ನವದೆಹಲಿ: ದೇಶವನ್ನು ಕೊರೋನಾ ಮುಕ್ತನನ್ನಾಗಿ ಮಾಡಲು ಪಣ ತೊಟ್ಟಿರುವ ಕೇಂದ್ರ ಸರ್ಕಾರ ಅದಕ್ಕಾಗಿ ಅನೇಕ ನಿಯಂತ್ರಣ ಕ್ರಮ, ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಸದ್ಯ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಕೆಲಸಕ್ಕೆ ಮುಂದಾಗಿದ್ದು, ಪಿಎಂ ಕೇರ್ಸ್ ಫಂಡ್ ಬಳಸಿ ದೇಶಕ್ಕೆ 50000 ದಷ್ಟು ಸ್ವದೇಶೀ ನಿರ್ಮಿತ ವೆಂಟಿಲೇಟರ್ ಗಳನ್ನು ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ವೆಂಟಿಲೇಟರ್ ಗಳನ್ನು ಹಂಚಿಕೆ ಮಾಡಲು ಮುಂದಾಗಿದೆ. ಕೊರೋನಾ ಚಿಕಿತ್ಸೆ ನೀಡುತ್ತಿರುವ ಸರ್ಕಾರಿ ಆಸ್ಪತ್ರೆಗಳನ್ನು ಗಮನದಲ್ಲಿಟ್ಟುಕೊಂಡು ವೆಂಟಿಲೇಟರ್ ಗಳನ್ನು ನೀಡಲಾಗುತ್ತಿದ್ದು ಅದಕ್ಕಾಗಿ 2000 ಕೋಟಿ ರೂ.ಗಳನ್ನು ಬಳಕೆ ಮಾಡುವುದಾಗಿಯೂ ತಿಳಿಸಿದೆ. ಅಲ್ಲದೆ, 1000 ಕೋಟಿ ರೂ. ಗಳನ್ನು ವಲಸಿಗ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಕೆ ಮಾಡುವುದಾಗಿಯೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈಗಾಗಲೇ ವೆಂಟಿಲೇಟರ್ ತಯಾರಿಕೆಗೆ ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. 30 ಸಾವಿರ ವೆಂಟಿಲೇಟರ್ ಗಳನ್ನು ಭಾರತ್ ಎಲೆಕ್ಟ್ರಾನಿಕ್ ಲಿ. ಸಂಸ್ಥೆ ತಯಾರಿಸಿದರೆ, ಉಳಿದಂತೆ 10000 ವೆಂಟಿಲೇಟರ್ ಗಳನ್ನು ಅಗ್ವಾ ಹೆಲ್ತ್ಕೇರ್, 5650 ವೆಂಟಿಲೇಟರ್ ಗಳನ್ನು ಎಎಂಟಿಝಡ್ ಬೇಸಿಕ್ , 4000 ವೆಂಟಿಲೇಟರ್ ಗಳನ್ನು ಎಎಂಟಿಝಡ್ ಹೈ ಎಂಡ್ ಸಂಸ್ಥೆ ಮತ್ತು 350 ವೆಂಟಿಲೇಟರ್ ಗಳನ್ನು ಅಲೈಡ್ ಮೆಡಿಕಲ್ ಸಂಸ್ಥೆ ತಯಾರಿಸಲು ಒಪ್ಪಂದ ಮಾಡಿಕೊಂಡಿವೆ. ಈ ವರೆಗೆ 2923 ವೆಂಟಿಲೇಟರ್ ಗಳನ್ನು ತಯಾರು ಮಾಡಲಾಗಿದ್ದು, ಅವುಗಳಲ್ಲಿ 1340 ವೆಂಟಿಲೇಟರ್ ಗಳನ್ನು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ.
ಮಹಾರಾಷ್ಟ್ರ (275), ದೆಹಲಿ (275), ಗುಜರಾತ್ (175), ಬಿಹಾರ (100), ಕರ್ನಾಟಕ (90), ರಾಜಸ್ಥಾನ (75) ವೆಂಟಿಲೇಟರ್ ಗಳನ್ನು ನೀಡಲಾಗಿದೆ. ಜೂನ್ 2020ರ ಅಂತ್ಯದ ವೇಳೆಗೆ, ಹೆಚ್ಚುವರಿ 14,000 ವೆಂಟಿಲೇಟರ್ಗಳನ್ನು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗುತ್ತದೆ ಎಂದೂ ಕೇಂದ್ರ ತಿಳಿಸಿದೆ.
ಇನ್ನು ವಲಸಿಗ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಕೆ ಮಾಡುವ 1000 ಕೋಟಿ ರೂ. ಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ. ವಲಸಿಗರ ಆಹಾರ, ವಸತಿ, ವೈದ್ಯಕೀಯ ಚಿಕಿತ್ಸೆ, ಸಂಚಾರ ಮೊದಲಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಳಕೆ ಮಾಡಲಾಗುತ್ತದೆ ಎಂದೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಮಹಾರಾಷ್ಟ್ರ (181 ಕೋಟಿ), ಉತ್ತರ ಪ್ರದೇಶ (103 ಕೋಟಿ), ತಮಿಳುನಾಡು (83 ಕೋಟಿ), ಗುಜರಾತ್ (66 ಕೋಟಿ), ದೆಹಲಿ (55 ಕೋಟಿ), ಪಶ್ಚಿಮ ಬಂಗಾಳ (53 ಕೋಟಿ), ಬಿಹಾರ (51 ಕೋಟಿ) ), ಮಧ್ಯಪ್ರದೇಶ (50 ಕೋಟಿ), ರಾಜಸ್ಥಾನ (50 ಕೋಟಿ) ಮತ್ತು ಕರ್ನಾಟಕ (34 ಕೋಟಿ) ರೂ. ಗಳನ್ನು ಹಂಚಿಕೆ ಮಾಡುವುದಾಗಿಯೂ ಕೇಂದ್ರ ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.