ನವದೆಹಲಿ: ಇಡೀ ಜಗತ್ತೇ ಕೊರೋನಾ ಸಂಕಷ್ಟದಿಂದ ಬಳಲುತ್ತಿದೆ. ಭಾರತ ಮತ್ತು ಭೂತಾನ್ ಸಹ ಈ ಸಾಂಕ್ರಾಮಿಕ ಸೋಂಕಿನಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ಎದುರಿಸುವಲ್ಲಿ ಮತ್ತು ಅಗತ್ಯ ಆರ್ಥಿಕ ಪರಿಸ್ಥಿತಿಗಳನ್ನು ಎದುರಿಸಲು ಭಾರತವೂ ಭೂತಾನ್ ಜೊತೆಗೆ ಕೈ ಜೋಡಿಸಲಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ.
ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭೂತಾನ್ ನಲ್ಲಿ 600 MW ಕೊಲೋಂಗ್ಚು JU ಹೈಡ್ರೋಇಲೆಕ್ಟ್ರಿಕ್ ಯೋಜನೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಒಪ್ಪಂದ ಭೂತಾನ್ ಸರ್ಕಾರ ಮತ್ತು ಕೊಲೋಂಗ್ಚು ಹೈಡ್ರೋ ಎನರ್ಜಿ ಲಿ. ನಡುವೆ ನಡೆಯಿತು ಎಂದು ವರದಿಗಳು ತಿಳಿಸಿವೆ.
ಈ ಒಪ್ಪಂದ ಎರಡು ನೆರೆಹೊರೆಯ ದೇಶಗಳ ಸಂಬಂಧವನ್ನು ಮತ್ತಷ್ಟು ವೃದ್ಧಿಸಲಿದೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ. ಭೂತಾನ್ ನಲ್ಲಿ ಆರಂಭವಾಗಲಿರುವ, ಭಾರತ ಮತ್ತು ಭೂತಾನ್ ನಡುವಿನ ಮೊದಲ ಯೋಜನೆ ಇದಾಗಿದ್ದು ಅದಕ್ಕಾಗಿ ಭೂತಾನ್ ನ ಕೊಲೋಂಗ್ಚು ಮತ್ತು ಭಾರತದ SJVNL ನಿಗಮಗಳಿಗೆ ಪ್ರಶಂಸೆಯನ್ನು ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿರುವ ಅವರು, ಈ ಯೋಜನೆಯಿಂದ ಆರ್ಥಿಕ ಸ್ಥಿತಿ ಸುಧಾರಣೆಯಾಗುವ ಮತ್ತು ಉದ್ಯೋಗ ನಿರ್ಮಾಣವಾಗಲಿದ್ದು ಆ ಮೂಲಕ ಭೂತಾನ್ ನಲ್ಲಿ ನಿರುದ್ಯೋಗ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಕೋವಿಡ್-19 ಗೆ ತುತ್ತಾಗಿ ಸಮಸ್ಯೆ ಅನುಭವಿಸುತ್ತಿರುವ ಭಾರತ ಮತ್ತು ಭೂತಾನಿನ ಆರ್ಥಿಕತೆಯ ಸುಧಾರಣೆಗೂ ಸಹಕಾರಿಯಾಗಲಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಭೂತಾನ್ ಜೊತೆಗೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತವೂ ಕೈ ಜೋಡಿಸುವ ಭರವಸೆಯನ್ನೂ ಅವರು ನೀಡಿದ್ದಾರೆ.ಅಗತ್ಯವಿರುವ ಆರೋಗ್ಯ ರಕ್ಷಣಾ ಕಿಟ್ಗಳು, ಔಷಧಗಳು ಸೇರಿದಂತೆ ಇನ್ನಿತರ ಅವಶ್ಯಕ ವಸ್ತುಗಳನ್ನು ನೀಡುವ ಮೂಲಕವೂ ಇಂತಹ ಸಂದಿಗ್ಧ ಸಂದರ್ಭದಲ್ಲಿ ಭೂತಾನ್ಗೆ ನೆರವು ನೀಡಲಾಗುತ್ತದೆ ಎಂದೂ ಜೈಶಂಕರ್ ಅವರು ಭರವಸೆ ನೀಡಿದ್ದಾರೆ.
ಈ ಒಪ್ಪಂದ ಕೇವಲ ಎರಡು ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಸುವುದು ಮಾತ್ರವಲ್ಲದೆ ಜಗತ್ತಿಗೇ ಮಾದರಿಯಾಗಲಿದೆ ಎಂದೂ ಜೈಶಂಕರ್ ತಿಳಿಸಿದ್ದಾರೆ. ನೆರೆಹೊರೆಯ ರಾಷ್ಟ್ರಗಳ ನಡುವಿನ ಸ್ನೇಹ ವೃದ್ಧಿಗೆ, ಆರ್ಥಿಕ ಸಬಲತೆಗೆ, ನಂಬಿಕೆ ಮತ್ತು ಹೊಂದಾಣಿಕೆಯ ದೃಷ್ಟಿಯಿಂದ ಈ ಒಪ್ಪಂದ ಮುಖ್ಯವಾಗಲಿದೆ ಎಂದೂ ಸಚಿವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.