ಲಕ್ನೋ: ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ವಿದ್ಯಾರ್ಥಿಗಳು ಈ ಬಾರಿಯ ರಕ್ಷಾಬಂಧನವನ್ನು ವಿಶೇಷವಾಗಿ ಆಚರಿಸುವ ಮೂಲಕ ಸುದ್ದಿಯಾಗಿದ್ದಾರೆ. ಮರಗಳಿಗೆ ರಕ್ಷೆ ಕಟ್ಟುವ ಮೂಲಕ ‘ಪರಿಸರ ಉಳಿಸಿ, ಮರಗಿಡಗಳನ್ನು ಉಳಿಸಿ, ಜೀವ ಉಳಿಸಿ’ ಎಂಬ ಘೋಷಣೆಯಡಿಯಲ್ಲಿ ಪರಿಸರ ಸಂರಕ್ಷಣೆಯ ಆಶಯವನ್ನಿಟ್ಟುಕೊಂಡು ಈ ಬಾರಿಯ ರಕ್ಷಾಬಂಧನವನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಆ ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿ ಶಿಲ್ಪಿ ಶೈನಿ, ರಕ್ಷಾಬಂಧನದ ಈ ಶುಭ ಸಂದರ್ಭವನ್ನು ಬಳಸಿಕೊಂಡು ಪರಿಸರ ರಕ್ಷಣೆಯ ಬಗ್ಗೆ ಜನರಲ್ಲಿ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಅದಕ್ಕಾಗಿ ಮರಗಳಿಗೆ ರಕ್ಷೆ ಕಟ್ಟುತ್ತಿದ್ದೇವೆ. ಆ ಮೂಲಕ ಪರಿಸರ ಸಂರಕ್ಷಣೆ, ಮರಗಳನ್ನು ಉಳಿಸುವ ಜೊತೆಗೆ ಜೀವ ಜೀವನವನ್ನು ಉಳಿಸಿಕೊಳ್ಳೋಣ ಎಂಬುದಾಗಿ ಜನರಿಗೆ ತಿಳುವಳಿಕೆ ಮೂಡಿಸುತ್ತಿರುವುದಾಗಿಯೂ ತಿಳಿಸಿದ್ದಾರೆ. ಜೊತೆಗೆ ನಾವು ಪ್ರಕೃತಿಯಿಂದ, ಮರಗಳಿಂದ ಯಾವೆಲ್ಲ ರೀತಿಯಲ್ಲಿ ಅನುಕೂಲಗಳನ್ನು ಪಡೆಯುತ್ತಿದ್ದೇವೆ, ನಮ್ಮ ಬದುಕಿಗೆ ಅವುಗಳು ಎಷ್ಟು ಮುಖ್ಯ ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಇನ್ನು ಈ ಅಭಿಯಾನದ ಬಗ್ಗೆ ಮಾತನಾಡಿರುವ ಮತ್ತೋರ್ವ ವಿದ್ಯಾರ್ಥಿನಿ ಪುಷ್ಪಾಂಜಲಿ ಸಿಂಗ್, ಜನಸಂಖ್ಯೆ ಹೆಚ್ಚಾದಂತೆ ಮರ ಗಿಡಗಳನ್ನು ನಾಶಗೊಳಿಸುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ನಮ್ಮ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ಮರಗಿಡಗಳನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ. ರಕ್ಷಾಬಂಧನ ರಕ್ಷಣೆಯ ಭರವಸೆಯನ್ನು ನೀಡುವುದರ ಸಂಕೇತವಾಗಿದ್ದು, ಮರಗಿಡಗಳ ರಕ್ಷಣೆಗೂ ನಾವು ಬದ್ಧರಾಗಿದ್ದೇವೆ ಎಂದು ಮರಗಳಿಗೆ ರಕ್ಷೆ ಕಟ್ಟುತ್ತಿದ್ದೇವೆ. ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ನುಡಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.