ನವದೆಹಲಿ: 8 ರಾಜ್ಯಗಳ 19 ಸ್ಥಾನಗಳಿಗೆ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಜಾರ್ಖಾಂಡ್ನ ಮಾಜಿ ಸಿಎಂ ಶಿಬು ಸೊರೇನ್ ಸೇರಿದಂತೆ ಹಲವಾರು ಗಣ್ಯರು ರಾಜ್ಯಸಭೆಗೆ ಆಯ್ಕೆಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
19 ಸ್ಥಾನಗಳಲ್ಲಿ ಆಂಧ್ರಪ್ರದೇಶ ಮತ್ತು ಗುಜರಾತ್ನ ತಲಾ ನಾಲ್ಕು ಸ್ಥಾನಗಳು, ಮಧ್ಯಪ್ರದೇಶ ಮತ್ತು ರಾಜಸ್ಥಾನದ ತಲಾ ಮೂರು ಸ್ಥಾನಗಳು, ಜಾರ್ಖಂಡ್ನ ತಲಾ ಎರಡು ಮತ್ತು ಮಣಿಪುರ, ಮಿಜೋರಾಂ ಮತ್ತು ಮೇಘಾಲಯದ ತಲಾ ಒಂದು ಸ್ಥಾನಗಳು ಸೇರಿವೆ.
ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಆಂಧ್ರಪ್ರದೇಶದ ನಾಲ್ಕು ರಾಜ್ಯಸಭಾ ಸ್ಥಾನಗಳನ್ನು ಗೆದ್ದುಕೊಂಡಿದೆ. ಪಕ್ಷದ ಅಭ್ಯರ್ಥಿಗಳಾದ ಪಿಲ್ಲಿ ಸುಭಾಷ್ ಚಂದ್ರ ಬೋಸ್, ಮೊಪಿದೇವಿ ವೆಂಕಟ ರಮಣ ರಾವ್, ಅಲ್ಲಾ ಅಯೋಧ್ಯರಮಿ ರೆಡ್ಡಿ ಮತ್ತು ಪರಿಮಲ್ ನಟ್ವಾನಿ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಲಾಯಿತು.
ಗುಜರಾತ್ನ ನಾಲ್ಕು ಸ್ಥಾನಗಳಲ್ಲಿ, ಆಡಳಿತಾರೂಢ ಬಿಜೆಪಿಯು ಮೂರು ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ಗೆ ಒಂದು ಸ್ಥಾನ ಸಿಕ್ಕಿತು. ಆದರೆ, ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿ ಭಾರತಿ ಸಿನ್ಹ ಸೋಲಂಕಿ ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್ ಪಕ್ಷ ಎತ್ತಿದ ಕೆಲವು ತಾಂತ್ರಿಕ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ ಎಣಿಕೆ ವಿಳಂಬವಾಯಿತು.
ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಎರಡು ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಒಂದು ಸ್ಥಾನವನ್ನು ಗಳಿಸಿತು. ಕಾಂಗ್ರೆಸ್ ನಾಯಕರಾದ ಕೆ ಸಿ ವೇಣುಗೋಪಾಲ್ ಮತ್ತು ನೀರಜ್ ದಂಗಿ ಮತ್ತು ಬಿಜೆಪಿಯ ರಾಜೇಂದ್ರ ಗೆಹ್ಲೋಟ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು. ಮಧ್ಯಪ್ರದೇಶದಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಒಂದು ಸ್ಥಾನವನ್ನು ಗಳಿಸಿದೆ. ರಾಜ್ಯಸಭೆಗೆ ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಬಿಜೆಪಿಯ ಸುಮೇರ್ ಸಿಂಗ್ ಸೋಲಂಕಿ ಮತ್ತು ಕಾಂಗ್ರೆಸ್ ನಿಂದ ದಿಗ್ವಿಜಯ ಸಿಂಗ್ ಆಯ್ಕೆಯಾಗಿದ್ದಾರೆ.
ಜಾರ್ಖಂಡ್ನಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ದೀಪಕ್ ಪ್ರಕಾಶ್ ಮತ್ತು ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಸ್ಥಾನಗಳನ್ನು ಗೆದ್ದಿದ್ದಾರೆ.
ಮೇಘಾಲಯದ ಏಕೈಕ ರಾಜ್ಯಸಭಾ ಸ್ಥಾನವನ್ನು ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ (ಎಂಡಿಎ) ಅಭ್ಯರ್ಥಿ ಡಾ.ಡಬ್ಲ್ಯು.ಆರ್. ಖಾರ್ಲುಖಿ ಅವರು ಗೆದ್ದರು. ಇವರು ಕಾಂಗ್ರೆಸ್ ಅಭ್ಯರ್ಥಿ ಕೆನಡಿ ಖೈರೀಮ್ ಅವರನ್ನು ಸೋಲಿಸಿದರು.
ಮಿಜೋರಾಂನ ಏಕೈಕ ಸ್ಥಾನವನ್ನು ಆಡಳಿತ ಮಿಜೋ ನ್ಯಾಷನಲ್ ಫ್ರಂಟ್ನ ಕೆ ವನ್ಲಾಲ್ವೆನಾ ಗೆದ್ದುಕೊಂಡರು.
ಅರುಣಾಚಲ ಪ್ರದೇಶದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ನಾಮಿನಿ ನಬಮ್ ರೆಬಿಯಾ ಅವಿರೋಧವಾಗಿ ಆಯ್ಕೆಯಾದರು.
ಮಣಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಲೀಶೆಂಬಾ ಸನಜೋಬಾ ಅವರು ಏಕೈಕ ರಾಜ್ಯಸಭಾ ಸ್ಥಾನವನ್ನು ಗೆದ್ದರು. ಅವರು ಕಾಂಗ್ರೆಸ್ ಅಭ್ಯರ್ಥಿ ಟಿ.ಮಂಗೀಬಾಬು ಅವರನ್ನು ಸೋಲಿಸಿದರು.
ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದ್ದ ಕರ್ನಾಟಕದಲ್ಲಿ ಎಲ್ಲ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅವರೆಂದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಮತ್ತು ಬಿಜೆಪಿ ನಾಯಕರಾದ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.