ನವದೆಹಲಿ: ಕಳೆದ 28 ವರ್ಷಗಳ ಬಳಿಕ ನರೇಂದ್ರ ಮೋದಿ ಅವರು ಇದೇ ಮೊದಲ ಭಾರಿಗೆ ಅಯೋಧ್ಯೆಗೆ ಭೇಟಿ ನೀಡಿದ್ದು, ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಆ ಮೂಲಕ ಮೂರು ಪ್ರಥಮಗಳ ದಾಖಲೆಗಳನ್ನು ನಿರ್ಮಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ಮೊದಲನೆಯದಾಗಿ ರಾಮ ಜನ್ಮಭೂಮಿಗೆ ಭೇಟಿ ನೀಡಿದ ದೇಶದ ಮೊದಲ ಪ್ರಧಾನಿ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಅಯೋಧ್ಯೆಯ ಹನುಮಾನ್ ಗರ್ಹಿಗೆ ತೆರಳಿ, ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಯನ್ನೂ ಗಳಿಸಿಕೊಂಡಿದ್ದಾರೆ. ಹಾಗೆಯೇ ದೇಶದ ಸಂಸ್ಕೃತಿಯ, ಆಚಾರ ವಿಚಾರದ ಪ್ರತಿಬಿಂಬವೆನಿಸಿದ ಮಂದಿರವೊಂದರ ಭೂಮಿ ಪೂಜೆಯಲ್ಲಿ ಭಾಗವಹಿಸಿದ ಪ್ರಥಮ ಪ್ರಧಾನಿ ಎಂಬ ಗರಿಮೆಯನ್ನೂ ಪಡೆದುಕೊಂಡಿದ್ದಾರೆ.
1992 ರಲ್ಲಿ ಮುರಳಿ ಮನೋಹರ್ ಜೋಷಿ ಅವರ ಜೊತೆಗೆ ಅಯೋಧ್ಯೆಗೆ ಹೋಗಿ ರಾಮಲಲ್ಲಾನಿಗೆ ನಮಿಸಿ ಬಂದಿದ್ದ ಮೋದಿ, ಆ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಿ, ಕೋಟ್ಯಂತರ ಭಾರತೀಯರ ಕನಸಿಗೆ, ಆಶಯಗಳಿಗೆ ಜೀವ ನೀಡುವ ಕೆಲಸವನ್ನು ಮಾಡಿದ್ದಾರೆ.
1991 ರಲ್ಲಿ ಆಗಿನ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಷಿ ಅವರೊಂದಿಗೆ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು 1992 ರ ಜನವರಿ 18 ರಂದು ಅಯೋಧ್ಯೆ ತಲುಪಿದ್ದರು. ಈ ಯಾತ್ರೆ ಜಮ್ಮು-ಕಾಶ್ಮೀರದ 370 ನೇ ವಿಧಿಯನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಯನ್ನು ಆಗಿನ ಸರ್ಕಾರದ ಮುಂದಿರಿಸಲು ಮಾಡಿದ ಯಾತ್ರೆಯಾಗಿತ್ತು. ಆ ಯಾತ್ರೆಯ ಆಶಯದಂತೆ ಕಣಿವೆ ರಾಜ್ಯದಲ್ಲಿ 370 ನೇ ವಿಧಿ ರದ್ದಾಗಿ ಇಂದಿಗೆ ಒಂದು ವರ್ಷವಾಗಿದೆ. ಜೊತೆಗೆ ರಾಮ ಮಂದಿರ ನಿರ್ಮಾಣಕ್ಕೂ ಇಂದು ಅಧಿಕೃತ ಆರಂಭ ಸಿಕ್ಕಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.