ನವದೆಹಲಿ: ಭಾರತದ ಹವಾಮಾನ ವೈಪರೀತ್ಯ ಹೋರಾಟಗಾರರೊಬ್ಬರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ತಮ್ಮ ಹೊಸ ಸಲಹಾ ಗುಂಪಿಗೆ ಹೆಸರಿಸಿದ್ದಾರೆ. ಈ ಗುಂಪು ಯುವ ನಾಯಕರನ್ನು ಒಳಗೊಂಡಿದ್ದು, ಹದಗೆಡುತ್ತಿರುವ ಹವಾಮಾನ ಬಿಕ್ಕಟ್ಟನ್ನು ನಿಭಾಯಿಸಲು ದೃಷ್ಟಿಕೋನಗಳು ಮತ್ತು ಪರಿಹಾರಗಳನ್ನು ಒದಗಿಸಲಿದೆ.
ಅರ್ಚನಾ ಸೊರೆಂಗ್ ಅವರ ಹೆಸರನ್ನು ಗುಟೆರಸ್ ಅವರು ಗುಂಪಿಗೆ ಪ್ರಸ್ತಾಪ ಮಾಡಿದ್ದಾರೆ. ವಿಶ್ವದಾದ್ಯಂತದ ಇತರ ಆರು ಯುವ ಹವಾಮಾನ ನಾಯಕರು ಕೂಡ ಗುಟೆರೆಸ್ ಅವರ ಹೊಸ ಯುವ ಹವಾಮಾನ ಸಲಹಾ ಸಮೂಹದಲ್ಲಿ ಇರಲಿದ್ದಾರೆ.
“ಸೊರೆಂಗ್ ಅವರು ವಕಾಲತ್ತು ಮತ್ತು ಸಂಶೋಧನೆಯಲ್ಲಿ ಅನುಭವಿಯಾಗಿದ್ದಾರೆ ಮತ್ತು ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನ ಮತ್ತು ಸಾಂಸ್ಕೃತಿಕ ಅಭ್ಯಾಸಗಳನ್ನು ದಾಖಲಿಸಲು, ಸಂರಕ್ಷಿಸಲು ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ” ಎಂದು ಯುಎನ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
“ನಮ್ಮ ಪೂರ್ವಜರು ತಮ್ಮ ಸಾಂಪ್ರದಾಯಿಕ ಜ್ಞಾನ ಮತ್ತು ಅಭ್ಯಾಸಗಳ ಮೂಲಕ ಅರಣ್ಯ ಮತ್ತು ಪ್ರಕೃತಿಯನ್ನು ಯುಗಯುಗದಿಂದ ರಕ್ಷಿಸುತ್ತಿದ್ದಾರೆ. ಈಗ ಹವಾಮಾನ ಬಿಕ್ಕಟ್ಟನ್ನು ಎದುರಿಸುವಲ್ಲಿ ನಾವು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಬೇಕಾಗಿದೆ” ಎಂದು ಸೊರೆಂಗ್ ಹೇಳಿದ್ದಾರೆ.
ಸೊರೆಂಗ್ ಅವರು ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಲ್ ಸೈನ್ಸ್ನಲ್ಲಿ ರೆಗುಲೇಟರ್ ಗವರ್ನನ್ಸ್ ಅಧ್ಯಯನ ಮಾಡಿದ್ದಾರೆ ಮತ್ತು ಇಲ್ಲಿನ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆಯೂ ಆಗಿದ್ದಾರೆ.
ಹದಗೆಡುತ್ತಿರುವ ಹವಾಮಾನ ಬಿಕ್ಕಟ್ಟನ್ನು ನಿಭಾಯಿಸುವ ಜಾಗತಿಕ ಕ್ರಮ ಮತ್ತು ಮಹತ್ವಾಕಾಂಕ್ಷೆಯನ್ನು ವೇಗಗೊಳಿಸಲು 18 ರಿಂದ 28 ವರ್ಷದೊಳಗಿನ ಯುವ ಕಾರ್ಯಕರ್ತರು ಯುಎನ್ ಮುಖ್ಯಸ್ಥರಿಗೆ ನಿಯಮಿತವಾಗಿ ಸಲಹೆ ನೀಡಲಿದ್ದಾರೆ.
ಕೋವಿಡ್-19 ಚೇತರಿಕೆ ಪ್ರಯತ್ನಗಳ ಭಾಗವಾಗಿ ಹವಾಮಾನ ಕ್ರಿಯೆಯನ್ನು ಸಜ್ಜುಗೊಳಿಸಲು ಯುಎನ್ ಕಾರ್ಯನಿರ್ವಹಿಸುತ್ತಿರುವುದರಿಂದ, ಹೆಚ್ಚಿನ ಯುವ ನಾಯಕರನ್ನು ನಿರ್ಧಾರ ತೆಗೆದುಕೊಳ್ಳುವುದು ಮತ್ತು ಯೋಜನಾ ಪ್ರಕ್ರಿಯೆಗಳಿಗೆ ತರಲು ವಿಶ್ವಸಂಸ್ಥೆಯ ಹೊಸ ಪ್ರಯತ್ನವನ್ನು ಈ ಪ್ರಕಟಣೆ ಸೂಚಿಸುತ್ತದೆ.
“ನಾವು ಹವಾಮಾನ ತುರ್ತು ಪರಿಸ್ಥಿತಿಯಲ್ಲಿದ್ದೇವೆ, ನಮಗೆ ಸಮಯದ ಆಡಂಬರ ಇಲ್ಲ” ಎಂದು ಗುಟೆರೆಸ್ ಸಲಹಾ ಗುಂಪಿನ ಸ್ಥಾಪನೆಯನ್ನು ಪ್ರಕಟಿಸುವ ವೀಡಿಯೊದಲ್ಲಿ ತಿಳಿಸಿದ್ದಾರೆ.
“ನಮಗೆ ಈಗ ಕೋವಿಡ್-19 ನಿಂದ ಉತ್ತಮವಾಗಿ ಚೇತರಿಸಿಕೊಳ್ಳಲು, ಅನ್ಯಾಯ ಮತ್ತು ಅಸಮಾನತೆಯನ್ನು ಎದುರಿಸಲು ಮತ್ತು ಹವಾಮಾನ ಅಡ್ಡಿಗಳನ್ನು ಪರಿಹರಿಸಲು ತುರ್ತು ಅಗತ್ಯ ಕ್ರಮಗಳು ಬೇಕಿದೆ” ಎಂದು ಅವರು ಹೇಳಿದ್ದಾರೆ.
“ಅದಕ್ಕಾಗಿಯೇ ನಾನು ಇಂದು ಹವಾಮಾನ ಬದಲಾವಣೆಯ ಕುರಿತು ನನ್ನ ಯುವ ಸಲಹಾ ಸಮೂಹವನ್ನು ಪ್ರಾರಂಭಿಸುತ್ತಿದ್ದೇನೆ. ಹವಾಮಾನ ಕ್ರಮವನ್ನು ಹೆಚ್ಚಿಸಲು ನಮಗೆ ಸಹಾಯ ಮಾಡುವ ದೃಷ್ಟಿಕೋನಗಳು, ಆಲೋಚನೆಗಳು ಮತ್ತು ಪರಿಹಾರಗಳನ್ನು ಒದಗಿಸಲು ಇದನ್ನು ರಚಿಸಿದ್ದೇನೆ” ಎಂದು ಯುಎನ್ ಮುಖ್ಯಸ್ಥರು ಹೇಳಿದ್ದಾರೆ.
ಹವಾಮಾನ ಬದಲಾವಣೆಯ ಕುರಿತಾದ ಪ್ರಧಾನ ಕಾರ್ಯದರ್ಶಿಯವರ ಯುವ ಸಲಹಾ ಗುಂಪಿನ ಸದಸ್ಯರು ಎಲ್ಲಾ ಪ್ರದೇಶಗಳ ಮತ್ತು ಸಣ್ಣ ದ್ವೀಪ ರಾಜ್ಯಗಳ ಯುವಜನರ ವೈವಿಧ್ಯಮಯ ಧ್ವನಿಗಳನ್ನು ಪ್ರತಿನಿಧಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.