ಲಕ್ನೋ: ಇನ್ನೇನು ಆಗಸ್ಟ್ 5 ಕ್ಕೆ ಪ್ರಧಾನಿ ಮೋದಿ ಅವರಿಂದ ಶಿಲಾನ್ಯಾಸಗೊಂಡು ಕೆಲವೇ ಸಮಯದಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ. ಆ ಮೂಲಕ ಅದೆಷ್ಟೋ ಭಾರತೀಯರ ಕನಸು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ. ಇದೆ ಸಂದರ್ಭದಲ್ಲಿ ಅಯೋಧ್ಯೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಸುಮಾರು 105 ಗ್ರಾಮಗಳ ಸೂರ್ಯವಂಶ ಕ್ಷತ್ರಿಯ ಕುಟುಂಬಗಳು ಮತ್ತೆ ತಲೆಗೆ ಪೇಟ ಮತ್ತು ಚರ್ಮದ ಶೂ ಗಳನ್ನು ಧರಿಸಲಿದ್ದಾರೆ. ಈಗಾಗಲೇ ಈ ಸಂಬಂಧ ಹಳ್ಳಿಗಳಲ್ಲಿ ಸಾರ್ವಜನಿಕ ಸಭೆ, ಪ್ರತಿಜ್ಞೆಗೊಳಗಾಗಿರುವ ಕ್ಷತ್ರಿಯರ ವಂಶಸ್ಥರ ಮನೆ ಮನೆಗಳಿಗೆ ಪೇಟವನ್ನು ನೀಡುವ ಕೆಲಸವನ್ನೂ ಮಾಡಲಾಗುತ್ತಿದೆ.
ಭಗವಾನ್ ಶ್ರೀ ರಾಮನ ವಂಶಸ್ಥರೆಂದೇ ನಂಬಿರುವ ಅಯೋಧ್ಯೆಯ ಕ್ಷತ್ರಿಯ ಕುಟುಂಬಗಳು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದೆ ತಲೆಗೆ ಪೇಟ, ಛತ್ರಿ ಬಳಸುವುದಿಲ್ಲ, ಚರ್ಮದ ಶೂ ಗಳನ್ನು ಧರಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನು 500 ವರ್ಷಗಳ ಹಿಂದೆಯೇ ಮಾಡಿದ್ದರು. ತಮ್ಮ ಪೂರ್ವಜರ ಪ್ರತಿಜ್ಞೆಯನ್ನು ಇವರು ಇಂದಿಗೂ ಅನುಸರಿಸಿಕೊಂಡೇ ಬಂದಿದ್ದಾರೆ. ಅಯೋಧ್ಯೆ ಮತ್ತು ಸುತ್ತಮುತ್ತಲಿನ 105 ಹಳ್ಳಿಗಳಲ್ಲಿ ವಾಸಿಸುವ ಕ್ಷತ್ರಿಯರು ಈ ವರೆಗೂ ತಮ್ಮ ಈ ಪ್ರತಿಜ್ಞೆಗೆ ಭಂಗವಾಗದಂತೆ ನೋಡಿಕೊಂಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ರಾಮ ಜನ್ಮಭೂಮಿಯನ್ನು ನೀಡುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ, ಈ ವಂಶಸ್ಥರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ನ್ಯಾಯಾಲಯ ರಾಮ ಜನ್ಮಭೂಮಿ ಪರವಾಗಿ ತೀರ್ಪು ನೀಡುವವರೆಗೂ ಸುಮಾರು 1.5 ಲಕ್ಷಗಳಷ್ಟಿರುವ ಕ್ಷತ್ರಿಯರು ಪೇಟಗಳನ್ನು ಧರಿಸಿಲ್ಲ. ಮದುವೆ, ಸಮಾರಂಭ ಸೇರಿದಂತೆ ಯಾವ ಸಂದರ್ಭದಲ್ಲಿಯೂ ಇವರು ಪೇಟವನ್ನು ಧರಿಸುತ್ತಿಲ್ಲ. ಈ ಪದ್ಧತಿ 500 ವರ್ಷಗಳಿಂದಲೂ ಚಾಲ್ತಿಯಲ್ಲಿದೆ ಎಂದು ವಕೀಲರಾದ ಸರೈರಾಸಿಯ ಬಸದೇವ್ ಸಿಂಗ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಭಾರತಿ ಕಥಾ ದೇವಸ್ಥಾನದ ಮಹಂತ್ ಓಂ ಶ್ರೀ ಭಾರತಿ, 500 ವರ್ಷಗಳ ಹಿಂದೆ ಮಾಡಿದ ಪ್ರತಿಜ್ಞೆ ಮುರಿಯದಂತೆ ಕಾಪಾಡಿಕೊಂಡು ಬರಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ನ್ಯಾಯಾಲಯ ರಾಮ ಮಂದಿರ ಟ್ರಸ್ಟ್ ಪರವಾಗಿ ತೀರ್ಪು ನೀಡಿದ್ದು, ಈ ದೇವಾಲಯ ನಿರ್ಮಾಣಕ್ಕೆ ಸೂರ್ಯವಂಶದ ಕ್ಷತ್ರಿಯ ಕುಟುಂಬಗಳು ಸಂತೋಷದಿಂದ ಕಾಯುತ್ತಿದ್ದಾರೆ ಎಂದಿದ್ದಾರೆ.
ಅಲಹಾಬಾದ್ ಹೈಕೋರ್ಟ್ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಿ. ಪಿ. ಸಿಂಗ್ ಅವರು ಹೇಳುವಂತೆ, ಈ ವಂಶಸ್ಥರ ಪೂರ್ವಜರು ದೇವಾಲಯದ ಉಳಿವಿಗಾಗಿ 16 ನೇ ಶತಮಾನದಲ್ಲಿ ಮೊಘಲರ ವಿರುದ್ಧ ಹೋರಾಟ ನಡೆಸಿದ್ದಾರೆ. ಆದರೆ ಈ ಹೋರಾಟದಲ್ಲಿ ಅವರಿಗೆ ಜಯ ಸಿಗುವುದಿಲ್ಲ. ಆ ಬಳಿಕ ಇವರು ದೇವಾಲಯ ನಿರ್ಮಾಣವಾಗುವವರೆಗೆ ಪೇಟ ಮತ್ತು ಬೂಟುಗಳನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಇದೀಗ ಅವರ ಪ್ರತಿಜ್ಞೆ ನೆರವೇರುವ ಸಂದರ್ಭ ಬಂದಿದ್ದು, ಸುಮಾರು 500 ವರ್ಷಗಳ ಬಳಿಕ ಅವರು ಮತ್ತೆ ಪೇಟ, ಚರ್ಮದ ಶೂ ಗಳನ್ನು ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.