ಅಯೋಧ್ಯೆ; ಯೋಗಿ ಆದಿತ್ಯನಾಥ ಸರ್ಕಾರವು ಅಯೋಧ್ಯೆಗಾಗಿ ಸುಮಾರು 500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಿದ್ಧತೆ ನಡೆಸಿದೆ. ಆಗಸ್ಟ್ 5 ರಂದು ರಾಮ ಮಂದಿರಕ್ಕೆ ‘ಭೂಮಿ ಪೂಜೆ’ ನಡೆಯುವ ದಿನದಂದು ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ.
ಈ ಸಂದರ್ಭದಲ್ಲಿ 326 ಕೋಟಿ ರೂ.ಗಳ ಹೊಸ ಯೋಜನೆಗಳಿಗೆ ಅಡಿಪಾಯ ಹಾಕಲಾಗುತ್ತಿದೆ ಮತ್ತು 161 ಕೋಟಿ ರೂ.ಗಳ ಇತರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಸಮರ್ಪಿಸಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.
ಅಜಂಗಢ ಮತ್ತು ಬಹ್ರೈಚ್ ನಡುವೆ ಅಯೋಧ್ಯೆಯ ಮೂಲಕ ಹಾದು ಹೋಗುವ 36.7 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 30 ರ ನಾಲ್ಕು ಪಥಗಳಿಗೆ 252 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ವಿಸ್ತರಣೆ ನಡೆಸುವ ಯೋಜನೆಗೆ ಶಿಲಾನ್ಯಾಸ ನೆರವೇರಲಿದೆ.
54 ಕೋಟಿ ರೂ.ಗಳ ಮೌಲ್ಯದಲ್ಲಿ ಅಯೋಧ್ಯೆಯಲ್ಲಿನ ಮೂರನೇ ಹಂತದ ನೀರು ಸರಬರಾಜು ಯೋಜನೆಯನ್ನೂ ಸರ್ಕಾರ ಆರಂಭ ಮಾಡಲಿದೆ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ.
16.8 ಕೋಟಿ ರೂ.ಗಳ ಮೌಲ್ಯದಲ್ಲಿ ಅಯೋಧ್ಯೆ ಶೋಧ್ ಸಂಸ್ಥಾನದ ನೇತೃತ್ವದಲ್ಲಿ ತುಳಸಿ ಸ್ಮಾರಕ ಭವನ ಆಧುನೀಕರಣ ಕಾರ್ಯದ ಅಡಿಪಾಯವನ್ನೂ ಈ ಸಂದರ್ಭದಲ್ಲಿ ಮಾಡಲಾಗುತ್ತಿದೆ. ಈ ಯೋಜನೆಯನ್ನು ಸಂಸ್ಕೃತಿ ಇಲಾಖೆ ವತಿಯಿಂದ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆ 2.7 ಕೋಟಿ ರೂ.ಗಳ ವೆಚ್ಚದಲ್ಲಿ ರಾಮ ಕಥಾ ಪಾರ್ಕ್ ವಿಸ್ತರಣೆ ಕಾರ್ಯವನ್ನು ಪ್ರಾರಂಭಿಸಲಿದೆ. ಈ ಯೋಜನೆಯನ್ನು ರಾಜ್ಕಿಯಾ ನಿರ್ಮಾಣ್ ನಿಗಮ್ (ಆರ್ಎನ್ಎನ್) ನಿರ್ವಹಿಸಲಿದೆ. ನಯಾ ಘಾಟ್ ಬಳಿಯ ಸರಯು ನದಿಯ ದಂಡೆಯಲ್ಲಿರುವ ರಾಮ ಕಥಾ ಉದ್ಯಾನವನವು ರಾಮಾಯಣ ಮೇಳ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ಥಳವಾಗಿದೆ.
ಜನರಿಗೆ ಮೀಸಲಿಡಬೇಕಾದ ಯೋಜನೆಗಳಲ್ಲಿ ಒಟ್ಟು 134 ಕೋಟಿ ರೂ.ಗಳ ವೆಚ್ಚದಲ್ಲಿ ರಾಜಶ್ರೀ ದಶರಥ್ ರಾಜ್ಯ ವೈದ್ಯಕೀಯ ಪದವಿ ಕಾಲೇಜಿನಲ್ಲಿ ಉಪನ್ಯಾಸ ಭವನ, ಆಡಳಿತ ಕಟ್ಟಡ, ಗ್ರಂಥಾಲಯ, ಅಕಾಡೆಮಿಕ್ ಬ್ಲಾಕ್ ಮತ್ತು ಬಾಲಕರ / ಬಾಲಕಿಯರ ಹಾಸ್ಟೆಲ್ ಸೇರಿವೆ.
ಇದಲ್ಲದೆ, ದರ್ಶನ್ ನಗರದ ವಿಭಾಗೀಯ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮತ್ತು ಬರ್ನ್ ಯುನಿಟ್ ಸಹ 2.3 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಪ್ರವಾಸೋದ್ಯಮ ಇಲಾಖೆಯಿಂದ 10 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಾಮಾಯಣ ಸರ್ಕ್ಯೂಟ್ ಅಡಿಯಲ್ಲಿರುವ ಲಕ್ಷ್ಮಣ್ ಕಿಲಾ ಘಾಟ್ ಅನ್ನು ಸಹ ಜನರಿಗೆ ಸಮರ್ಪಿಸಲಾಗುವುದು.
ಅಯೋಧ್ಯೆಗೆ ಹೊಸ ಬಸ್ ನಿಲ್ದಾಣವೂ ಸಿಗಲಿದೆ. ಸಾರಿಗೆ ಇಲಾಖೆಯು 7 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಈ ಯೋಜನೆಯು ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಖಚಿತಪಡಿಸುತ್ತದೆ. 200 ಜನರ ಸಾಮರ್ಥ್ಯ ಹೊಂದಿರುವ ಪೊಲೀಸ್ ಬ್ಯಾರಕ್ ಸುಮಾರು 7 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.