪರಕೀಯರ ಆಡಳಿತದಿಂದ ಮುಕ್ತವಾಗಿದೆ. ಆದರೆ ಅವರ ಆಡಳಿತದಲ್ಲಿ ಭಾರತ ಕಳೆದುಕೊಂಡ ಎಲ್ಲಾ ನಷ್ಟಗಳನ್ನು ಭರಿಸಲು ಸಾಧ್ಯವಾಗಿದೆಯೇ ಎಂದು ಕೇಳಿದರೆ ಅದಕ್ಕುತ್ತರ ಇಲ್ಲ ಎಂಬುದೇ ಸರಿಯಾಗುತ್ತದೆ. ಏಕೆಂದರೆ ಸಂಪದ್ಭರಿತ ರಾಷ್ಟ್ರ ಭಾರತದಲ್ಲಿ ವ್ಯಾಪಾರ ವಹಿವಾಟು ನಡೆಸಲು ಬಂದ ಬ್ರಿಟಿಷರು ಇಲ್ಲಿನ ಸಂಪತ್ತಿನ ಜೊತೆಗೆ ಜನರ ಬುದ್ಧಿಶಕ್ತಿ, ಮುಗ್ಧತೆ, ನಂಬಿಕೆಗಳನ್ನೇ ಅಸ್ತ್ರವಾಗಿರಿಸಿಕೊಂಡು ವ್ಯಾಪಾರ ಬಿಟ್ಟು ಸಂಪೂರ್ಣ ದೇಶದ ಹಿಡಿತವನ್ನೇ ತಮ್ಮ ಕೈಯಲ್ಲಿಟ್ಟುಕೊಂಡವರು. ಇಲ್ಲಿನ ಜನರ ಧಾರ್ಮಿಕ ನಂಬಿಕೆಗಳೂ ಸೇರಿದಂತೆ ಇನ್ನಿತರ ನಂಬಿಕೆಗಳನ್ನು ಬಳಸಿಕೊಂಡು ಆ ಮೂಲಕವೇ ಒಡೆದಾಳುವ ನೀತಿಯನ್ನು ಅನುಸರಿಸಿಕೊಂಡು, ಇಲ್ಲಿನ ಜನರ ಬೆವರನ್ನು ದೋಚಿ ಕೊನೆಗೆ ನಮಗೇ ಮಾರಿ ಹಣ ಗಳಿಸುವುದನ್ನು ಕರಗತ ಮಾಡಿಕೊಂಡಿದ್ದವರು ಬ್ರಿಟಿಷರು.
ಎಲ್ಲಿ ಒಗ್ಗಟ್ಟಿರುತ್ತದೆಯೋ ಅಲ್ಲಿ ಪರಕೀಯ ಕುತಂತ್ರಿಗಳ ಬೇಳೆ ಬೇಯದು. ಈ ನೀತಿಯನ್ನು ಅರಿತ ಬ್ರಿಟಿಷರು ಧರ್ಮದ ಆಧಾರದಲ್ಲಿ ಜನರನ್ನು ಒಡೆದರು. ಇದರ ಫಲವೇ ಅಖಂಡ ಭಾರತ ಎರಡು ಹೋಳಾಗಿ ಭಾರತ-ಪಾಕಿಸ್ಥಾನಗಳಾಗಿರುವುದು. ಇಲ್ಲಿನ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕಾದರೆ ಜನರ ಮನಸ್ಸುಗಳನ್ನು ಒಡೆಯಬೇಕು ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದವರು ಬ್ರಿಟಿಷರು. ಅದಕ್ಕಾಗಿ ಭಾರತೀಯ ಶಿಕ್ಷಣ ಪದ್ಧತಿಯ ಬದಲು ಪಾಶ್ಚಾತ್ಯ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಕ್ರೈಸ್ತ ಮತಕ್ಕೆ ಮತಾಂತರ ಪ್ರಕ್ರಿಯೆಗಳನ್ನು ನಡೆಸಿದರು. ಅವರ ಬಹುಕಾಲದ ಪ್ರಯತ್ನದ ಫಲವಾಗಿ ಭಾರತ, ಭಾರತೀಯರು ಅವರ ಕೈವಶವಾದರು. ಭಾರತದ ಆಡಳಿತ ಆಂಗ್ಲರ ಪಾಲಾಯಿತು.
ಈ ನೀತಿಯ ವಿರುದ್ಧ ಭಾರತದ ಅನೇಕ ಮಹಾತ್ಮರ ಹೋರಾಟದ ಫಲವಾಗಿ ನಾವು ಸ್ವತಂತ್ರರಾದೆವು. ಆದರೆ ಇಲ್ಲಿಂದ ಲೂಟಿ ಮಾಡಿದ ಸಂಪತ್ತು ಮತ್ತೆ ಭಾರತ ಸೇರಲೇ ಇಲ್ಲ. ಇಲ್ಲಿನ ಹಳೆಯ ಪರಂಪರೆ, ಸಂಸ್ಕೃತಿಯ ಮೇಲೆಯೂ ಆಂಗ್ಲರ ಹೆಜ್ಜೆ ಗುರುತು ಇಂದಿಗೂ ಹಾಗೆಯೇ ಇದೆ. ಭಾರತದ ಶಿಕ್ಷಣ ಪದ್ಧತಿಯ ಮೇಲೆಯೂ ಇಂಗ್ಲಿಷರ ಪ್ರಭಾವ ಅಪಾರ. ಇಂದು ಇಂಗ್ಲಿಷ್ ಇಲ್ಲದೆ ಶಿಕ್ಷಣವೇ ಇಲ್ಲವೇನೋ ಎಂಬಲ್ಲಿಯವರೆಗಿನ ಸ್ಥಿತಿ ನಮ್ಮದಾಗಿದೆ.
ಇದೆಲ್ಲವೂ ಹಾಗಿರಲಿ. ಸ್ವಾತಂತ್ರ್ಯ ಸಿಕ್ಕ 74 ವರ್ಷಗಳ ಬಳಿಕವೂ ನಾವು ಯೋಚಿಸಬೇಕಾದ ಹಲವು ಸಂಗತಿಗಳಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರಲ್ಲಿ ಒಂದು ಒಗ್ಗಟ್ಟಿತ್ತು. ಯಾವ ಬೇಧಭಾವವೂ ಇಲ್ಲದೆ ಎಲ್ಲರೊಂದು ಎಂಬ ಭಾವನೆಯೂ ಇತ್ತು. ಸ್ವಾತಂತ್ರ್ಯದ ಬಳಿಕ ನಮ್ಮಲ್ಲಿ ಧಾರ್ಮಿಕ, ವೈಚಾರಿಕ ಹೀಗೆ ಹತ್ತು ಹಲವು ವಿಚಾರಗಳು ಅಸಹನೆಯ ಮಟ್ಟಕ್ಕೆ ಬೆಳೆದು ಬಿಟ್ಟಿವೆ. ಯಾವ ರಾಷ್ಟ್ರ ಎಲ್ಲರೂ ಒಂದೆ ಎಂಬ ಪರಿಕಲ್ಪನೆಯ ಭದ್ರ ಅಡಿಪಾಯ ಹೊಂದಿತ್ತೋ, ಅದೇ ರಾಷ್ಟ್ರ ಆಂತರಿಕ ಶತ್ರುಗಳ ಕುತಂತ್ರಕ್ಕೂ ನೋವನುಭವಿಸುವಂತಾಗಿದೆ. ದೇಶಭಕ್ತರ ಗುಂಪು ಒಂದು ಕಡೆಯಿಂದ ರಾಷ್ಟ್ರವನ್ನು ಉಳಿಸಿ, ಅಭಿವೃದ್ಧಿ ಪಥದಲ್ಲಿ ಸಾಗಿಸುವ ಸದುದ್ದೇಶದಿಂದ ಸಾಗುತ್ತಿದ್ದರೆ, ಹಣ್ಣಿನೊಳಗಿನ ಹುಳಗಳು ಹೇಗೆ ದೇಶವನ್ನು ಒಡೆಯುವುದು, ಜನರ ನಡುವೆ ಬೆಂಕಿ ಹಚ್ಚುವುದು ಎಂಬುದನ್ನು ಯೋಚಿಸಿ, ಅದನ್ನು ಸಾಧಿಸುವಲ್ಲಿ ಪ್ರಯತ್ನ ನಡೆಸುತ್ತಿರುವುದು, ಅದಕ್ಕಾಗಿ ಬಾಹ್ಯ ಶತ್ರುಗಳ ಜೊತೆಗೆ ಕೈ ಜೋಡಿಸುವುದು ನಮ್ಮ ದುರಂತ.
ಹಾಗಾದರೆ ಸಿಕ್ಕ ಸ್ವಾತಂತ್ರ್ಯಕ್ಕೆ ಅರ್ಥವೇನು?. ಈ ಪ್ರಶ್ನೆ ಎಲ್ಲರಲ್ಲೂ ಹುಟ್ಟಬಹುದು. ಇಲ್ಲಿ ನಾವು ಅರಿಯಬೇಕಾಗಿರುವುದು ನಮಗೆ ಬ್ರಿಟಿಷರಿಂದ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಅದು ನೂರು ಪ್ರತಿಶತಃ ನಿಜ. ಆದರೆ ಬ್ರಿಟಿಷ್ ಮನಸ್ಥಿತಿಯಿಂದಲ್ಲ. ಒಡೆದಾಳುವ ನೀತಿ ಇಂದು ನಮ್ಮ ಕೆಲವು ರಾಜಕೀಯ ಪಕ್ಷಗಳಲ್ಲಿಯೇ ನಾವು ಕಾಣಬಹುದಾಗಿ. ರಾಜಕೀಯ ನಾಯಕರು ಜಾತಿ, ಧರ್ಮದ ಆಧಾರದಲ್ಲಿ ಜನರ ನಡುವೆ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುವುದನ್ನೂ ನಾವು ಕಾಣಬಹುದು. ಜೊತೆಗೆ ಯಾರೋ ಒಬ್ಬ ನಾಯಕ ನನಗೆ ದೇಶ ಮೊದಲು, ದೇಶದ ಅಭಿವೃದ್ಧಿ ಮೊದಲು ಎಂದು ಕೆಲಸ ಮಾಡುತ್ತಿದ್ದರೆ, ಆತನನ್ನು ವಿರೋಧಿಸಿ ಅಭಿವೃದ್ಧಿಗೆ ಅಡ್ಡಗಾಲು ಹಾಕುವಂತಹ ನಿಸ್ಸೀಮ ನಾಯಕರೂ ನಮ್ಮಲ್ಲಿ ಇನ್ನೂ ಇದ್ದಾರೆ ಎಂಬುದು ನಾಚಿಗೇಡಿನ ವಿಚಾರ.
ಹೌದು, ನಾವು ಬದಲಾಗಬೇಕು. ನಮ್ಮ ವೈಚಾರಿಕತೆ, ಧಾರ್ಮಿಕತೆ ಏನೇ ಇರಲಿ. ರಾಷ್ಟ್ರದ ವಿಚಾರವಾಗಿ ಬಂದಾಗ ನಮ್ಮಲ್ಲಿ ಒಗ್ಗಟ್ಟಿನ ಮನೋಭಾವ ಬೇಕು. ಹೀಗಾದಲ್ಲಿ ಯಾವ ಬಾಹ್ಯ ಶತ್ರುವೂ ನಮ್ಮ ವಿರುದ್ಧ ಉಸಿರೆತ್ತಲಾರ. ನಮ್ಮ ರಾಜಕೀಯ ವೈಷಮ್ಯಗಳೇನೇ ಇರಬಹುದು, ಆದರೆ ದೇಶ, ಜನರ ವಿಚಾರ ಬಂದಾಗ ನಮ್ಮ ವೈರಿಯೇ ಉತ್ತಮ ಕಾರ್ಯ ಮಾಡಿದರೆ ಅವನನ್ನು ಒಪ್ಪಿಕೊಳ್ಳುವ, ಅವನಿಗೆ ಬೆಂಬಲ ನೀಡುವ ಮನಸ್ಸು ನಮ್ಮದಾಗಬೇಕು.
ಭಾರತ ಒಂದು ಮನೆ ಇದ್ದಂತೆ. ಇಲ್ಲಿರುವ ಎಲ್ಲರೂ ಸೋದರ ಸಂಬಂಧಿಗಳೇ. ನಮ್ಮೊಳಗಿನ ತಿಕ್ಕಾಟಗಳು ಹೊರಗಿನ ಇನ್ನಾರಿಗೋ ಬೇಳೆ ಬೇಯಿಸಿಕೊಳ್ಳುವ ಬೆಂಕಿಯಾಗಿ ಪರಿವರ್ತನೆಯಾಗಲು ಬಿಡದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಇದು ನಮ್ಮ ಇಂದಿನ ಆದ್ಯತೆಯೂ ಹೌದು. ಎಲ್ಲರನ್ನೊಳಗೊಂಡ ಅಭಿವೃದ್ಧಿಗೂ ಇದೇ ಪೂರಕ ದಾರಿ ಎನ್ನುವುದರಲ್ಲೂ ಯಾವುದೇ ಸಂದೇಹವಿಲ್ಲ.
ನಮ್ಮ ಸ್ಥಿತಿ ‘ಏನು ಮಾಡಲಿ ಮನೆಯ ಮಕ್ಕಳೆ ಮಲಗಿ ನಿದ್ರಿಸುತಿದ್ದರೆ’ ಎಂಬಂತಾಗಬಾರದು. ಕಳ್ಳ ಬೆಕ್ಕು ಬಂದು ಹಾಲು ಕುಡಿದ ಮೇಲೆ ಶಪಿಸುತ್ತಾ ಕೂರುವುದಕ್ಕಿಂತ, ಮೊದಲೇ ಜಾಗೃತರಾದರೆ ಒಳ್ಳೆಯದಲ್ಲವೇ. ನಮ್ಮ ಒಳ ಜಗಳಗಳ ಸಂದರ್ಭ ಬಳಸಿಕೊಂಡು ಭಯೋತ್ಪಾದಕ ಶಕ್ತಿಗಳಾದ ಕಳ್ಳ ಬೆಕ್ಕುಗಳು ನಮ್ಮ ಪಾಲಿನ ಹಾಲು ಕದ್ದು ಕುಡಿಯುವ ಮುನ್ನ ಜಾಗೃತರಾಗೋಣ.
ಕಳೆದ 5-6 ವರ್ಷಗಳಿಂದ ನಿಜವಾದ ಸ್ವಾತಂತ್ರ್ಯದ ಅರ್ಥ ನಮಗೆ ಅರಿವಾಗುತ್ತಿದ್ದು, ಅಂತಹ ಅಭಿವೃದ್ಧಿಯ ಕನಸು ಹೊತ್ತ ನಾಯಕರಿಗೆ ನಮ್ಮ ಬೆಂಬಲ ನೀಡೋಣ. ಆಗ ನಾವು ಪಡೆದ ಸ್ವಾತಂತ್ರ್ಯ ಅರ್ಥಪೂರ್ಣವಾಗುತ್ತದೆ. ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸಾಗುತ್ತದೆ. ಇದರಲ್ಲಿ ಯಾವ ಸಂಶಯವೂ ಬೇಡ. ಈ ಸ್ವಾತಂತ್ರ್ಯದ ಸಂದರ್ಭದಲ್ಲಿ ಭಾರತದಲ್ಲಿ ಜನಿಸಿದ ನಾವೆಲ್ಲರೂ ಒಂದೇ ಎಂಬ ಭಾವವನ್ನು ಎಲ್ಲರೂ ಹೊಂದುವಂತಾಗಲಿ. ದೇಶ ನಮ್ಮದು, ಹಾಗಾಗಿ ಎಲ್ಲಾ ದೇಶವಾಸಿಗಳಲ್ಲಿಯೂ ರಾಷ್ಟ್ರ ಮೊದಲು ,ಉಳಿದೆಲ್ಲವೂ ಮತ್ತೆ ಎಂಬ ಭಾವನೆ ಹುಟ್ಟಲಿ ಎಂಬ ಆಶಯ ಹುಟ್ಟುವಂತಾಗಲಿ ಎಂದು ತಾಯಿ ಭಾರತಿಯನ್ನು ಪ್ರಾರ್ಥಿಸೋಣ.
ಮನಸ್ಸಿನ ಪಾರತಂತ್ರ್ಯದ ಗೋಡೆ ಒಡೆದು ಸ್ವಾತಂತ್ರ್ಯ ಗಳಿಸಿಕೊಳ್ಳೋಣ ಎಂಬ ಸದಾಶಯದ ಜೊತೆಗೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರಿಗೂ ಗೌರವ ನಮನಗಳನ್ನು ಸಮರ್ಪಿಸುತ್ತಾ, ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭ ಕಾಮನೆಗಳು.
ಭುವನ ಬಾಬು✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.