ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಬಾಲ ಗಂಗಾಧರ್ ತಿಲಕ್ ಅವರ 100 ನೇ ಪುಣ್ಯತಿಥಿಯ ಅಂಗವಾಗಿ ಶನಿವಾರ ಆ ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ ಸಲ್ಲಿಸಿದರು. ಅಲ್ಲದೇ, ತಿಲಕರ ಜೀವನದ ಬಗ್ಗೆ ಓದಬೇಕು, ಅ ಮೂಲಕ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಇದರಿಂದ ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎಂದು ಯುವಕರನ್ನು ಅವರು ಒತ್ತಾಯಿಸಿದರು.
“ಇಂದು ನಾವು 100 ವರ್ಷಗಳ ಹಿಂದೆ ಒಂದು ಮಹಾನ್ ಚೇತನವನ್ನು ಕಳೆದುಕೊಂಡ ದಿನ. ಇಡೀ ದೇಶದ ಪರವಾಗಿ ನಾನು ಅವರ ಆತ್ಮಕ್ಕೆ ಗೌರವ ಸಲ್ಲಿಸುತ್ತೇನೆ. ಭಾರತದ ಬಗ್ಗೆ ಮತ್ತು ಅದರ ಇತಿಹಾಸದ ಬಗ್ಗೆ ಏನಾದರೂ ತಿಳಿದುಕೊಳ್ಳಲು ಬಯಸುವಿರಾದರೆ ತಿಲಕ್ ಅವರ ಬಗ್ಗೆ ಓದಿ ಎಂದು ನಾನು ಯುವ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ.
ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಆಯೋಜಿಸಿದ್ದ ‘ಲೋಕಮಾನ್ಯ ತಿಲಕ್: ಸ್ವರಾಜ್ ಟು ಆತ್ಮನಿರ್ಭರ ಭಾರತ್’ ವೆಬ್ನಾರ್ನಲ್ಲಿ ಅವರು ಮಾತನಾಡಿದರು.
“ಅವರು ಹುತಾತ್ಮರಾಗಿ ನೂರು ವರ್ಷಗಳಾಗಿವೆ, ಆದರೆ ಇಂದಿಗೂ ಸಹ ಅವರ ವ್ಯಕ್ತಿತ್ವ, ಕೆಲಸ ಮತ್ತು ಚಿಂತನೆಯು ಅಂದಿನಂತೆಯೇ ಇಂದಿಗೂ ಪ್ರಸ್ತುತವಾಗಿದೆ. ಅವರು ದೂರದೃಷ್ಟಿಯ ನಾಯಕರಾಗಿದ್ದರು ಎಂಬುದನ್ನು ಇದು ತೋರಿಸುತ್ತದೆ” ಎಂದು ಅವರು ಹೇಳಿದರು.
“ಅವರ ಆತ್ಮಚರಿತ್ರೆಯನ್ನು ಒಮ್ಮೆಯಾದರೂ ಓದಬೇಕೆಂದು ದೇಶದ ಯುವಕರಿಗೆ ನಾನು ಮನವಿ ಮಾಡುತ್ತೇನೆ, ಏಕೆಂದರೆ ಇದರಿಂದ ಜೀವನದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಇದು ಇಂದಿನ ಕಾಲಕ್ಕೂ ಒಂದು ಕೀಲಿಯನ್ನು ನೀಡುತ್ತದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
“ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಮತ್ತು ನಾನು ಅದನ್ನು ಪಡೆದೇ ತೀರುತ್ತೇನೆ” ಎಂಬ ತಿಲಕರ ಮಾತು ಸುವರ್ಣ ಅಕ್ಷರಗಳಲ್ಲಿ ಅಚ್ಚೊತ್ತಬೇಕಾದಂತಹ ಮಾತು ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.