ನವದೆಹಲಿ: ಭಾರತದ ಶ್ರೇಷ್ಠ ಮಿಲಿಟರಿ ಅಧಿಕಾರಿ, ಏಳನೇ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅವರ ಪುಣ್ಯತಿಥಿಯ ಪ್ರಯುಕ್ತ ಭಾರತೀಯ ಸೇನೆಯ ವತಿಯಿಂದ ಗೌರವ ಸಲ್ಲಿಸಲಾಯಿತು. 2008 ರ ಜೂನ್ 27 ರಂದು ತಮ್ಮ 94 ನೇಯ ವಯಸ್ಸಿನಲ್ಲಿ ಮಾಣಿಕ್ ಶಾ ಅವರು ಇಹಲೋಕ ತ್ಯಜಿಸಿದ್ದರು. 1971 ರಲ್ಲಿ ಬಾಂಗ್ಲಾದೇಶ ರಚನೆಗೂ ಮೊದಲು ಪಾಕಿಸ್ಥಾನ ಮತ್ತು ಭಾರತದ ನಡುವೆ ಕದನ ನಡೆಯುವ ಸಂದರ್ಭ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಅವರು ಭಾರತೀಯ ಸೈನ್ಯದ ಮುಖ್ಯಸ್ಥರಾಗಿದ್ದರು. ಇವರು ಫೀಲ್ಡ್ ಮಾರ್ಷಲ್ ಸ್ಯಾಮ್ ಹಾರ್ಮುಸ್ಜಿ ಫ್ರಮ್ಜಿ ಜಮ್ಶೆಡ್ಜಿ ಮಾನೆಕ್ಷಾ, ಸ್ಯಾಮ್ ಮಾನೆಕ್ಷಾ ಮತ್ತು ಸ್ಯಾಮ್ ಬಹದ್ದೂರ್ ಎಂಬುದಾಗಿಯೂ ಜನಪ್ರಿಯರಾಗಿದ್ದರು.
1914 ರ ಎಪ್ರಿಲ್ 3 ರಂದು ಅಮೃತಸರದ ಪಾರ್ಸಿ ಕುಟುಂಬದಲ್ಲಿ ಮಣಿಕ್ ಶಾ ಅವರು ಜನಿಸಿದರು. ಅವರ ತಂದೆ ಬ್ರಿಟಿಷ್ ಆಡಳಿತದಲ್ಲಿ, ಭಾರತೀಯ ಸೇನೆಯ ಆರ್ಮಿ ಮೆಡಿಕಲ್ ಕಾರ್ಪ್ಸ್ ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾಣಿಕ್ ಶಾ ಅವರ ಕಿರಿಯ ಸಹೋದರ ಸಹಿತ ಸೇನೆಯಲ್ಲಿಯೇ ಕಆರ್ಯ ನಿರ್ವಹಿಸಿದವರು. ಮಾಣಿಕ್ ಶಾ ಅವರಿಗೂ ತಮ್ಮ ತಂದೆಯಂತೆಯೇ ವೈದ್ಯಕೀಯ ವೃತ್ತಿಯನ್ನು ಮಾಡುವ ಆಕಾಂಕ್ಷೆ ಇದ್ದು, ಅಧ್ಯಯನಕ್ಕಾಗಿ ಲಂಡನ್ ಗೆ ತೆರಳುವ ಆಶಯವನ್ನೂ ಅವರು ಬಾಲ್ಯದಲ್ಲಿ ಹೊಂದಿದ್ದರು. ಆದರೆ ಅವರು ಚಿಕ್ಕ ವಯಸ್ಸಿನವರಾದ ಕಾರಣದಿಂದ ಅವರನ್ನು ಲಂಡನ್ಗೆ ಕಳುಹಿಸಲು ಹೆತ್ತವರು ಒಪ್ಪುವುದಿಲ್ಲ. ಆ ಬಳಿಕ ಅಮೃತಸರದ ಹಿಂದೂ ಸಭಾ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಅವರು ಶಿಕ್ಷಣ ಮುಗಿಸಿದರು.
ಆ ಬಳಿಕ ಅವರು ಭಾರತೀಯ ಮಿಲಿಟರಿ ಅಧಿಕಾರಿಗಳಿಗೆ ತರಬೇತಿ ನೀಡುವ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಅರ್ಜಿ ಸಲ್ಲಿಸಿ, ಅದರಲ್ಲಿ 6ನೇ ಶ್ರೇಯಾಂಕ ಪಡೆದರು. ಅಲ್ಲಿಂದ ಮಿಲಿಟರಿ ಜೀವನವನ್ನು ಆರಂಭಿಸಿದ ಅವರು ತಮ್ಮ ನಾಲ್ಕು ದಶಕಗಳ ಅವಧಿಯಲ್ಲಿ, ಐದು ಯುದ್ಧಗಳಲ್ಲಿ ಭಾಗಿಯಾಗಿದ್ದರು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿಯೂ ಅವರು ತಮ್ಮ ಸೇವೆಯನ್ನು ನೀಡಿದ್ದಾರೆ. 1935 ರ ಫೆಬ್ರವರಿ1 ರಂದು ನಾಲ್ಕನೇ ಬೆಟಾಲಿಯನ್ ನ 2 ನೇ ಲೆಫ್ಟಿನೆಂಟ್ ಆಗಿ 12 ನೇ ಫ್ರಾಂಟಿಯರ್ ಫೋರ್ಸ್ ರೆಜಿಮೆಂಟ್ ಅನ್ನು ಮುನ್ನಡೆಸಿದರು. ಈ ಸಂದರ್ಭದಲ್ಲಿ ನಡೆದ ಎರಡನೇ ಮಹಾಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ ಇವರ ಸಾಹಸಕ್ಕೆ ಮಿಲಿಟರಿ ಕ್ರಾಸ್ ನೀಡಿ ಗೌರವಿಸಲಾಯಿತು.
ಆ ಬಳಿಕ ಬರ್ಮಾ ಜೊತೆಗಿನ ಯುದ್ಧದಲ್ಲಿ ಮಿಷನ್ ಗನ್ ನಿಂದ ಸಿಡಿದ ಗುಂಡುಗಳು ತಾಕಿ ಗಂಭೀರವಾಗಿ ಗಾಯಗೊಂಡರು. ಈ ವೇಳೆ ಶಸ್ತ್ರಚಿಕಿತ್ಸೆ ಗೂ ಒಳಗಾದ ಇವರ ದೇಹದಿಂದ ಒಟ್ಟು ಏಳು ಗುಂಡುಗಳನ್ನು ಹೊರತೆಗೆಯಲಾಗಿತ್ತು. ಅತ್ಯಂತ ಗಂಭೀರವಾಗಿ ಗಾಯಗೊಂಡಿದ್ದ ಮಾಣಿಕ್ ಶಾ ಅವರನ್ನು ಉಳಿಸಿಕೊಳ್ಳುವುದು ಅಸಾಧ್ಯ ಎಂಬುದಾಗಿ ಹೇಳಿದ್ದ ವೈದ್ಯಲೋಕಕ್ಕೆ ಅಚ್ಚರಿ ಎನಿಸುವಂತೆ ಆ ಯುದ್ಧದಲ್ಲಿ ಅವರು ಬದುಕುಳಿದರು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಅವರನ್ನು 8 ನೇಯ ಗೂರ್ಖಾ ರೈಫಲ್ಸ್ ಗೆ ನಿಯೋಜಿಸಲಾಯಿತು. 1969 ರಲ್ಲಿ ಮಿಲಿಟರಿಯ ಏಳನೇ ಮುಖ್ಯಸ್ಥರಾಗಿ ಆಯ್ಕೆಯಾದರು. 1971 ರ ಭಾರತ ಮತ್ತು ಪಾಕಿಸ್ಥಾನದ ನಡುವಿನ ಯುದ್ಧದಲ್ಲಿ ಭಾರತಕ್ಕೆ ಮಹತ್ವದ ಜಯ ಸಿಕ್ಕಿತು. 1972 ರಲ್ಲಿ ಇವರನ್ನು ನೇಪಾಳಿ ಸೇನೆಯ ಹಾನರರೀ ಜನರಲ್ ಆಗಿ ನೇಮಿಸಲಾಯಿತು. ಭಾರತೀಯ ಈಸ್ಟರ್ನ್ ಆರ್ಮಿಯ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ನಾಗಾಲ್ಯಾಂಡ್ ಬಂಡಾಯವನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ಮಾಣಿಕ್ ಶಾ ಅವರಿಗೆ 1968 ರಲ್ಲಿ ಭೂಷಣ ಪುರಸ್ಕಾರ ನೀಡಿ ಗಂರವಿಸಲಾಗಿದೆ.
1972 ರಲ್ಲಿ ಅವರಿಗೆ ಪದ್ಮವಿಭೂಷಣ ಪುರಸ್ಕಾರದ ಗೌರವವೂ ಸಂದಿದೆ. ಎರಡನೇಯ ಮಹಾಯುದ್ಧ, ಪಾಕಿಸ್ಥಾನ ಮತ್ತು ಅಫ್ಘಾನಿಸ್ತಾನದ ಬುಡಕಟ್ಟು ಜನಾಂಗದ ವಿರುದ್ಧ 1948 ರಲ್ಲಿ ನಡೆದ ಕಾಶ್ಮೀರ ಯುದ್ಧ, 1962 ರ ಇಂಡೋ-ಸಿನೋ ಯುದ್ಧ, 1965 ಮತ್ತು 1971 ರ ಇಂಡೋ- ಪಾಕ್ ಯುದ್ಧಗಳಲ್ಲಿ ಮಾಣಿಕ್ ಶಾ ಅವರು ಭಾಗವಹಿಸಿದ್ದು ,ಭಾರತದ ಮಿಲಿಟರಿ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 1973 ರಲ್ಲಿ ತಮ್ಮ ನಿವೃತ್ತಿಯ ಬಳಿಕ ಫೀಲ್ಡ್ ಮಾರ್ಷಲ್ ಹುದ್ದೆಗೆ ಭಡ್ತಿ ಪಡೆದ ಭಾರತೀಯ ಸೇನೆಯ ಮೊದಲ ಜನರಲ್ ಎಂಬ ಖ್ಯಾತಿಗೂ ಅವರು ಭಾಜನರಾಗಿದ್ದಾರೆ. ತಮ್ಮ ಶೌರ್ಯದ ಮೂಲಕವೇ ಸೈನಿಕರಿಗೆ ಇಂದಿಗೂ ಚಿರಸ್ಮರಣೀಯರಾಗಿ ನೆನಪಿನಲ್ಲಿ ಉಳಿದಿದ್ದಾರೆ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ.
ಇವರ ಪುಣ್ಯ ತಿಥಿಯ ಸಂದರ್ಭದಲ್ಲಿ ಇವರನ್ನು ಸ್ಮರಿಸಿ ಭಾರತೀಯ ಸೇನೆ ಟ್ವೀಟ್ ಮಾಡಿದ್ದು, ದೇಶವನ್ನು ಯಾವುದೇ ಆಕ್ರಮಣಕಾರಿ ಶತ್ರುಗಳಿಂದ ರಕ್ಷಿಸಿಕೊಳ್ಳಬೇಕಾದರೆ, ಭದ್ರತೆಯ ಬಗ್ಗೆ ಕಾಳಜಿ ವಹಿಸಬೇಕು. ಇದರ ಅರ್ಥ ನಾವು ಹೋರಾಟಕ್ಕೆ ಸದಾ ಸಿದ್ಧರಿರಬೇಕು ಎಂದು. ಹೋರಾಡಬೇಕು, ಗೆಲ್ಲಬೇಕು.. ಸೋತವರಿಗೆ ಇಲ್ಲಿ ಅವಕಾಶವಿಲ್ಲ ಎಂಬುದನ್ನು ಅರಿತುಕೊಂಡು ಹೋರಾಟ ನಡೆಸಬೇಕು ಎಂದು ಬರೆದುಕೊಂಡಿದೆ. ಆ ಮೂಲಕ ಮಾಣಿಕ್ ಶಾ ಅವರು ಸದಾ ಯುದ್ಧಕ್ಕೆ ಸಿದ್ಧರಾಗಿಯೇ ಇದ್ದು ,ಗೆಲುವಿನ ಚಿಂತನೆಯ ಜೊತೆಗೆಯೇ ಯುದ್ಧ ನಡೆಸುತ್ತಿದ್ದರು. ಜೊತೆಗೆ ಇತರರಿಗೂ ಸ್ಫೂರ್ತಿ ತುಂಬುವ ಕೆಲಸವನ್ನು ತಮ್ಮ ಜೀವನದ ಮೂಲಕವೇ ತೋರಿಸಿಕೊಟ್ಟಿದ್ದರು ಎಂಬುದನ್ನು ಭಾರತೀಯ ಸೇನೆ ಈ ಸಂದರ್ಭ ನೆನಪಿಸಿಕೊಂಡಿದೆ. ತಮ್ಮ ಶೌರ್ಯದ ಮೂಲಕವೇ ಇಂದಿಗೂ ಮಾಣಿಕ್ ಶಾ ಅವರು ಯೋಧರಿಗೆ ಮಾದರಿಯಾಗಿದ್ದು, ಅವರನ್ನು ಸೇನೆ ನೆನಪಿಸಿಕೊಳ್ಳುವ ಕೆಲಸವನ್ನು ಮಾಡಿದೆ.
General MM Naravane #COAS and all ranks of #IndianArmy pay homage and rich tribute to Field Marshal SHFJ Manekshaw (3 Apr 14 – 27 Jun 08) on his death anniversary. He led the Indian Army in the Victory of #1971 war. pic.twitter.com/FfIyR9T1Jh
— ADG PI – INDIAN ARMY (@adgpi) June 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.