ನವದೆಹಲಿ: ತ್ರಿವರ್ಣ ಧ್ವಜ ಭಾರತದ ಹೆಮ್ಮೆಯ ಪ್ರತೀಕ. ಭಾರತೀಯರ ನರನಾಡಿಗಳಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸುವ ಶಕ್ತಿ ತ್ರಿವರ್ಣ ಧ್ವಜಕ್ಕಿದೆ. ತ್ರಿವರ್ಣ ಧ್ವಜದ ಘನತೆಯನ್ನು ಮುಗಿಲೆತ್ತರಕ್ಕೆ ಹಾರಿಸುವುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿರುತ್ತದೆ. ಅಂತಹ ಆಕರ್ಷಕ ಧ್ವಜವನ್ನು ವಿನ್ಯಾಸಪಡಿಸಿದವರು ಪಿಂಗಳಿ ವೆಂಕಯ್ಯ.
ಭಾರತದ ರಾಷ್ಟ್ರ ಧ್ವಜದ ವಿನ್ಯಾಸಕಾರ ಪಿಂಗಳಿ ವೆಂಕಯ್ಯ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. 1876 ಆಗಸ್ಟ್ 2ರಂದು ಇವರು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದರು.
ಪಿಂಗಳಿ ವೆಂಕಯ್ಯ ಅವರು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಮತ್ತು ಭಾರತ ದೇಶದ ಧ್ವಜವನ್ನು ವಿನ್ಯಾಸಗೊಳಿಸಿದವರು. ಇವರ ತಂದೆ ಹನುಮಂತರಾಯುಡು, ಇವರ ತಾಯಿಯ ಹೆಸರು ವೆಂಕಟರತ್ನಮ್ಮ. ಪ್ರಾಧಮಿಕ ವಿದ್ಯಾಭ್ಯಾಸವನ್ನು ಚಲ್ಲಪಲ್ಲಿಯಲ್ಲಿ ಮತ್ತು ಮಚಿಲೀಪಟ್ನಂನ ಹಿಂದು ಶಾಲೆಯಲ್ಲಿ ಮುಗಿಸಿದ ನಂತರ ಇವರು ಹೆಚ್ಚಿನ ಶಿಕ್ಷಣಕ್ಕಾಗಿ ಕೊಲೊಂಬೊಗೆ ತೆರಳಿದರು.
ಭಾರತಕ್ಕೆ ಹಿಂದಿರುಗಿದ ನಂತರ ಇವರು ರೈಲ್ವೇ ಸಿಬ್ಬಂದಿಯಾಗಿ ಉದ್ಯೋಗ ಮಾಡಿದರು. ದೇಶಭಕ್ತಿಯನ್ನು ತುಂಬಿಕೊಂಡಿದ್ದ ಇವರಿಗೆ ಒಂದು ಶಾಶ್ವತ ಕೆಲಸದಲ್ಲಿ ನೆಲೆಗೊಳ್ಳುವುದಕ್ಕೆ ಇಷ್ಟವಿರಲಿಲ್ಲ, ಸತ್ಯಾನ್ವೇಷಿಯಾಗಿದ್ದ ಇವರು ಲಾಹೋರಿನ ಆಂಗ್ಲೋ-ವೈದಿಕ ಕಲಾ ಶಾಲೆಯಲ್ಲಿ ಇತಿಹಾಸ, ಸಂಸ್ಕೃತ ಮುಂತಾದ ವಿಷಯಗಳ ಬಗ್ಗೆ ಸಂಶೋಧನೆ ಮಾಡಿದರು. ಭೂವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರಾಗಿದ್ದ ಇವರು ಅದೇ ವಿಷಯದಲ್ಲಿ ಪದವಿ ಪಡೆದರು.
ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು 5 ವರ್ಷಗಳ ಕಾಲ ಅಧ್ಯಯನ ಮಾಡಿ, ಕೊನೆಗೆ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣಧ್ವಜವನ್ನು ವಿನ್ಯಾಸಗೊಳಿಸಿದರು. ಪಿಂಗಳಿ ಅವರು ವಿನ್ಯಾಸಗೊಳಿಸಿದ ಧ್ವಜವನ್ನೇ ಜುಲೈ 22, 1947 ರಲ್ಲಿ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು.
2009 ರಲ್ಲಿ ಇವರ ಗೌರವಾರ್ಥ, ಇವರ ಭಾವಚಿತ್ರವನ್ನು ಹೊಂದಿದ ಸ್ಟ್ಯಾಂಪ್ ಬಿಡುಗಡೆ ಮಾಡಲಾಯಿತು. 1963 ರ ಜುಲೈ 4 ರಂದು ಅವರು ಇಹಲೋಕ ತ್ಯಜಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.