ಮಥುರಾ: ಐದು ಶತಕಗಳ ವಿವಾದಕ್ಕೆ ಇತಿಶ್ರೀ ಬಿದ್ದು, ರಾಮ ಜನ್ಮಭೂಮಿ ರಾಮಲಲ್ಲಾನಿಗೇ ಸೇರಿದ್ದು ಎಂದು ಸುಪ್ರೀಂಕೋರ್ಟ್ ನ್ಯಾಯ ನೀಡಿದೆ. ಅದರಂತೆ ಸ್ಥಳದಲ್ಲಿ ಮಂದಿರ ನಿರ್ಮಾಣ ಕಾರ್ಯಕ್ಕೂ ಪ್ರಧಾನಿ ಮೋದಿ ಅವರು ಭೂಮಿಪೂಜೆಯ ಮೂಲಕ ನಿನ್ನೆಯಷ್ಟೇ ಚಾಲನೆ ನೀಡಿದ್ದಾರೆ. ರಾಮ ಜನ್ಮಭೂಮಿಯ ಬಳಿಕ ಇದೀಗ ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದಂತೆ ಶ್ರೀ ಕೃಷ್ಣ ಜನ್ಮಭೂಮಿ ನಿರ್ಮಾಣ್ ನ್ಯಾಸ್ ಅನ್ನು 14 ರಾಜ್ಯಗಳ 80 ಸಂತರನ್ನೊಳಗೊಂಡಂತೆ ಸ್ಥಾಪಿಸಲಾಗಿದೆ.
ಈ ಸಂಬಂಧ ಮಾತನಾಡಿರುವ ಟ್ರಸ್ಟ್ನ ಅಧ್ಯಕ್ಷರಾದ ಆಚಾರ್ಯ ದೇವಮುರಾರಿ ಬಾಪು, ವೃಂದಾವನದ 11 ಸಂತರು ಈ ಟ್ರಸ್ಟ್ನ ಸದಸ್ಯರಾಗಿದ್ದು, 23 ಜುಲೈನ ‘ಹರಿಯಾಲಿ ತೀಜ್’ ಸಂದರ್ಭದಲ್ಲಿ ಈ ಟ್ರಸ್ಟ್ ಅನ್ನು ನೋಂದಾವಣೆ ಮಾಡಲಾಗಿರುವುದಾಗಿಯೂ ತಿಳಿಸಿದ್ದಾರೆ. ಕೃಷ್ಣ ಜನ್ಮಭೂಮಿ ವಿಮೋಚನೆಗಾಗಿ ಶೀಘ್ರದಲ್ಲೇ ಸಂತರು ಮತ್ತು ದಾರ್ಶನಿಕರ ಸಂಪರ್ಕವನ್ನೂ ಮಾಡಲಾಗುತ್ತದೆ. ಜೊತೆಗೆ ಸಹಿ ಅಭಿಯಾನವನ್ನು ಆರಂಭಿಸುವುದಾಗಿಯೂ ಟ್ರಸ್ಟ್ ಮಾಹಿತಿ ನೀಡಿದೆ.
ಫೆಬ್ರವರಿ ಸಂದರ್ಭದಲ್ಲಿಯೇ ಸಹಿ ಅಭಿಯಾನ ಆರಂಭಿಸಲಾಗಿದ್ದು, ದೇಶವ್ಯಾಪಿ ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಮುಂದುವರೆಯುವುದು ಸಾಧ್ಯವಾಗಲಿಲ್ಲ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಆಂದೋಲನ ಆರಂಭಿಸುವ ಬಗ್ಗೆಯೂ ಚಿಂತನೆಗಳು ನಡೆಯುತ್ತಿರುವುದಾಗಿ ಟ್ರಸ್ಟ್ ತಿಳಿಸಿದೆ. ಕೃಷ್ಣ ಜನ್ಮಭೂಮಿಯ ಸಮೀಪದಲ್ಲಿರುವ ಶಾಹಿ ಈದ್ಗಾವೇ ಜನ್ಮಭೂಮಿಯ ನಿಜವಾದ ವಿವಾದವಾಗಿದ್ದು, ಈ ವಿವಾದವನ್ನು ಬಗೆಹರಿಸಿ ಕೃಷ್ಣ ಜನ್ಮಭೂಮಿ ಮಥುರಾವನ್ನು ಸ್ವತಂತ್ರಗೊಳಿಸುವ ನಿಟ್ಟಿನಲ್ಲಿ ಈ ನ್ಯಾಸವನ್ನು ಆರಂಭ ಮಾಡಲಾಗಿದೆ ಎಂದೂ ಟ್ರಸ್ಟ್ ಮಾಹಿತಿ ನೀಡಿದೆ. ಮಸೀದಿಯ ಸಮೀಪದಲ್ಲಿರುವ ನಾಲ್ಕೂವರೆ ಎಕರೆ ಪ್ರದೇಶವನ್ನು ದೇವಾಲಯ ಈಗಾಗಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೂ ಬಳಕೆ ಮಾಡುತ್ತಿದೆ ಎಂದೂ ಸಮಿತಿ ಮಾಹಿತಿ ನೀಡಿದೆ.
1992 ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಮಥುರಾ, ಕಾಶಿ ಗಳನ್ನೂ ಸ್ವತಂತ್ರಗೊಳಿಸುವುದಾಗಿ ವಿಶ್ವ ಹಿಂದೂ ಪರಿಷತ್ ಚಿಂತನೆ ನಡೆಸಿತ್ತು. ಆಗಿನ ನರಸಿಂಹ ರಾವ್ ಸರ್ಕಾರ ಪೂಜಾ ಸ್ಥಳಗಳ ಕಾಯ್ದೆ 1991 ನ್ನು ಅಂಗೀಕರಿಸಿದ್ದು, ಇದರಲ್ಲಿ ಬೇರೆ ಧರ್ಮಗಳ ಪೂಜಾಸ್ಥಳಗಳನ್ನು ಆಕ್ರಮಿಸಿಕೊಳ್ಳುವಂತಿಲ್ಲ ಎಂದು ತಿಳಿಸಲಾಗಿದೆ ಎಂದೂ ಟ್ರಸ್ಟ್ ಹೇಳಿದೆ. ಪೂಜಾ ಸ್ಥಳಗಳ ಪರಿವರ್ತನೆಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನೂ ವಿಧಿಸಲಾಗುವುದಾಗಿ ಈ ಕಾಯ್ದೆ ತಿಳಿಸುತ್ತದೆ ಎಂದು ಟ್ರಸ್ಟ್ ಹೇಳಿದೆ. ಸದ್ಯ ಈ ಎಲ್ಲಾ ಅಡೆತಡೆಗಳನ್ನೂ ಮಥುರಾ ಕೃಷ್ಣ ಜನ್ಮಭೂಮಿ ಎದುರಿಸಬೇಕಾಗಿದ್ದು, ಏನೇ ಬಂದರೂ ಎದುರಿಸುವ ದೃಢ ಸಂಕಲ್ಪವನ್ನು ಮಾಡಿರುವುದಾಗಿ ಟ್ರಸ್ಟ್ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.