ತಿರುವನಂತಪುರ: ಪ್ರತಿಕೂಲ ಹವಾಮಾನದ ನಡುವೆಯೂ ಭೀಕರ ಧರೆ ಕುಸಿತಗಳಿಂದ ಕಂಗಾಲಾಗಿರುವ ಇಡುಕ್ಕಿಯ ರಾಜಮಲ ಪೆಟ್ಟಿಮುಡಿಯಲ್ಲಿ ಸೇವಾ ಭಾರತಿಯ ಸ್ವಯಂಸೇವಕರ ತಂಡ ಮಣ್ಣಿನಡಿ ಸಿಲುಕಿರುವವರಲ್ಲಿ ಯಾರಾದರೂ ಬದುಕುಳಿದಿದ್ದರೆ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿತ್ತು. ಆದರೆ ಅವರ ಈ ಕಾರ್ಯಕ್ಕೆ ಕೇರಳದ ಎಡಚರ ಸರ್ಕಾರ ಮತ್ತು ಮಂತ್ರಿಗಳು ವಿರೋಧಗಳನ್ನು ವ್ಯಕ್ತಪಡಿಸಿದ್ದರೂ, ಅವರ ತಂಡವನ್ನು ಘಟನಾ ಸ್ಥಳದಿಂದ 20 ಕಿ.ಮೀ. ದೂರದಲ್ಲೇ ತಡೆಯುವ ಪ್ರಯತ್ನ ನಡೆಸಿದ್ದರೂ ಪರ್ಯಾಯ ಮಾರ್ಗವನ್ನು ಹುಡುಕಿ, ಆ ದಾರಿಯಲ್ಲಿಯೇ ಭೂಕುಸಿತದ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ 100 ಕ್ಕೂ ಅಧಿಕ ಸೇವಾ ಭಾರತಿ ತಂಡದ ಸದಸ್ಯರು.
ಈ ದುರಂತ ಸಂಭವಿಸಿದ ಸ್ಥಳಕ್ಕೆ ಎಡರಂಗದ ನಾಯಕರು ಮತ್ತು ಅಧಿಕಾರಿಗಳು ಭೇಟಿ ನೀಡಿದ ಬಳಿಕ ಇಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದ್ದ ಸೇವಾ ಭಾರತಿಯ ಸದಸ್ಯರಿಗೆ ಕಾರ್ಯಾಚರಣೆ ನಿಲ್ಲಿಸುವಂತೆ ಸೂಚಿಸಲಾಗಿದೆ. ಅಲ್ಲಿದ್ದ ಪೊಲೀಸರನ್ನು ಬಳಸಿಕೊಂಡು ಈ ಹೋರಾಟವನ್ನು ತಡೆಯುವ ಎಲ್ಲಾ ಪ್ರಯತ್ನಗಳನ್ನೂ ನಡೆಸಿದ್ದಾರೆ. ಹಿಂದಿನ ದಿನ ನಡೆದ ರಕ್ಷಣಾ ಕಾರ್ಯದಲ್ಲಿಯೂ ಸರ್ಕಾರದ ವಿಪತ್ತು ನಿರ್ವಹಣಾ ದಳ, ಅಗ್ನಿಶಾಮಕ ದಳದ ಜೊತೆಗೆ ಅಂತಹ ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆ ಸೇವಾ ಭಾರತಿಯ ಸ್ವಯಂ ಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ದುರಂತ ನಡೆದ ಮೊದಲ ದಿನವೇ ಸೇವಾಭಾರತಿಯ 20 ಜನರ ತಂಡ ಪೆಟ್ಟಿಮುಡಿಗೆ ರಕ್ಷಣಾ ಕಾರ್ಯ ನಡೆಸಲು ತೆರಳುವ ಮೂಲಕ ಆಪತ್ತಿನ ಸಂದರ್ಭದಲ್ಲಿ ರಾಷ್ಟ್ರ ರಕ್ಷಣೆಗೆ ಸದಾ ಸಿದ್ಧವಿದೆ ಎಂದು ತೋರಿಸಿಕೊಟ್ಟಿದೆ.
ಗುರುವಾರ ರಾತ್ರಿ ಹೊತ್ತಿನಲ್ಲಿ ಈ ಅಪಾಯ ಬಂದೊರಗಿದ್ದು ಶುಕ್ರವಾರ ಮುಂಜಾನೆಯಷ್ಟೇ ಜಗತ್ತಿಗೆ ತಿಳಿದಿದೆ. ಈ ಸಂದರ್ಭದಲ್ಲಿ ಕುಸಿದ ಮಣ್ಣಿನಡಿಯಲ್ಲಿ ಮೃತಪಟ್ಟ ಶವಗಳನ್ನು ಹೊರತೆಗೆಯುವಲ್ಲಿಯೂ ಸೇವಾ ಭಾರತಿ ಕೆಲಸ ಮಾಡಿದೆ. ಜೊತೆಗೆ 15 ಕಿಮೀ ದೂರದ ಆಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ, ಅವುಗಳಿಗೆ ಅಂತ್ಯಸಂಸ್ಕಾರ ಮಾಡುವಲ್ಲಿಯ ವರೆಗಿನ ಪ್ರತಿಯೊಂದು ಕಾರ್ಯಗಳಲ್ಲಿಯೂ ಸೇವಾ ಭಾರತಿ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದೆ.
ಎಡರಂಗದ ನಾಯಕರೊಬ್ಬರು ಈ ಪ್ರಾಕೃತಿಕ ಅವಘಡದಲ್ಲಿ ಯಾರೊಬ್ಬರೂ ಜೀವಂತವಾಗಿಲ್ಲ ಎಂದು ಹೇಳಿಕೆ ನೀಡುತ್ತಾರೆ. ಆದರೆ ಸೇವಾ ಭಾರತಿ ಒಂದು ವೇಳೆ ಆ ಪ್ರದೇಶದಲ್ಲಿ ಓರ್ವನ ಪ್ರಾಣವಾದರೂ ಉಳಿದಿದ್ದರೆ ಅದನ್ನು ರಕ್ಷಣೆ ಮಾಡಿಯೇ ತೀರುತ್ತೇವೆ ಎಂಬಂತೆ ಕಾರ್ಯಾಚರಣೆಯಲ್ಲಿ ನಿಸ್ವಾರ್ಥವಾಗಿ, ತಮ್ಮ ಜೀವವನ್ನೂ ಲೆಕ್ಕಿಸದೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇಂತಹ ಸಮಾಜಮುಖಿ ಸಂಘಟನೆಯ ವಿರುದ್ಧ ಎಲ್ಡಿಎಫ್ನ ಕನ್ವೀನರ್ ಎ. ವಿಜಯರಾಘವನ್ ಅವರು ಹೇಳಿಕೆ ನೀಡಿ, ಸೇವಾಭಾರತಿ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸುವ ಮೂಲಕ ತಮ್ಮ ನೀಚತನ ಪ್ರದರ್ಶಿಸಿದ್ದಾರೆ. ಆದರೆ ಈ ಯಾವ ವಿರೋಧಗಳಿಗೂ ತಲೆಕೊಡದ ಸೇವಾಭಾರತಿಯ ಸ್ವಯಂಸೇವಕರು ‘ಸೇವೆಯೇ ಪರಮ ಧರ್ಮ’ ಎಂಬಂತೆ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಕರ್ತವ್ಯನಿಷ್ಠೆ ಮೆರೆಯುವ ಮೂಲಕ ಮಾದರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.