ಉತ್ತರಾಖಂಡ: ಕೊತ್ತಂಬರಿ ಗಿಡ ಅಬ್ಬಬ್ಬಾ ಎಂದರೆ ಎರಡರಿಂದ ಮೂರು ಅಡಿ ಎತ್ತರ ಬೆಳೆಯಬಹುದು. ಆದರೆ ಉತ್ತರಾಖಂಡದ 47 ವರ್ಷದ ರೈತರೊಬ್ಬರು ಬರೋಬ್ಬರಿ 7.1 ಫೀಟ್ (21.6 ಮೀ.) ಎತ್ತರದ ಕೊತ್ತಂಬರಿ ಗಿಡಗಳನ್ನು ಬೆಳೆಯುವ ಮೂಲಕ ಗಿನ್ನಿಸ್ ಪುಸ್ತಕದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಉತ್ತರಾಖಂಡ ರಾಜ್ಯದ ರಾಣಿಖೇತ್ ನ ಬಿಲ್ಕೇಶ್ ಪ್ರದೇಶದ ರೈತ ಗೋಪಾಲ ದತ್ ಉಪ್ರೇತಿ ಎಂಬವರೇ ಎತ್ತರದ ಕೊತ್ತಂಬರಿ ಗಿಡಗಳನ್ನು ಬೆಳೆಯುವ ಮೂಲಕ ದಾಖಲೆ ನಿರ್ಮಿಸಿರುವ ಪ್ರಗತಿಪರ ಕೃಷಿಕ. ತಮ್ಮ ನಾಲ್ಕು ಎಕರೆಗಳಷ್ಟು ಕೃಷಿ ಭೂಮಿಯಲ್ಲಿ ಸೇಬು ಹಣ್ಣು ಸೇರಿದಂತೆ ಇನ್ನಿತರ ಬೆಳೆಗಳನ್ನು ಸಾವಯವ ರೀತಿಯಲ್ಲಿಯೇ ಬೆಳೆಯುತ್ತಿರುವ ಈ ರೈತ, ಹಿಮಾಲಯದ ಕೃಷಿ ತಂತ್ರಜ್ಞಾನ ಗಳನ್ನು ಅಳವಡಿಸಿಕೊಂಡು ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸೆಗಣಿ ಮತ್ತು ಬೇವು ಮಿಶ್ರಿತ ಸಾವಯವ ಗೊಬ್ಬರವನ್ನೇ ಇವರು ತಮ್ಮ ಕೃಷಿ ಭೂಮಿಗೆ, ಬೆಳೆಗಳಿಗೆ ಉಣಿಸುತ್ತಿದ್ದು ಆ ಮೂಲಕ ಉತ್ತಮ ಫಸಲು ಪಡೆಯುತ್ತಿದ್ದಾರೆ. ಈ ಬಾರಿ ಸಾವಯವ ರೀತಿಲ್ಲಿಯೇ 7.1 ಅಡಿಗಳ ಕೊತ್ತಂಬರಿ ಗಿಡಗಳ ಕೃಷಿ ಮಾಡಿ ಕಳೆದ ಎಪ್ರಿಲ್ ತಿಂಗಳಿನಲ್ಲಿ ಗಿನ್ನಿಸ್ ದಾಖಲೆ ಬರೆಯುವ ಮೂಲಕ ಸಾಧನೆ ಮೆರೆದಿದ್ದಾರೆ.
ಈ ಬಗ್ಗೆ ಗಿನ್ನಿಸ್ ರೆಕಾರ್ಡ್ ಬುಕ್ ತನ್ನ ಅಧಿಕೃತ ವೆಬ್ಸೈಟ್ ನಲ್ಲಿಯೂ ಬರೆದುಕೊಂಡಿದ್ದು, “2020 ರ ಎಪ್ರಿಲ್ ತಿಂಗಳಿನಲ್ಲಿ ಭಾರತದ ಉತ್ತರಾಖಂಡದ ರಾಣಿಖೇತ್ನ ಗೋಪಾಲ್ ಉಪ್ರೇತಿ ಅವರು 7.1 ಅಡಿಗಳಷ್ಟು ಎತ್ತರದ, ಕಾಂಡ ಒಂದು ಇಂಚುಗಳಷ್ಟು ದಪ್ಪವಿರುವ ಕೊತ್ತಂಬರಿ ಗಿಡಗಳನ್ನು ಬೆಳೆಯುವ ಮೂಲಕ ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ಬರೆದಿದ್ದಾರೆ. ಇವರು ಹಿಮಾಲಯ ಮಾದರಿಯ ಕೃಷಿ ಪದ್ಧತಿಯನ್ನು ಅನುಸರಣೆ ಮಾಡುತ್ತಿದ್ದು, ಯಾವುದೇ ರಾಸಾಯನಿಕ ಬಳಸದೆ, ಆರ್ಟಿಫಿಷಿಯಲ್ ಕೃಷಿಯ ಮೊರೆ ಹೋಗದೆಯೇ ಸಾವಯವ ಪದ್ದತಿಯನ್ನು ಅನುಸರಿಸಿ ಈ ದಾಖಲೆ ನಿರ್ಮಿಸಿದ್ದಾರೆ” ಎಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಗೋಪಾಲ್ ಉಪ್ರೇತಿ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನ ಅಧಿಕೃತ ವೆಬ್ಸೈಟ್ ನ ಮೂಲಕ ಕೆಲವು ದಿನಗಳ ಹಿಂದಷ್ಟೇ ತಾನು ಸಲ್ಲಿಸಿದ ಗಿನ್ನಿಸ್ ರೆಕಾರ್ಡ್ ಅರ್ಜಿ ಒಪ್ಪಿತವಾಗಿರುವುದು ತಿಳಿಯಿತು. ವಿಶ್ವದಲ್ಲೇ ಅತೀ ಎತ್ತರದ ಕೊತ್ತಂಬರಿ ಸೊಪ್ಪಿನ ತೋಟವನ್ನು ನಿರ್ಮಾಣ ಮಾಡಿದ ಕಾರಣಕ್ಕಾಗಿ ತನ್ನ ಹೆಸರನ್ನು ಗಿನ್ನಿಸ್ ರೆಕಾರ್ಡ್ ಪುಸ್ತಕದಲ್ಲಿ ಸೇರಿಸಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ವರೆಗೆ 5.9 ಅಡಿಗಳಷ್ಟು ಎತ್ತರದ ಕೊತ್ತಂಬರಿ ಗಿಡಗಳು ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ನಿರ್ಮಿಸಿತ್ತು.
ಇವರು ಬೆಳೆದ ಕೊತ್ತಂಬರಿ ಗಿಡಗಳನ್ನು ಅಲ್ಮೋರಾ ಜಿಲ್ಲೆಯ ಚೀಫ್ ಹಾಟಿಕಲ್ಚರ್ ಆಫೀಸರ್ ಅವರೇ ಸ್ವತಃ ಭೇಟಿ ನೀಡಿ ಅಳೆದು ಪ್ರಮಾಣಪತ್ರ ನೀಡಿದ್ದರು.
ಕೊತ್ತಂಬರಿ ಸೊಪ್ಪಿನ ವೈಜ್ಞಾನಿಕ ಹೆಸರು ಕೊರಿಯಾಂಡ್ರಮ್ ಸ್ಯಾಟಿವಮ್ ಎಂದಾಗಿದ್ದೂ, ಇದು ವಾರ್ಷಿಕ ಅಂದರೆ ಸಂಪೂರ್ಣ ವರ್ಷಗಳ ಕಾಲ ಔಷಧೀಯ ಗುಣಗಳನ್ನು ಹೊಂದಿದ ಸಸ್ಯವಾಗಿಯೂ ಗುರುತಿಸಿಕೊಂಡಿದೆ. ಜೊತೆಗೆ ಜಗತ್ತಿನ ಎಲ್ಲಾ ದೇಶಗಳಲ್ಲಿಯೂ ಕೊತ್ತಂಬರಿ ಸೊಪ್ಪು ಮತ್ತು ಕೊತ್ತಂಬರಿ ಬೀಜಗಳ ಬಳಕೆಯನ್ನು ನಾವು ಕಾಣಬಹುದಾಗಿದೆ.
2011 ರ ವರೆಗೆ ದೆಹಲಿಯಲ್ಲಿ ಕನ್ಸ್ಟ್ರಕ್ಷನ್ ಕೆಲಸಗಳ ಉದ್ಯಮ ನಡೆಸುತ್ತಿದ್ದ ಗೋಪಾಲ್ ಬಳಿಕ ಊರಿಗೆ ಬಂದು ತಮ್ಮ ನಾಲ್ಕು ಎಕರೆಗಳಷ್ಟು ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 2000 ಆಪಲ್ ಗಿಡಗಳನ್ನು ನೆಟ್ಟಿದ್ದು, ಅದನ್ನು ಸಾವಯವ ಪದ್ಧತಿಯಲ್ಲೇ ಆರೈಕೆ ಮಾಡುತ್ತಿದ್ದಾರೆ. ಅದರ ಜೊತೆಗೆಯೇ ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಗಿಡಗಳನ್ನೂ ಬೆಳೆಯುತ್ತಿದ್ದಾರೆ. 5 ಫೀಟ್ ಎತ್ತರದ ಕೊತ್ತಂಬರಿ ಗಿಡಗಳು ಗಿನ್ನಿಸ್ ದಾಖಲೆ ಬರೆದಿದ್ದನ್ನು ತಿಳಿದುಕೊಂಡಿದ್ದ ಇವರಿಗೆ, ಸದ್ಯ ತಮ್ಮ ತೋಟದಲ್ಲಿಯೇ ಬೆಳೆದ 7 ಫೀಟ್ ಉದ್ದದ ಕೊತ್ತಂಬರಿ ಸೊಪ್ಪಿನ ಗಿಡ ಗಮನಕ್ಕೆ ಬಂದಿದೆ. ಅದಾದ ಬಳಿಕ ಇವರು ಅದನ್ನು ಗಿನ್ನಿಸ್ ರೆಕಾರ್ಡ್ ನಲ್ಲಿ ದಾಖಲಿಸಲು ಬೇಕಾದ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಅವರ ಅರ್ಜಿ ಪುರಸ್ಕೃತವಾಗಿ, ಅವರಿಗೆ ಕೀರ್ತಿ ತಂದುಕೊಟ್ಟಿದೆ.
ಈ ದಾಖಲೆ ಇಡೀ ದೇಶಕ್ಕೆ ಸಾವಯವ ಕೃಷಿ ಇಂದಾಗುವ ಸಾಧ್ಯತೆಗಳನ್ನು ಜನರಿಗೆ ತಿಳಿಸುವ, ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ನಿದರ್ಶನವಾಗಿದೆ. ಇತರ ರೈತಾಪಿ ಜನರಿಗೂ ಇದು ಸಾವಯವ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಸಲುವಾಗಿ ಮತ್ತು ಸಾಧನೆ ಮಆಡುವ ನಿಟ್ಟಿನಲ್ಲಿಯೂ ಪ್ರೇರಣೆ ನೀಡಲಿದೆ ಎಂದು ಉಪ್ರೇತಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅಲ್ಮೋರ್ ನ ಚೀಫ್ ಹಾಟಿಕಲ್ಚರ್ ಆಫೀಸರ್ ಕೆ ಎನ್ ಪಾಂಡೆ, ತಮ್ಮ ಜೀವನದಲ್ಲಿ ಈ ವರೆಗೂ ಇಷ್ಟು ಎತ್ತರದ ಕೊತ್ತಂಬರಿ ಸೊಪ್ಪಿನ ಗಿಡವನ್ನು ನೋಡಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಅದನ್ನು ಅಳತೆ ಮಾಡುವ ಸಲುವಾಗಿ ತಾನೇ ವೈಯಕ್ತಿಕವಾಗಿ ಉಪ್ರೇತಿ ಅವರ ಕೃಷಿ ಭೂಮಿಗೆ ಹೋಗಿದ್ದಾಗಿಯೂ ಅವರು ಮಾಹಿತಿ ನೀಡಿದ್ದು, ಇದು 7.1 ಅಡಿಗಳಷ್ಟು ಎತ್ತರವಿರುವುದನ್ನು ಖಚಿತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಬಿಜೆಪಿ ಸಂಸದ ಅಜಯ್ ಭಟ್ ಅವರೂ ಟ್ವೀಟ್ ಮಾಡಿದ್ದು ರೈತನ ಸಾಧನೆಗೆ ಮೆಚ್ಚುಗೆ ಸೂಚಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.