ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆಯಲಿರುವ ಶಿಲಾನ್ಯಾಸ ಸಮಾರಂಭದ ಪ್ರಯುಕ್ತ ಭಕ್ತರಿಗೆ ವಿತರಿಸಲು ತಯಾರಿಸಲಾಗುವ ಲಡ್ಡುಗಳಲ್ಲಿ ಕರ್ನಾಟಕದ ನಂದಿನಿ ತುಪ್ಪವನ್ನು ಬಳಕೆ ಮಾಡಲಾಗಿದೆ. ಆ ಮೂಲಕ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಯ ಐತಿಹಾಸಿಕ ಕ್ಷಣಗಳಲ್ಲಿ ರಾಜ್ಯವೂ ಪಾಲು ಪಡೆದಂತಾಗಿದೆ.
ಅಯೋಧ್ಯೆಯ ಭೂಮಿಪೂಜೆಗೆ ಪ್ರಸಕ್ತವಾದ ಘಳಿಗೆಯನ್ನು, ದಿನಾಂಕವನ್ನು ಬೆಳಗಾವಿಯ ಪಂಡಿತ ಎನ್. ಆರ್. ವಿಜಯೇಂದ್ರ ಶರ್ಮಾ ಅವರು ನೀಡುವ ಮೂಲಕ ರಾಜ್ಯಕ್ಕೆ ಈಗಾಗಲೇ ಒಂದು ಹೆಮ್ಮೆ ಮೂಡಿತ್ತು. ಸದ್ಯ ಭೂಮಿಪೂಜೆಯ ಸಂದರ್ಭದಲ್ಲಿ ನೀಡಲಾಗುವ ಪ್ರಸಾದ ರೂಪದ ಲಡ್ಡುವಿನಲ್ಲಿ ಬಳಕೆ ಮಾಡಲಾದ ನಂದಿನಿ ತುಪ್ಪದ ಮೂಲಕವೂ ರಾಜ್ಯ ಮತ್ತೊಂದು ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. ಸುಮಾರು 1.5 ಲಕ್ಷ ಲಡ್ಡುಗಳನ್ನು ತಯಾರಿಸಲು ಬೇಕಾದ 20,000 ಕೆ.ಜಿ. ತುಪ್ಪವನ್ನು ಕರ್ನಾಟಕ ಮಿಲ್ಕ್ ಫೆಡರೇಶನ್ ಬ್ರಾಂಡ್ನ ನಂದಿನಿ ತುಪ್ಪವನ್ನು ಲಡ್ಡು ತಯಾರಿಸುವ ಹನುಮಾನ್ ಟ್ರಸ್ಟ್ಗೆ ನೀಡಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 15 ಕೆಜಿ ಗಳ ಟಿನ್ಗಳಲ್ಲಿ ಟ್ರಕ್ ಮೂಲಕ ಇದನ್ನು ಕಳುಹಿಸಲಾಗಿದೆ ಎಂದೂ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ತಿಳಿಸಿದ್ದಾರೆ.
ಬೆಂಗಳೂರು ಅಯೋಧ್ಯೆಯಿಂದ 1,800 ಕಿಮೀ ದೂರದಲ್ಲಿದೆ. ಆದರೂ ಅಲ್ಲಿ ವಿತರಿಸುವ ಲಡ್ಡುಗಳಲ್ಲಿ ರಾಜ್ಯದ ನಂದಿನಿ ತುಪ್ಪದ ಘಮವಿದೆ. ಹೇಗೆ ಎಂದು ಆಶ್ಚರ್ಯವಾಗುತ್ತಿದೆಯೇ. ಪಾಟ್ನಾದ ಹನುಮಾನ್ ದೇವಾಲಯದಲ್ಲಿ ಕಳೆದ ಕೆಲವು ವರ್ಷಗಳಿಂದ ರಾಜ್ಯದ ನಂದಿನಿ ತುಪ್ಪವನ್ನು ಬಳಸಿ ಲಡ್ಡುಗಳನ್ನು ತಯಾರಿಸಲಾಗುತ್ತಿದೆ. ಇದರ ಇನ್ನೊಂದು ಶಾಖೆ ಅಯೋಧ್ಯೆಯಲ್ಲಿದ್ದು, ಈ ಶಾಖೆ ಇಂದು ನೀಡಲಾಗುವ ಲಡ್ಡುಗಳನ್ನು ತಯಾರಿಸಿದೆ. ಈ ದೇವಾಲಯದ ವ್ಯವಸ್ಥಾಪಕ ಶೇಷಾದ್ರಿ ಆರ್. ಅವರು ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯವರು. ಇವರು ಹಿಂದೆ ತಿರುಪತಿಯಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಅಲ್ಲಿಯೂ ನಂದಿನಿ ತುಪ್ಪ ಬಳಕೆ ಮಾಡುತ್ತಿದ್ದು, ಇದೀಗ ಹನುಮಾನ್ ದೇಗುಲದಲ್ಲಿಯೂ ನಂದಿನಿ ತುಪ್ಪವನ್ನೇ ಬಳಕೆ ಮಾಡುತ್ತಾರೆ. ಶೇಷಾದ್ರಿ ಅವರ ಕಾರಣದಿಂದಲೇ ಇಂದಿನ ಲಡ್ಡುಗಳಲ್ಲೂ ನಂದಿನಿ ಘಮಘಮಿಸುವಂತಾಗಿದೆ.
ಇನ್ನು ಕೆಎಂಎಫ್ ನಂದಿನಿ ತುಪ್ಪ ತಾಜಾ ಹಸುವಿನ ಹಾಲಿನಿಂದಲೇ ತಯಾರಿಸಲಾಗಿದ್ದು, ಇದು ಲಡ್ಡುಗಳ ರುಚಿ ಹೆಚ್ಚಿಸುತ್ತದೆ. ಆದ್ದರಿಂದ ಇದನ್ನೇ ಬಳಕೆ ಮಾಡಲಾಗಿದೆ ಎಂದು ಶೇಷಾದ್ರಿ ತಿಳಿಸಿದ್ದಾರೆ. ಜೊತೆಗೆ 60 ಮಂದಿ 1.5 ಲಕ್ಷ ಲಡ್ಡುಗಳನ್ನು ತಯಾರಿಸಿದ್ದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಕೆಎಂಎಫ್ 6 ತಿಂಗಳುಗಳ ಕಾಲ ತಿರುಪತಿಯ ಲಡ್ಡು ತಯಾರಿಕೆಗೆ 1,400 ಟನ್ ನಂದಿನಿ ತುಪ್ಪವನ್ನು ಒದಗಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.