ನವದೆಹಲಿ: ಹೊಸದಾಗಿ ಕಾರ್ಯರೂಪಕ್ಕೆ ಬಂದಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವನ್ನು ಪಡೆದುಕೊಳ್ಳುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿ ಮೊದಲ ಕೇಂದ್ರೀಯ ವಿಶ್ವವಿದ್ಯಾಲಯವನ್ನು ನಿರ್ಮಾಣ ಮಾಡಲು ಹಸಿರು ನಿಶಾನೆ ತೋರಿಸಿದ್ದಾರೆ. ಆ ವಿಶ್ವವಿದ್ಯಾನಿಲಯದಲ್ಲಿ ಬೌದ್ಧ ಅಧ್ಯಯನ ಕೇಂದ್ರವೂ ಇರಲಿದೆ. ಕೇಂದ್ರಾಡಳಿತ ಪ್ರದೇಶವಾಗಿ ಲಡಾಖ್ ಹೊರಹೊಮ್ಮಿದ ಒಂದನೇ ವರ್ಷಾಚರಣೆಗೂ ಮುಂಚಿತವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಲಡಾಖ್ನಲ್ಲಿ ನಿರ್ಮಾಣವಾಗಲಿರುವ ವಿಶ್ವವಿದ್ಯಾಲಯವು ಲಿಬರಲ್ ಆರ್ಟ್ಸ್, ಮೂಲವಿಜ್ಞಾನ ಸೇರಿದಂತೆ ಹಲವು ಪದವಿ ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಿದೆ.
ಲಡಾಖ್ ಮತ್ತು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡು ಒಂದು ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ನಡೆದ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವವಿದ್ಯಾಲಯ ನಿರ್ಮಾಣದ ಪ್ರಸ್ತಾವನೆಗೆ ಹಸಿರು ನಿಶಾನೆಯನ್ನು ತೋರಿಸಿದರು. ಜನರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಈ ನೂತನ ಕೇಂದ್ರಾಡಳಿತ ಪ್ರದೇಶಗಳಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಅವರು ಪರಿಶೀಲಿಸಿದರು.
ಕಳೆದ ವರ್ಷ ಆಗಸ್ಟ್ 5ರಂದು ಕೇಂದ್ರ ಸರಕಾರವು 370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ವಿಭಜಿಸಿತು. ಬಳಿಕ ಜಮ್ಮು-ಕಾಶ್ಮೀರವನ್ನು ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿ, ಲಡಾಖ್ ಅನ್ನು ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ರಚಿಸಿತು.
ಶಿಕ್ಷಣಕ್ಕೆ ಸಂಬಂಧಿಸಿದ ಸಚಿವಾಲಯವು ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಶೀಘ್ರದಲ್ಲೇ ಔಪಚಾರಿಕ ಪ್ರಸ್ತಾವನೆಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಇದಕ್ಕೆ ಕೇಂದ್ರೀಯ ಕಾನೂನಿನ ಅನುಮೋದನೆಯ ಅಗತ್ಯವಿದೆ. ಸಚಿವ ಸಂಪುಟದ ಅನುಮೋದನೆ ಬಳಿಕ ಇದು ಸಂಸತ್ತಿನಲ್ಲಿ ಅಂಗೀಕರಿಸಲ್ಪಡುವ ಅಗತ್ಯವಿದೆ.
ಹತ್ತು ಸಾವಿರಕ್ಕೂ ಅಧಿಕ ಲಡಾಖಿ ವಿದ್ಯಾರ್ಥಿಗಳು ನೂರಾರು ಕಿಲೋ ಮೀಟರ್ ಗಳವರೆಗೆ ಕ್ರಮಿಸಿ ಉನ್ನತ ಶಿಕ್ಷಣವನ್ನು ಪಡೆಯಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸಭೆಯಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಒಪ್ಪಿಗೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಪ್ರಸ್ತಾವನೆಯ ಪ್ರಕಾರ, ಲಡಾಖ್ನಲ್ಲಿ ಸ್ಥಾಪನೆಗೊಳ್ಳಲಿರುವ ವಿಶ್ವವಿದ್ಯಾಲಯವು ಹಿಮಾಚಲ ಪ್ರದೇಶದ ಸ್ಪಿತಿ ಮತ್ತು ಲಹೌಲ್ ಜಿಲ್ಲೆಗಳ ವಿದ್ಯಾರ್ಥಿಗಳನ್ನೂ ಗುರಿಯಾಗಿಸಿಕೊಂಡಿದೆ. ರೋಹ್ಟಂಗ್ ಲಾ ಸುರಂಗ ತೆರೆದ ಬಳಿಕ ಇಲ್ಲಿಗೆ ಸುಲಭ ಲಭ್ಯತೆ ಸಿಗಲಿದೆ. ಗೆಲುಕ್ ಮತ್ತು ಲಡಾಖ್ನ ಟಿಬೆಟಿಯನ್ ಬೌದ್ಧ ಜನಸಂಖ್ಯೆಯ ಕಗ್ಯೂ ಪಂಥದ ಅವಶ್ಯಕತೆಯನ್ನು ಪೂರೈಸಲು ವಿಶ್ವವಿದ್ಯಾಲಯವು ಬೌದ್ಧ ಅಧ್ಯಯನ ಕೇಂದ್ರವನ್ನು ಹೊಂದಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.