ಬೆಂಗಳೂರು: ಇತ್ತೀಚೆಗೆ ಚೀನಾದೊಂದಿಗೆ ನಡೆದ ಲಡಾಖ್ನ ಗಾಲ್ವಾನ್ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಬೆಂಗಳೂರು ನಗರದ ಪಾಮ್ ಹೆವನ್ ಅಪಾರ್ಟ್ಮೆಂಟ್ ನಿವಾಸಿಗಳು ತಮ್ಮ ಕಾರಿಡಾರ್ಗೆ ಕರ್ನಲ್ ಸಂತೋಷ್ ಬಾಬು ಎಂದು ಹೆಸರಿಟ್ಟಿದ್ದಾರೆ. ಜೊತೆಗೆ ಬೃಹತ್ ಗಾತ್ರದ ಬ್ಯಾನರ್ ಒಂದರಲ್ಲಿ ಬಲಿದಾನಗೈದ ಯೋಧರ ಚಿತ್ರಗಳನ್ನು ಬರೆದು ತಮ್ಮ ಅಪಾರ್ಟ್ಮೆಂಟ್ನ ಕಾರಿಡಾರ್ನಲ್ಲಿ ಇರಿಸಿದ್ದಾರೆ.
ಪಾಮ್ ಹೆವನ್ ಅಪಾರ್ಟ್ಮೆಂಟ್ನ ನಿವಾಸಿಗಳು, ಅಜಿತ್ ಶೆಟ್ಟಿ ಹೇರಂಜೆ ಅವರ ನೇತೃತ್ವದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ 70 ಅಡಿ ಅಗಲದ ಬ್ಯಾನರ್ನಲ್ಲಿ ಹುತಾತ್ಮರಾದ ಯೋಧರ ಚಿತ್ರಗಳನ್ನು ಹಚ್ಚಿ, ತಮ್ಮ ಅಪಾರ್ಟ್ಮೆಂಟ್ನಲ್ಲಿ ಹಾಕಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ಹುತಾತ್ಮರಾದ ಯೋಧ ಕರ್ನಲ್ ಸಂತೋಷ್ ಬಾಬು ಅವರ ಗೌರವಾರ್ಥ ತಮ್ಮ ಅಪಾರ್ಟ್ಮೆಂಟ್ನ ಕಾರಿಡಾರ್ಗೂ ಅವರ ಹೆಸರನ್ನು ಇರಿಸಿದ್ದಾರೆ.
ಕರ್ನಲ್ ಸಂತೋಷ್ ಬಾಬು ಅವರು 16 ಬಿಹಾರ್ ರೆಜಿಮೆಂಟ್ನ ಕಮಾಂಡಿಂಗ್ ಅಧಿಕಾರಿಯಾಗಿದ್ದರು. ಅವರು ಗಾಲ್ವಾನ್ ಗಲಭೆಯ ಸಂದರ್ಭದಲ್ಲಿ ದೇಶ ರಕ್ಷಣೆಗಾಗಿ ಪ್ರಾಣ ತೆತ್ತಿದ್ದಾರೆ. ಇವರ ಉದಾತ್ತ ಸೇವೆಗೆ ಗೌರವ ಸಲ್ಲಿಸುವ ಸಲುವಾಗಿ ಅಪಾರ್ಟ್ಮೆಂಟ್ ಕಾರಿಡಾರ್ಗೆ ಅವರ ಹೆಸರಿಡಲಾಗಿದೆ. ಅಪಾರ್ಟ್ಮೆಂಟ್ ಕಾರಿಡಾರ್ ಒಳಗೆ ಈ ರೀತಿಯಲ್ಲಿ ಬೃಹತ್ ಗಾತ್ರದ ಬ್ಯಾನರ್ ಅಳವಡಿಕೆ ದೇಶದಲ್ಲಿ ಇದೇ ಮೊದಲು ಎಂದೂ ಹೇಳಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಅಜಿತ್ ಶೆಟ್ಟಿ ಹೇರಂಜೆ ಅವರು, ಹುತಾತ್ಮ ಯೋಧರನ್ನು ನೆನಪಿಸಿಕೊಳ್ಳುವ ಕಾರ್ಯ ಕೇವಲ ವಿಶೇಷ ದಿನಗಳಿಗಷ್ಟೇ ಸೀಮಿತವಾಗುತ್ತಿದೆ. ಇದು ಸರಿಯಲ್ಲ. ಅವರನ್ನು ಪ್ರತಿನಿತ್ಯ ನೆನಪಿಸಿಕೊಳ್ಳುವ ಕೆಲಸವಾಗಬೇಕಿದೆ. ಯೋಧರ ಪರಿಶ್ರಮ ಮತ್ತು ತ್ಯಾಗವೇ ನಮ್ಮೆಲ್ಲರ ಸುರಕ್ಷತೆಗೆ ಕಾರಣವಾಗಿದೆ. ಅದಕ್ಕಾಗಿ ಈ ಕಾರಿಡಾರ್ಗೆ ಸಂತೋಷ್ ಬಾಬು ಅವರ ಹೆಸರು ಇರಿಸಲಾಗಿದೆ. ಜೊತೆಗೆ ಹುತಾತ್ಮ ಯೋಧರ ಮಾಹಿತಿಯ ಬ್ಯಾನರ್ ಅಳವಡಿಸಲಾಗಿದೆ. ಇದರಿಂದಾಗಿ ಪ್ರತಿನಿತ್ಯ ನಾವವರನ್ನು ಜೀವಂತವಾಗಿರಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.