ನವದೆಹಲಿ: ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ಚೀನಾದ ಸೈನ್ಯದ ವಿರುದ್ಧ ಧೀರವಾಗಿ ಹೋರಾಡಿ ಹುತಾತ್ಮರಾದ 20 ಭಾರತೀಯ ಸೇನಾ ಸಿಬ್ಬಂದಿಯ ಹೆಸರನ್ನು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಕೆತ್ತಲಾಗುವುದು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಸ್ಮಾರಕದಲ್ಲಿ ಹುತಾತ್ಮ ಸೇನಾ ಸಿಬ್ಬಂದಿಯ ಹೆಸರನ್ನು ಕೆತ್ತಿಸುವ ಪ್ರಕ್ರಿಯೆಗೆ ಕೆಲವು ತಿಂಗಳುಗಳು ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.
ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಸೇನಾ ಸಿಬ್ಬಂದಿಯಲ್ಲಿ 16 ಬಿಹಾರ ರೆಜಿಮೆಂಟ್ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿ ಸಂತೋಷ್ ಬಾಬು ಕೂಡ ಸೇರಿದ್ದಾರೆ.
ಈ ಘಟನೆಯು ಪೂರ್ವ ಲಡಾಕ್ನಲ್ಲಿ ಗಡಿ ಉದ್ವಿಗ್ನತೆಯನ್ನು ಗಮನಾರ್ಹವಾಗಿ ಹೆಚ್ಚಿಸಿತು ಮತ್ತು ಭಾರತವು ಇದನ್ನು “ಚೀನಾದ ಪೂರ್ವಭಾವಿ ಮತ್ತು ಯೋಜಿತ ಕ್ರಮ” ಎಂದು ಕರೆದಿದೆ.
ಘಟನೆಯಲ್ಲಿ ಚೀನಾಗೆ ಹೆಚ್ಚಿನ ಸಾವು ನೋವು ಉಂಟಾಗಿದೆ. ಆದರೆ ಅದು ಮೃತಪಟ್ಟ ತನ್ನ ಸೈನಿಕರ ಲೆಕ್ಕವನ್ನು ಇದುವರೆಗೆ ಬಹಿರಂಗಪಡಿಸಿಲ್ಲ. ಅಮೆರಿಕದ ಗುಪ್ತಚರ ವರದಿಯ ಪ್ರಕಾರ, ಚೀನಾದ ಕಡೆಯಿಂದ ಸಾವನ್ನಪ್ಪಿದವರ ಸಂಖ್ಯೆ 35 ಆಗಿದೆ.
ಜುಲೈ 17 ರಂದು ಪೂರ್ವ ಲಡಾಖ್ನ ಲುಕುಂಗ್ ಫಾರ್ವರ್ಡ್ ಪೋಸ್ಟ್ಗೆ ಭೇಟಿ ನೀಡಿದ ಸಂದರ್ಭದಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಾದ ಸೈನ್ಯದ ವಿರುದ್ಧ ಹೋರಾಡುವಲ್ಲಿ ಅನುಕರಣೀಯ ಮನೋಭಾವ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಬಿಹಾರ ರೆಜಿಮೆಂಟ್ನ ಸೈನಿಕರಿಗೆ ವೈಯಕ್ತಿಕವಾಗಿ ತಮ್ಮ ಮೆಚ್ಚುಗೆ ಮತ್ತು ಅಭಿನಂದನೆಗಳನ್ನು ತಿಳಿಸಿದರು.
ಇದೀಗ ಗಾಲ್ವಾನ್ ಹುತಾತ್ಮರಿಗೆ ಗೌರವವಾಗಿ ಅವರ ಹೆಸರನ್ನು ರಾಷ್ಟ್ರೀಯ ಯುದ್ಧಸ್ಮಾರಕದಲ್ಲಿ ಬರೆಯಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.