ನವದೆಹಲಿ: ಒಂದೆಡೆಯಲ್ಲಿ ಚೀನಾದ ಕೊರೋನಾವೈರಸ್ ಜಗತ್ತನ್ನೇ ಕಂಗೆಡಿಸಿದ್ದು, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಇದರಿಂದ ಸಂಕಷ್ಟ ಅನುಭವಿಸುತ್ತಿವೆ. ಇನ್ನೊಂದೆಡೆ ಲಡಾಕ್ ಗಡಿಯಲ್ಲಿ ಸುಖಾ ಸುಮ್ಮನೆ ಚೀನಾ ಭಾರತದ ಮೇಲೆ ಆಕ್ರಮಣ ನಡೆಸುತ್ತಿದೆ. ಈ ಗಡಿ ಸಂಘರ್ಷದ ಕಾರಣದಿಂದಾಗಿ ಭಾರತದ 20 ವೀರ ಯೋಧರು ಜೀವ ಕಳೆದುಕೊಳ್ಳುವಂತಾಗಿದೆ. ಈ ಹಿನ್ನೆಲೆಯಲ್ಲಿ ಚೀನಾದ ಹುಟ್ಟಡಗಿಸಲು, ಅದಕ್ಕೆ ತಕ್ಕ ಶಾಸ್ತಿ ಮಾಡಲು ಭಾರತೀಯರೂ ಸಹ ಪಣ ತೊಡಬೇಕಾಗಿದ್ದು, ಚೀನಾ ಉತ್ಪಾದಿತ ವಸ್ತುಗಳನ್ನು ನಿಲ್ಲಿಸುವಂತೆ, ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡುವಂತೆ ವಿಶ್ವ ಹಿಂದೂ ಪರಿಷತ್ ತಿಳಿಸಿದೆ.
ಇದಕ್ಕಾಗಿ ದೇಶದಾದ್ಯಂತ ಬಾಯ್ಕಾಟ್ ಚೀನಾ, ಚೀನಾ ವಸ್ತುಗಳನ್ನು ನಿಷೇಧಿಸುವ ಬಗ್ಗೆ ಜನಜಾಗೃತಿ ಮೂಡಿಸಲು ಮನೆ ಮನೆಗೆ ತೆರಳಿ ಮಾಹಿತಿ ನೀಡುವ ಅಭಿಯಾನವನ್ನು ನಡೆಸಲಾಗುತ್ತದೆ ಎಂದು ವಿಎಚ್ಪಿ ಮಾಹಿತಿ ನೀಡಿದೆ.
ಈ ಕುರಿತು ಮಾತನಾಡಿರುವ ವಿಎಚ್ಪಿ ಜನರಲ್ ಸೆಕ್ರೆಟರಿ ಮಿಲಿಂದ್ ಪರಾಂಡೆ ಅವರು, ಭಾರತದ ಸೇನೆಯ ಮೇಲೆ ದಾಳಿ ನಡೆಸುವ ಮೂಲಕ ಚೀನಾ ಅಹಂಕಾರ ಮೆರೆದಿದೆ. ಇದರ ಸೊಕ್ಕಡಗಿಸಬೇಕಾದರೆ ಭಾರತೀಯರು ಚೀನಾ ವಸ್ತುಗಳು, ಚೀನಾದ ಆಪ್ ಗಳ ಬಳಕೆಯನ್ನು ನಿಲ್ಲಿಸಬೇಕಾಗಿದೆ. ಆ ಮೂಲಕ ಚೀನಾಕ್ಕೆ ಆರ್ಥಿಕ ಹೊಡೆತ ನೀಡುವ ಮೂಲಕ ಚೀನಾದ ಬೆನ್ನುಮೂಳೆ ಮುರಿಯುವ ವಾಗ್ದಾನ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿಎಚ್ಪಿ ವಕ್ತಾರ ವಿನೋದ್ ಬನ್ಸಾಲ್ ಅವರು, ಚೀನಾ ವಸ್ತುಗಳನ್ನು ಭಾರತದಲ್ಲಿ ಬಹಿಷ್ಕಾರ ಮಾಡುವ, ಅದರ ಬಳಕೆಯಿಂದಾಗುವ ಅನಾಹುತಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಹಿಂಪ ಮತ್ತು ಭಜರಂಗದಳ ಸೇರಿದಂತೆ ಇನ್ನಿತರ ಸಂಘಟನೆಗಳು ಮನೆ ಮನೆಗೆ ತೆರಳಿ ಜನಜಾಗೃತಿ ಅಭಿಯಾನವನ್ನು ನಡೆಸಲಿದೆ. ಭಾರತದ ಯೋಧರು ಗಡಿಯಲ್ಲಿ ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಿದರೆ, ಆರ್ಥಿಕ ಹೊಡೆತ ನೀಡಿ ಕಂಗೆಡುವಂತೆ ಮಾಡುವಲ್ಲಿ ಭಾರತೀಯರು ಪ್ರಯತ್ನ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಚೀನಾ ವಿರುದ್ಧ ಹೋರಾಡುವಲ್ಲಿ ಭಾರತೀಯ ಯೋಧರು ಸಮರ್ಥರಾಗಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿಕೊಡಲಿದೆ ಎಂಬ ಭರವಸೆಯನ್ನು ವಿಎಚ್ಪಿ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.