ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್ವರೆಗೆ ವಿಸ್ತರಿಸುವುದಾಗಿ ಅವರು ಘೋಷಿಸಿದ್ದಾರೆ.
ಕೊರೋನಾ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಾ ನಾವು ಈಗ ಅನ್ಲಾಕ್ -2 ಅನ್ನು ಪ್ರವೇಶಿಸಿದ್ದೇವೆ. ಅನ್ ಲಾಕ್ ವಿಧಿಸಿದ ಬಳಿಕ ದೇಶದಲ್ಲಿ ಜನರ ಬೇಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ಶೀತ, ಜ್ವರ, ಕೆಮ್ಮು ಮುಂತಾದ ಕಾಯಿಲೆ ಸಹಜವೆನಿಸುವ ಋತು ಬಂದಿದ್ದು, ಜನರು ತಮ್ಮ ಬಗ್ಗೆ ಎಚ್ಚರಿಕೆವಹಿಸಿಕೊಳ್ಳಬೇಕು ಎಂದಿದ್ದಾರೆ.
ಕೊರೋನಾದಿಂದ ಉಂಟಾಗುವ ಸಾವಿನ ಪ್ರಮಾಣವನ್ನು ನಾವು ಗಮನಿಸಿದರೆ, ವಿಶ್ವದ ಹಲವು ದೇಶಗಳಿಗಿಂತ ಭಾರತವು ಉತ್ತಮ ಸ್ಥಾನದಲ್ಲಿದೆ. ಸಮಯೋಚಿತ ಲಾಕ್ಡೌನ್ ಮತ್ತು ಇತರ ನಿರ್ಧಾರಗಳು ಭಾರತದ ಲಕ್ಷಾಂತರ ಜನರ ಜೀವವನ್ನು ಉಳಿಸಿವೆ ಎಂದಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ವಿಸ್ತರಣೆಗೆ 90 ಸಾವಿರ ಕೋಟಿ ರೂಪಾಯಿಗೂ ಅಧಿಕ ವ್ಯಯ ಮಾಡಲಾಗುತ್ತದೆ. ಕಳೆದ ಮೂರು ತಿಂಗಳಲ್ಲಿ ಈ ಯೋಜನೆಗೆ ವ್ಯಯಿಸಿದ ಒಟ್ಟು ಖರ್ಚು ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿ ಎಂದಿದ್ದಾರೆ.
ಹಬ್ಬಗಳ ಈ ಸಮಯವು ಅಗತ್ಯಗಳನ್ನು ಹೆಚ್ಚಿಸುತ್ತದೆ, ವೆಚ್ಚವನ್ನೂ ಹೆಚ್ಚಿಸುತ್ತದೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಈಗ ದೀಪಾವಳಿವರೆಗೆ ವಿಸ್ತರಿಸಬೇಕೆಂದು ನಿರ್ಧರಿಸಲಾಗಿದೆ, ಅಂದರೆ ನವೆಂಬರ್ ಅಂತ್ಯದವರೆಗೆ ಇದನ್ನು ವಿಸ್ತರಿಸಲಾಗುತ್ತದೆ ಎಂದಿದ್ದಾರೆ.
ನಮ್ಮ ಸರ್ಕಾರವು ಅಮೆರಿಕದ ಒಟ್ಟು ಜನಸಂಖ್ಯೆಗಿಂತ ಒಂದೂವರೆ ಪಟ್ಟು ಹೆಚ್ಚು ಜನರಿಗೆ, ಬ್ರಿಟನ್ನ ಜನಸಂಖ್ಯೆಗಿಂತ 12 ಪಟ್ಟು ಹೆಚ್ಚು ಮತ್ತು ಯುರೋಪಿಯನ್ ಒಕ್ಕೂಟದ ಜನಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಜನರಿಗೆ ಉಚಿತ ಧಾನ್ಯವನ್ನು ನೀಡಿದೆ ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಭಾರತದಾದ್ಯಂತ ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ವ್ಯವಸ್ಥೆ ಮಾಡಲಾಗುತ್ತಿದೆ. ತಮ್ಮ ಗ್ರಾಮವನ್ನು ತೊರೆದು ಉದ್ಯೋಗ ಅಥವಾ ಇತರ ಅಗತ್ಯಗಳಿಗಾಗಿ ಬೇರೆಡೆಗೆ ಹೋಗುವ ಬಡ ಜನರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ ಎಂದಿದ್ದಾರೆ.
ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನಾವು ಮುಂದಿನ ಆರ್ಥಿಕ ಚಟುವಟಿಕೆಗಳನ್ನು ಮುನ್ನಡೆಸಬೇಕು. ಸ್ವಾವಲಂಬಿ ಭಾರತಕ್ಕಾಗಿ ನಾವು ಹಗಲು ರಾತ್ರಿ ಶ್ರಮಿಸಬೇಕು. ನಾವೆಲ್ಲರೂ ಸ್ಥಳೀಯತೆಗೆ ಧ್ವನಿಯಾಗಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.