ನವದೆಹಲಿ: ಭಾರತೀಯ ರೈಲ್ವೆ ಇಲಾಖೆ 1989 ರ ರೈಲ್ವೆ ಕಾಯ್ದೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ರೈಲು ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ಮಾಡುವ ಹಲವು ಅಪರಾಧಗಳಿಗೆ ಇನ್ನು ಮುಂದೆ ಜೈಲು ಶಿಕ್ಷೆಯ ಬದಲು ಕೇವಲ ದಂಡವನ್ನಷ್ಟೇ ವಿಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಮಹತ್ವದ ಬದಲಾವಣೆ ತರಲು ಸಿದ್ಧತೆ ನಡೆಸಿದೆ.
ಟಿಕೆಟ್ ರಹಿತ ಪ್ರಯಾಣ, ರೈಲಿನ ಫೂಟ್ ಬೋರ್ಡ್ ನಲ್ಲಿ ನೇತಾಡುವುದು ಸೇರಿದಂತೆ ಇನ್ನಿತರ ಹಲವು ಅಪರಾಧಗಳಿಗೆ ಜೈಲು ಶಿಕ್ಷೆಯ ಬದಲಾಗಿ ಕೇವಲ ದಂಡವನ್ನಷ್ಟೇ ವಿಧಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ. ನ್ಯಾಯಾಲಯಗಳ ಮೇಲಿನ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಮಹತ್ವದ ತಿದ್ದುಪಡಿಗೆ ಮುಂದಾಗಿರುವುದಾಗಿಯೂ ವಕ್ತಾರರು ಮಾಹಿತಿ ನೀಡಿದ್ದಾರೆ.
ರೈಲ್ವೆ ಅಭಿವೃದ್ಧಿಯ ದೃಷ್ಟಿಯಿಂದ ನಾಗರಿಕ ಕಿರುಕುಳವನ್ನು ತಡೆಗಟ್ಟುವುದು, ಕ್ರಿಮಿನಲ್ ಅಪರಾಧಗಳ ನಿರ್ಬಂಧ, ವ್ಯಾವಹಾರಿಕ ವಿಚಾರಗಳ ಸರಳೀಕರಣದ ದೃಷ್ಟಿಯಿಂದ ಈ ಬದಲಾವಣೆಗೆ ಮುಂದಾಗಿರುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಮುಂದೆ ಅಪರಾಧಿಗಳನ್ನು ರೈಲ್ವೆ ಪೊಲೀಸರೇ ವಿಚಾರಣೆ, ತನಿಖೆ ಮಾಡಲಿರುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈಲುಗಳು, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆ, ಅವರ ವಸ್ತುಗಳ ಸುರಕ್ಷತೆಯನ್ನು ಆರ್ ಪಿ ಎಫ್ ಮತ್ತು ಜೆ ಆರ್ ಪಿ ಗಳು ನೋಡಿಕೊಳ್ಳುತ್ತಿದ್ದು, ಅಪರಾಧಗಳು ನಡೆದ ಸಂದರ್ಭದಲ್ಲಿಯೂ ಬಂಧನ, ವಿಚಾರಣೆ ಗಳಿಗೆ ಸಂಬಂಧಿಸಿದ ಕ್ರಮಗಳನ್ನು ಆರ್ ಪಿ ಎಫ್ ತೆಗೆದುಕೊಳ್ಳಲಿದೆ ಎಂಬುದಾಗಿಯೂ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಟಿಕೆಟ್ ಇಲ್ಲದೆ ರೈಲು ಪ್ರಯಾಣ, ಚೈನ್ ಎಳೆಯುವುದು, ಕಾಯ್ದಿರಿಸಲಾದ ಭೋಗಿಯಲ್ಲಿ ಅನಧಿಕೃತ ಪ್ರಯಾಣ ಮೊದಲಾದವುಗಳಿಗೆ ದಂಡ ವಿಧಿಸುವುದಾಗಿಯೂ ತಿಳಿಸಿದ್ದಾರೆ. ಇವಿಷ್ಟೇ ಅಲ್ಲದೆ ಇಂತಹ 16 ತರಹದ ಅಪರಾಧಗಳಿಗೆ ಜೈಲು ಶಿಕ್ಷೆಯ ಬದಲಾಗಿ ಕೇವಲ ದಂಡ ಮಾತ್ರವೇ ವಿಧಿಸುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ. ಇಂತಹ ಅಪರಾಧಗಳಿಗೆ ದೊಡ್ಡ ಶಿಕ್ಷೆಗಳನ್ನು ನೀಡುವ ಬದಲು, ತಪ್ಪಿತಸ್ಥರಿಗೆ ಅವರ ತಪ್ಪುಗಳನ್ನು ಅರಿವಿಗೆ ತರುವುದು ಮುಖ್ಯ. ಈ ನಿಟ್ಟಿನಲ್ಲಿ ತಪ್ಪುಗಳನ್ನು ಮನವರಿಕೆ ಮಾಡಲು ಸ್ಥಳದಲ್ಲೇ ದಂಡ ವಿಧಿಸುವುದು, ಜೊತೆಗೆ ಇತರರಲ್ಲಿಯೂ ಅರಿವು ಮೂಡಿಸುವ ದೃಷ್ಟಿಯಿಂದ ಈ ಕ್ರಮ ಸೂಕ್ತವಾಗಿದೆ ಎಂದು ದೆಹಲಿ ಮಾಜಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಮನ್ವೆಲ್ತ್ ಮಾನವ ಹಕ್ಕುಗಳ ಹಿರಿಯ ಸಂಶೋಧಕ ರಾಜ ಭಗ್ಗಾ, ಇಂತಹ ಬದಲಾವಣೆ ಮಹತ್ವದ ಹೆಜ್ಜೆಯಾಗಿದೆ. ಆದರೆ, ಅಪರಾಧಗಳ ಸಂದರ್ಭದಲ್ಲಿ ಸಾಕ್ಷ್ಯ ಗಳ ಸರಿಯಾದ ಪರಿಶೀಲನೆ ನಡೆಸಿ ಬಳಿಕ ಕ್ರಮ ತೆಗೆದುಕೊಳ್ಳುವ ನಿರ್ಧಾರ ಹೆಚ್ಚು ಸರಿ. ಕೇಂದ್ರದ 350 ಕ್ಕೂ ಅಧಿಕ ಅಪರಾಧಗಳು ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ರೈಲ್ವೆ ಕಾಯ್ದೆಯ ಈ ಬದಲಾವಣೆ ಕ್ರಿಮಿನಲ್ ಕೇಸುಗಳು ಮತ್ತು ಸೆರೆವಾಸವನ್ನು ಕಡಿಮೆ ಮಾಡುವ ಕಾರಣಕ್ಕಾಗಿಯೇ ಮಾಡುವುದಾದರೆ, ಆರ್ಥಿಕ ಅಪರಾಧಗಳನ್ನು ಮೀರಿದ ಕಾನೂನಿನ ಶಾಸನಗಳನ್ನು ಗಮನಿಸಬೇಕಾಗಿದೆ ಎಂದೂ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.