ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ರೋಗ ಲಕ್ಷಣ ಇಲ್ಲದಿರುವವರಲ್ಲಿಯೂ ಸೋಂಕು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆ ಆಡಿಯಲ್ಲಿ, ಸೋಂಕಿನ ಲಕ್ಷಣಗಳನ್ನು ಹೊಂದಿರದ ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲವು ಸಂಸ್ಥೆಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ.
ಅದಕ್ಕನುಗುಣವಾಗಿ ಬಿಬಿಎಂಪಿ ಯೂ ಕಾರ್ಯ ಯೋಜನೆ ಗಳನ್ನು ಸಿದ್ಧಪಡಿಸಿದ್ದು, ಚಿಕಿತ್ಸೆಗಾಗಿ ಮೂರು ರೀತಿಯ ಸೌಲಭ್ಯಗಳನ್ನು ರೂಪಿಸಿದೆ. ಸೋಂಕಿನ ಲಕ್ಷಣಗಳು ಇಲ್ಲದೇ ಇರುವ ರೋಗಿಗಳ ಚಿಕಿತ್ಸೆಗೆ ಕೋವಿಡ್ ಆರೈಕೆ ಕೇಂದ್ರ, ಸೌಮ್ಯ ಮತ್ತು ಮಧ್ಯಮ ಲಕ್ಷಣಗಳನ್ನು ಹೊಂದಿರುವ ರೋಗಿಗಳ ಚಿಕಿತ್ಸೆಗೆ ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರ, ಗಂಭೀರ ಪರಿಣಾಮಗಳಿಂದ ಬಳಲುತ್ತಿರುವ ಕೊರೋನಾ ರೋಗಿಗಳ ಚಿಕಿತ್ಸೆಗೆ ಮೀಸಲಾದ ಕೋವಿಡ್ ಕೇಂದ್ರಗಳನ್ನು ಆರಂಭಿಸಲು ಮುಂದಾಗಿದೆ.
ಇದಕ್ಕಾಗಿ ಸರ್ಕಾರ ಕೆಲವು ಸಂಸ್ಥೆಗಳನ್ನೂ ಸಹ ಗುರುತಿಸಿದ್ದು, ಬೆಂಗಳೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ 200 ಹಾಸಿಗೆಗಳು, ವಿಶ್ವ ವಿದ್ಯಾಲಯ ಆವರಣದ ಜಿಕೆವಿಕೆ ಕೃಷಿ ವಿದ್ಯಾರ್ಥಿ ನಿಲಯಗಳಲ್ಲಿ 600 ಹಾಸಿಗೆಗಳು, ಜಿಕೆವಿಕೆ ತೋಟಗಾರಿಕಾ ವಿದ್ಯಾರ್ಥಿ ನಿಲಯದ 400 ಹಾಸಿಗೆಗಳು, ಮೆಜೆಸ್ಟಿಕ್ ನ ಹೊಟೇಲ್ ಸಿಟಿ ಸೆಂಟೊರ್ ಇಂಟರ್ನ್ಯಾಷನಲ್ ನ 200 ಹಾಸಿಗೆಗಳು, ರೆಸಿಡೆನ್ಸಿ ರಸ್ತೆಯ ಚಾನ್ಸರಿ ಪೆವಿಲಿಯನ್ ನಲ್ಲಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಬೆಂಗಳೂರಿಗೆ ಅಂತರಜಿಲ್ಲೆ ಮತ್ತು ಅಂತರರಾಜ್ಯದಿಂದ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೋಂಕನ್ನು ತೀವ್ರ ಪ್ರಮಾಣದಲ್ಲಿ ನಿಯಂತ್ರಣದಲ್ಲಿಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.