ನವದೆಹಲಿ: ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಮುಖಾಮುಖಿಯಲ್ಲಿ 20 ಭಾರತೀಯ ಸೈನಿಕರು ವೀರ ಮರಣವನ್ನು ಅಪ್ಪಿದ್ದಾರೆ ಎಂದು ಸೇನೆಯು ಖಚಿತಪಡಿಸಿದ ಬೆನ್ನಲ್ಲೇ ದೇಶದ ಉನ್ನತ ರಾಜಕೀಯ ನಾಯಕತ್ವ ಮತ್ತು ಸೇನಾ ಮುಖ್ಯಸ್ಥರು ಕಳೆದ ತಡರಾತ್ರಿ ಭೇಟಿಯಾಗಿ ಚರ್ಚೆಗಳನ್ನು ನಡೆಸಿದರು.
ರಾತ್ರಿ 10 ಗಂಟೆ ಸುಮಾರಿಗೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್, ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಸೇನಾ ಮುಖ್ಯ ಜನರಲ್ ಎಂ.ಎಂ.ನರವಾನೆ ಉಪಸ್ಥಿತರಿದ್ದರು. ಐದು ದಶಕಗಳಲ್ಲೇ ಭಾರತ ಮತ್ತು ಚೀನಾದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಅತ್ಯಂತ ಗಂಭೀರವಾದ ಸಂಘರ್ಷ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ.
ಉಭಯ ರಾಷ್ಟ್ರಗಳ ಘರ್ಷಣೆಯ ಸಂದರ್ಭದಲ್ಲಿ ಚೀನಾದ 43 ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೀನಾವು ಗಡಿ ಭಾಗವನ್ನು ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಿದೆ ಎಂದು ಭಾರತ ಗಂಭೀರ ಆರೋಪ ಮಾಡಿದೆ. ಗಡಿಯಲ್ಲಿ ಉಭಯ ದೇಶಗಳ ಯೋಧರು ಶಸ್ತ್ರಗಳನ್ನು ಕೈಗೆತ್ತಿಕೊಂಡಿಲ್ಲ ಬದಲು ಮಲ್ಲಯುದ್ಧದ ಮೂಲಕ ಪರಸ್ಪರ ಸಂಘರ್ಷಗಳಲ್ಲಿ ತೊಡಗಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಚೀನಾ ಪಡೆಗಳಿಗೆ ಪ್ರಾಣ ಹಾನಿ ಸಂಭವಿಸಿದೆ ಎಂಬುದನ್ನು ಚೀನಾ ಅಧಿಕೃತವಾಗಿ ಒಪ್ಪಿಕೊಂಡಿದೆ. ಆದರೆ ಇದರ ಬಗ್ಗೆ ಅಂಕಿಅಂಶಗಳನ್ನು ನೀಡಿಲ್ಲ.
“ಭಾರತೀಯ ಸೈನಿಕರು ಎರಡು ಬಾರಿ ಗಡಿರೇಖೆಯನ್ನು ದಾಟಿದ್ದಾರೆ. ಚೀನಾದ ಸಿಬ್ಬಂದಿಯನ್ನು ಪ್ರಚೋದಿಸಿದ್ದಾರೆ ಮತ್ತು ಆಕ್ರಮಣ ಮಾಡಿದ್ದಾರೆ. ಇದರ ಪರಿಣಾಮವಾಗಿ ಎರಡು ಕಡೆ ಗಡಿ ಪಡೆಗಳ ನಡುವೆ ಗಂಭೀರ ದೈಹಿಕ ಮುಖಾಮುಖಿಯಾಗಿದೆ” ಎಂದು ಬೀಜಿಂಗ್ ಹೇಳಿದೆ.
ಚೀನಾದ ಆಕ್ರಮಣಕಾರಿ ಹೇಳಿಕೆಯನ್ನು ತಿರಸ್ಕರಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು, “ಗಡಿಯ ಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಚೀನಾದ ಪ್ರಯತ್ನದಿಂದಾಗಿ ಘರ್ಷಣೆ ಉಂಟಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.