ಲಕ್ನೋ: ಭಾರತದ ಬಹುಕೋಟಿ ಜನರ ಅಯೋಧ್ಯೆಯ ರಾಮ ಮಂದಿರದ ಕನಸು ಇನ್ನೇನು ಸಾಕಾರಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇಂತಹ ಒಂದು ಮಹತ್ವದ ಘಟನೆಗೆ ಅಯೋಧ್ಯೆ ಸಾಕ್ಷಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಭರದಿಂದ ನಡೆಸಲಾರಂಭಿಸಿದೆ. ರಾಮ ಮಂದಿರ ನಿರ್ಮಾಣ ಇಡೀ ಅಯೋಧ್ಯಾ ನಗರಕ್ಕೇ ಒಂದು ಹೊಸ ಆಯಾಮವನ್ನು ತೋರಿಸಿಕೊಟ್ಟಿದೆ ಎನ್ನಬಹುದು.
ಈ ಭೂಮಿಪೂಜೆಯ ಸಂದರ್ಭದಲ್ಲಿ ಮೋದಿ ಅವರು ಸುಮಾರು 487.91 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆಯನ್ನೂ ನೀಡಲಿದ್ದಾರೆ. ಆ ಮೂಲಕ ಉತ್ತರ ಪ್ರದೇಶದ ಸರ್ವತೋಮುಖ ಬೆಳವಣಿಗೆಗೂ ಅಡಿಪಾಯ ಹಾಕಲಿದ್ದಾರೆ. ಸದ್ಯ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ಮೂಲಕ ದೇವಾಲಯಗಳ ಪಟ್ಟಣ ಅಭಿವೃದ್ಧಿಯ ವಿಚಾರದಲ್ಲಿ ಮತ್ತಷ್ಟು ಮುನ್ನೆಲೆಗೆ ಬರಲಿದೆ. ರಾಮ ಮಂದಿರದ ನೀಲ ನಕ್ಷೆಯ ಜೊತೆಗೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿಯೂ ರೂಪುರೇಶೆಗಳನ್ನು ಸರ್ಕಾರ ಈಗಾಗಲೇ ಸಿದ್ಧಪಡಿಸಿದೆ.
ಉತ್ತರ ಪ್ರದೇಶದಲ್ಲಿ 2017 ರಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಅನೇಕ ಅಭಿವೃದ್ಧಿ ಕಾರ್ಯಗಳು ಮುನ್ನೆಲೆಗೆ ಬಂದಿವೆ. ಫೈಜಾಬಾದ್ಗೆ ಅಯೋಧ್ಯೆ ಎಂದು ಹೆಸರಿಸಿ, ಅದನ್ನು ಪುರಸಭೆಯಾಗಿ ಪರಿವರ್ತಿಸಲಾಯಿತು. ಅಯೋಧ್ಯೆ ನಗರದ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಖುದ್ದು ಮುಖ್ಯಮಂತ್ರಿ ಯೋಗಿ ಅವರೇ ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂಬುದೂ ಗಮನಾರ್ಹ ವಿಚಾರ.
ಕಳೆದ ಬಾರಿ ದೀಪಾವಳಿಯ ಸಂದರ್ಭದಲ್ಲಿ ಸರಯೂ ತೀರದಲ್ಲಿ ಸಾವಿರಾರು ದೀಪಗಳನ್ನು ಉರಿಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ ಕೀರ್ತಿ ಉತ್ತರ ಪ್ರದೇಶದ್ದು. ಈಗಾಗಲೇ ಅಯೋಧ್ಯೆಯಲ್ಲಿ ಸುಮಾರು 350 ಕೋಟಿ ರೂ. ಗಳ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣವಾಗಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ 640 ಕೋಟಿ ರೂ. ಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಶ್ರೀ ರಾಮನ ಪ್ರತಿಮೆ, ಆಧುನೀಕರಣಗೊಂಡ ಅಯೋಧ್ಯೆಯ ನಿರ್ಮಾಣವಾಗಲಿದೆ.
ಇನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮನ ಪ್ರತಿಮೆ 221 ಮೀ -38 ಮೀ. ಎತ್ತರವಿರಲಿದ್ದು, ಗುಜರಾತ್ನ ಏಕತಾ ಪ್ರತಿಮೆಗಿಂತಲೂ ಎತ್ತರವಾಗಿರಲಿದೆ. ಈ ಪ್ರತಿಮೆಯು ಶ್ರೀ ರಾಮ ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿದಿರುವ ರೂಪದಲ್ಲಿರಲಿದೆ. ದೇವಾಲಯದ ಕೊಂಚ ದೂರದಲ್ಲಿ ಈ ಪ್ರತಿಮೆ ನಿರ್ಮಾಣವಾಗಲಿದೆ.
500 ಎಕರೆ ವಿಸ್ತೀರ್ಣದಲ್ಲಿ ನವ್ಯ ಅಯೋಧ್ಯೆ ನಿರ್ಮಾಣಕ್ಕಾಗಿ ಸರ್ಕಾರ ರೂಪುರೇಶೆಗಳನ್ನು ಸಿದ್ಧಪಡಿಸಿದೆ. ಸುಮಾರು 200 ಕೋಟಿ ರೂ. ಗಳನ್ನು ಬಳಸಿಕೊಂಡು ನಗರದ ಮಣ್ಣು ಪರೀಕ್ಷೆ, ವಿಂಡ್ ಟ್ಯುನಲ್ ಟೆಸ್ಟ್, ಡಿಸೈನ್ ಡೆವಲಪ್ಮೆಂಟ್, ಡಿಪಿಆರ್ ಪ್ರಿಪರೇಶನ್ ಮಾಡಲಿದೆ. 1200 ಕೋಟಿ ರೂ. ಗಳ ಯೋಜನೆಯಲ್ಲಿ ಅಯೋಧ್ಯೆಯಿಂದ ಫೈಜಾಬಾದ್ ವರೆಗೂ ಅಭಿವೃದ್ಧಿ ಕೆಲಸಗಳನ್ನು ಮಾಡಲಿದೆ.
ಈ ನವ್ಯ ಅಯೋಧ್ಯೆಯ ಮಂದಿರದಲ್ಲಿ ರಾಮನ ವಿಗ್ರಹಗಳು, ರಾಮನ ಕಥೆಗಳನ್ನು ತಿಳಿಸುವ ‘ಕಥಾಕುಂಚ’ ಗಳ ನಿರ್ಮಾಣವೂ ಆಗಲಿದೆ. ಸರಯೂ ತೀರದಲ್ಲಿ ರಾಮನ ಜೀವನವನ್ನು ಸಾರುವ 125 ಕ್ಕೂ ಹೆಚ್ಚು ಚಿತ್ರಗಳನ್ನು ಚಿತ್ರಿಸಲಾಗುವುದಾಗಿಯೂ ಸರ್ಕಾರ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.