ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 72 ವರ್ಷಗಳ ಬಳಿಕ ಇದೀಗ ಸ್ವಾತಂತ್ರ್ಯೋತ್ಸವದಂದೇ ಉತ್ತರ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಸಮೀಪದ ಕೊನೆಯ ಗ್ರಾಮವೊಂದು ವಿದ್ಯುತ್ ಸಂಪರ್ಕ ಪಡೆಯುವ ಮೂಲಕ ಪ್ರಧಾನ ಮಂತ್ರಿ ಅವರು ಕೆಂಪುಕೋಟೆಯಲ್ಲಿ ಮಾಡುವ ಭಾಷಣವನ್ನು ನೇರ ಪ್ರಸಾರದ ಮೂಲಕ ಕಣ್ತುಂಬಿಕೊಳ್ಳಲಿದೆ.
ಉತ್ತರ ಕಾಶ್ಮೀರದ ಕೇರನ್ ಗ್ರಾಮದ 12,000 ಕುಟುಂಬಗಳಿಗೆ ಈ ಬಾರಿಯ ಸ್ವಾತಂತ್ರ್ಯ ದಿನದಂದು ಪ್ರಪ್ರಥಮ ಬಾರಿಗೆ ಬೆಳಗ್ಗಿನಿಂದಲೇ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈ ಗ್ರಾಮವನ್ನು ತಲುಪುವ ಪವರ್ ಗ್ರಿಡ್ ಈ ಪ್ರದೇಶಕ್ಕೆ ಶಬ್ದ ಹಾಗೂ ಮಾಲಿನ್ಯವಿಲ್ಲದೆಯೇ ವಿದ್ಯುತ್ ಪೂರೈಕೆ ಮಾಡಲಿದೆ. ಈ ವರೆಗೆ ಗ್ರಾಮಕ್ಕೆ ಡೀಸೆಲ್ ಜನರೇಟರ್ ಸೆಟ್ ಬಳಸಿ ಸಂಜೆ 6 ರಿಂದ ರಾತ್ರಿ 9 ರ ವರೆಗೆ ಮಾತ್ರವೇ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು ಎಂದು ಸಂಬಂಧಪಟ್ಟ ಮೂಲಗಳು ಮಾಹಿತಿ ನೀಡಿವೆ.
ಮೂಲಸೌಕರ್ಯ ವಂಚಿತ ಈ ಗ್ರಾಮಕ್ಕೆ ಕೇವಲ ವಿದ್ಯುತ್ ಸೌಕರ್ಯ ಮಾತ್ರವಲ್ಲದೆ, ರಸ್ತೆ ಸೌಕರ್ಯವನ್ನು ಒದಗಿಸುವ, ಅಭಿವೃದ್ಧಿ ಮಾಡುವ ಕೆಲಸವನ್ನು ಮಾಡಲಾಗುತ್ತದೆ ಎಂದು ಸ್ಥಳೀಯಾಡಳಿತವೂ ಮಾಹಿತಿ ನೀಡಿದೆ. ಈ ಪ್ರದೇಶವು ಕುಪ್ವಾರಾ ಜಿಲ್ಲೆಗೆ ಸೇರಿದ್ದು ಕಿಶನ್ ಗಂಗಾ ನದಿಯ ತೀರದಲ್ಲಿದೆ. ಚಳಿಗಾಲದ ಸಂದರ್ಭದಲ್ಲಿ ಈ ಪ್ರದೇಶ ಮುಖ್ಯ ಪಟ್ಟಣದಿಂದ ಸಂಪರ್ಕ ಕಳೆದುಕೊಳ್ಳುವ ಸ್ಥಿತಿ ಇದ್ದು, ಆ ಮೊದಲೇ ಸಂಪರ್ಕ ರಸ್ತೆಗಳ ಕಾಮಗಾರಿ ನಡೆಸುವುದಾಗಿ ಬಾರ್ಡರ್ ರೋಡ್ಸ್ ಆರ್ಗನೈಝೇಷನ್ ತಿಳಿಸಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರದೇಶದ ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದರ ಬಗ್ಗೆ ಮಾತನಾಡಿರುವ ಕುಪ್ವಾರಾ ಜಿಲ್ಲೆಯ ಜಿಲ್ಲಾಧಿಕಾರಿ ಅನ್ಶುಲ್ ಗರ್ಗ್, ಕಳೆದ ಒಂದು ವರ್ಷದಿಂದಲೇ ಈ ಭಾಗದ ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿಗೆ ತ್ವರಿತ ಗತಿಯನ್ನು ನೀಡಿದ್ದಾಗಿಯೂ ತಿಳಿಸಿದ್ದಾರೆ. ಒಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ 72 ವರ್ಷಗಳ ಬಳಿಕ ಗಡಿ ಭಾಗದ ಹಳ್ಳಿಯೊಂದು ಬೆಳಕು ಕಾಣುವಂತಾಗಿದ್ದು, ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.