ನವದೆಹಲಿ: ಸಂಸ್ಕೃತ ಪ್ರಪಂಚದ ಅತ್ಯಂತ ಹಳೆಯ ಲಿಖಿತ ಭಾಷೆಯಾಗಿದ್ದು, ಇದು ಮೌಖಿಕ ಸಂಪ್ರದಾಯದ ಬೇರುಗಳನ್ನು ಹೊಂದಿದೆ ಎಂದು ನವದೆಹಲಿಯ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ (ಕೇಂದ್ರ ವಿಶ್ವವಿದ್ಯಾಲಯ) ಉಪಕುಲಪತಿ ರಮೇಶ್ ಕುಮಾರ್ ಪಾಂಡೆ ಅವರು ತಿಳಿಸಿದ್ದಾರೆ.
ವಿಶ್ವ ಸಂಸ್ಕೃತ ದಿನದ ಅಂಗವಾಗಿ ಮಾಧ್ಯಮವೊಂದು ನಡೆಸಿದ ಸಂದರ್ಶನದ ವೇಳೆ, ಆಧುನಿಕ ದಿನಗಳಲ್ಲಿ ಸಂಸ್ಕೃತದ ಪ್ರಸ್ತುತತೆ ಮತ್ತು ಉದ್ಯೋಗಾವಕಾಶ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಅವರು ಸಂಸ್ಕೃತದ ಹಿರಿಮೆಯನ್ನು ತೆರೆದಿಟ್ಟಿದ್ದಾರೆ.
ಪ್ರಾಚೀನ ಕಾಲದ ಋಷಿಮುನಿಗಳು ತಪಸ್ಸಿನ ಮೂಲಕ ಅರಿತುಕೊಂಡು, ಕಲಿತುಕೊಂಡು ಸಂಸ್ಕೃತವನ್ನು ತಮ್ಮ ಶಿಷ್ಯರಿಗೆ ತಿಳಿಸಿಕೊಡುವ ಕೆಲಸವನ್ನು ಮಾಡಿದ್ದಾರೆ. ಆ ಕಾರಣದಿಂದ ಸಂಸ್ಕೃತವನ್ನು ಶೃತಿ ಎಂದು ಕರೆಯಲಾಗುತ್ತಿದ್ದು, ಎಲ್ಲಾ ಭಾರತೀಯ ಭಾಷೆಗಳ ಮೂಲ ಸಂಸ್ಕೃತವೇ ಆಗಿದೆ ಎಂದೂ ಅವರು ತಿಳಿಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆಯ ನಡುವೆ ಅವಿನಾಭಾವ ಸಂಬಂಧವಿದೆ. ಸಂಸ್ಕೃತ ಭಾಷೆ ಆಲೋಚನೆ, ಅಭಿವ್ಯಕ್ತಿ ಮತ್ತು ಬುದ್ಧಿವಂತಿಕೆಯ ಆಧಾರವಾಗಿದೆ. ಆದ್ದರಿಂದ ಸಂಸ್ಕೃತವನ್ನು ಭಾರತೀಯ ಸಂಸ್ಕೃತಿಯ ಬೇರು ಎನ್ನಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಸ್ಕೃತ ಶಿಕ್ಷಣ ಜೀವನ ಮೌಲ್ಯಗಳ ಪರಿಚಯ ಮಾಡುತ್ತದೆ. ಆತ್ಮ ನಿರ್ಭರ ಭಾರತದ ಕನಸನ್ನು ನನಸಾಗಿಸುವಲ್ಲಿಯೂ ಸಂಸ್ಕೃತ ಮಹತ್ವದ ಪಾತ್ರ ವಹಿಸಲಿದೆ. ಸಂಸ್ಕೃತ ಶಿಕ್ಷಣ ಪಡೆದವರಿಗೆ ಅಧ್ಯಾಪನ ವೃತ್ತಿ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿಯೂ ಉದ್ಯೋಗ ಪಡೆಯಲು ಅವಕಾಶಗಳಿರುವುದಾಗಿ ಅವರು ತಿಳಿಸಿದ್ದಾರೆ. ಜೊತೆಗೆ ಸಂಸ್ಕೃತ ಪತ್ರಿಕೆ, ಪುಸ್ತಕಗಳನ್ನು ಮುದ್ರಿಸುವ ಸಂಸ್ಥೆಗಳಲ್ಲಿಯೂ ಸಂಸ್ಕೃತ ಕಲಿತವರಿಗೆ ಅವಕಾಶವಿದೆ. ಕೆಲವೊಂದು ಮಾಧ್ಯಮಗಳಲ್ಲಿಯೂ ಇತ್ತೀಚಿನ ದಿನಗಳಲ್ಲಿ ಸಂಸ್ಕೃತ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದು ಅಲ್ಲೆಲ್ಲಾ ಉದ್ಯೋಗಕ್ಕೆ ಅವಕಾಶಗಳಿದೆ ಎಂದು ಹೇಳಿದ್ದಾರೆ. ಇಂದು ವಿದೇಶಗಳಲ್ಲಿಯೂ ಸಂಸ್ಕೃತ ಪೀಠ, ಅಧ್ಯಯನ ಕೇಂದ್ರಗಳನ್ನು ತೆರೆಯಲಾಗಿದ್ದು, ವಿಶ್ವ ಮಟ್ಟದಲ್ಲಿ ಸಂಸ್ಕೃತ ಮಹತ್ವದ ಸ್ಥಾನ ಪಡೆಯುತ್ತಿದೆ ಎಂದು ಪಾಂಡೆ ಹೇಳಿದ್ದಾರೆ.
ಈ ಸಂದರ್ಭದಲ್ಲಿ 2020ರ ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯನ್ನು ಸ್ವಾಗತಿಸಿರುವ ಅವರು, ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಈ ಎಲ್ಲಾ ನೀತಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದಲ್ಲಿ ಭಾರತ ಜಾಗತಿಕ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವಾಗಿ ಗುರುತಿಸಲ್ಪಡುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.