ಇಟಾನಗರ: ಭಾರತದ ಕುಗ್ರಾಮ ಎಂದೇ ಪರಿಗಣಿತವಾಗಿರುವ ಅರುಣಾಚಲ ಪ್ರದೇಶದ ಚಂಗ್ಲಾಂಗ್ ಜಿಲ್ಲೆಯ ವಿಜಯ ನಗರಕ್ಕೆ ಇದೀಗ ಬಿಎಸ್ಎನ್ಎಲ್ 2ಜಿ ಸಂಪರ್ಕ ಸೇವೆಯನ್ನು ಒದಗಿಸಲಾಗಿದೆ. ಆಗಸ್ಟ್ 1 ರಿಂದ ತೊಡಗಿದಂತೆ ಬಿಎಸ್ಎನ್ಎಲ್ ಈ ಸಂಪರ್ಕ ಸೇವೆಯನ್ನು ವಿಜಯ ನಗರದ ಜನರಿಗೆ ದೊರೆಯುವಂತೆ ಮಾಡಿದೆ ಎಂದು ಇಲ್ಲಿನ ಸ್ಥಳೀಯಾಡಳಿತ ಮಾಹಿತಿ ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಪೆಮಾ ಖಂಡು, ವಿಜಯ ನಗರವು ಅರುಣಾಚಲ ಪ್ರದೇಶದ ಒಂದು ಸುಂದರವಾದ ಸ್ಥಳವಾಗಿದೆ. ಇಂಡೋ-ಮಯನ್ಮಾರ್ ಗಡಿ ಪ್ರದೇಶದಲ್ಲಿರುವ ಈ ಹಳ್ಳಿಗೆ ಮೊಬೈಲ್ ನೆಟ್ವರ್ಕ್ ಒದಗಿಸಿರುವುದು ಸಂತೋಷವನ್ನು ತಂದುಕೊಟ್ಟಿದೆ. ಇದಕ್ಕಾಗಿ ನಾನು ಸ್ಥಳೀಯಾಡಳಿತ ಮತ್ತು ಬಿಎಸ್ಎನ್ಎಲ್ ಸಂಸ್ಥೆಗೆ ಧನ್ಯವಾದ ಸಮರ್ಪಿಸುವುದಾಗಿಯೂ ತಿಳಿಸಿದ್ದಾರೆ.
ವಿಜಯನಗರವು ಭಾರತ ಮತ್ತು ಮಯನ್ಮಾರ್ ಗಡಿಯಲ್ಲಿರುವ ಒಂದು ಪುಟ್ಟ ಹಳ್ಳಿಯಾಗಿದ್ದು ಸುತ್ತಲೂ ದಟ್ಟ ಅರಣ್ಯ ಪ್ರದೇಶದಿಂದ ಆವೃತವಾಗಿದೆ. ವಾಹನ ಸಂಚರಿಸುವ ರಸ್ತೆಯಿಂದ ಈ ಹಳ್ಳಿ ಹಮಸುಮಾರು 157 ಕಿ.ಮೀ. ದೂರದಲ್ಲಿದ್ದು ಇಂತಹ ಪ್ರದೇಶಗಳಿಗೆ 2ಜಿ ಸಂಪರ್ಕ ವ್ಯವಸ್ಥೆಯನ್ನು ಬಿಎಸ್ಎನ್ಎಲ್ ಸಂಸ್ಥೆ ಇದೀಗ ಒದಗಿಸಿಕೊಡುವ ಮೂಲಕ ಸಾಧನೆ ಮೆರೆದಿದೆ. ಯಾವುದೇ ಸಂವಹನ ವ್ಯವಸ್ಥೆಯನ್ನು ಹೊಂದಿರದ ಹಳ್ಳಿಯೊಂದು ಈಗ ಮೊಬೈಲ್ ನೆಟ್ವರ್ಕ್ ಸೇವೆ ಒದಗಿಸಿಕೊಳ್ಳುವ ಮೂಲಕ ಸಂವಹನವನ್ನು ಸಾಧ್ಯವಾಗಿಸಿದೆ.
ಮುಖ್ಯ ಪಟ್ಟಣದಿಂದ ಏಳು ದಿನಗಳ ಚಾರಣ ಮಾಡಿದರೆ ಈ ಹಳ್ಳಿಯನ್ನು ತಲುಪಬಹುದಾಗಿದೆ. ಅಥವಾ ಅಸ್ಸಾಂನ ಮೋಹನ್ಬರಿಯಿಂದ ಇಲ್ಲಿಗೆ ಹೆಲಿಕಾಪ್ಟರ್ ಮೂಲಕ ತೆರಳಬಹುದಾಗಿದೆ. ಇಂತಹ ಹಳ್ಳಿಗೆ 2ಜಿ ಸಂಪರ್ಕ ಕಲ್ಪಿಸಲು ಪೂರಕವಾಗಿ ಬೇಕಾದ ಅಗತ್ಯ ವಸ್ತುಗಳನ್ನು ಸರ್ಕಾರ ಮತ್ತು ಭಾರತೀಯ ವಾಯುಪಡೆಯ ಸಹಾಯದೊಂದಿಗೆ ತೆಗೆದುಕೊಂಡು ಹೋಗಲಾಗಿದೆ. ಈ ಸಂವಹನ ಸಂಪರ್ಕ ಸಾಧಿಸುವ ಕಾರ್ಯದ ನಡುವೆ ಸಂಸ್ಥೆಗೆ ಅನೇಕ ಸವಾಲು, ಸಂಕಷ್ಟಗಳು ಎದುರಾಗಿರುವುದಾಗಿಯೂ ಬಿಎಸ್ಎನ್ಎಲ್ ಅಧಿಕಾರಿಗಳು ತಿಳಿಸಿದ್ದು, ಸರ್ಕಾರದ ಸಹಾಯದೊಂದಿಗೆ ಈ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಂವಹನ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.