ತಿರುವನಂತಪುರ: ಕೊರೋನಾ ಸಂಕಷ್ಟದಿಂದ ದೇಶ ಲಾಕ್ಡೌನ್ ಆದಾಗ ಅನೇಕ ಜನ ಮುಂದೇನಪ್ಪಾ ಎಂದು ತಲೆಗೆ ಕೈ ಹೊತ್ತು ಕೂತಿದ್ದರೆ, ಕೇರಳದ ಕೊಚ್ಚಿಯ 9 ನೇ ತರಗತಿಯ ಬಾಲಕ ಮಾತ್ರ ಈ ಲಾಕ್ಡೌನ್ ಸಂದರ್ಭವನ್ನು ಯಶಸ್ವಿಯಾಗಿ ಕಳೆದಿದ್ದಾನೆ. ಮಕ್ಕಳೆಲ್ಲಾ ಲಾಕ್ಡೌನ್ ರಜೆಯಲ್ಲಿ ಮನೆಯಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದರೆ, ಅರ್ಷದ್ ತನ್ನ ತಂದೆಯ ಅಟೊಮೊಬೈಲ್ ಅಂಗಡಿಯಲ್ಲಿದ್ದ ಗುಜರಿ ವಸ್ತುಗಳನ್ನೇ ಬಳಸಿ ಹಗುರ ಮೋಟರ್ ಸೈಕಲ್ ಒಂದನ್ನು ಸಿದ್ಧಪಡಿಸಿ ಎಲ್ಲರೂ ಆಶ್ಚರ್ಯಚಕಿತಗೊಳ್ಳುವಂತೆ ಮಾಡಿದ್ದಾನೆ.
ಕೊಚ್ಚಿಯ ಪಲ್ಲುರುತ್ತಿಯಲ್ಲಿನ ಟಿ.ಜೆ ಹಸೀಮ್ ಎಂಬವರು ಜೀವನ ನಿರ್ವಹಣೆಗಾಗಿ ಅಟೋಮೊಬೈಲ್ ಶಾಪ್ ಒಂದನ್ನು ನಡೆಸುತ್ತಿದ್ದು, ಅವರ ಪುತ್ರ 9 ನೇ ತರಗತಿಯ ಅರ್ಷದ್ ಕೊರೋನಾ ಲಾಕ್ಡೌನ್ ಸಮಯವನ್ನು ಮೋಟಾರ್ ಸೈಕಲ್ ತಯಾರು ಮಾಡುವ ಮೂಲಕ ಸದುಪಯೋಗ ಮಾಡಿಕೊಂಡಿದ್ದಾನೆ. ತನ್ನ ತಂದೆಯ ಅಂಗಡಿಯಲ್ಲಿ ದೊರೆತ ಅನುಪಯುಕ್ತ ಎಂದು ಪರಿಗಣಿತವಾಗಿದ್ದ ಬಿಡಿ ಭಾಗಗಳನ್ನು ಬಳಸಿಕೊಂಡು ಈ ಸಾಧನೆ ಮಾಡಿದ್ದಾನೆ. ಲಾಕ್ಡೌನ್ ಸಮಯದ ಒಂದೂವರೆ ತಿಂಗಳನ್ನು ಸಾರ್ಥಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಇದನ್ನು ಅಭಿವೃದ್ಧಿ ಮಾಡಿದ್ದಾಗಿಯೂ ಹೇಳಿದ್ದಾನೆ. ಅಲ್ಲದೆ ಮುಂದಿನ ದಿನಗಳಲ್ಲಿ ಟ್ರೋಲಿ ಒಂದನ್ನು ತಯಾರಿಸುವ ಬಯಕೆ ಇರುವುದಾಗಿಯೂ ಅರ್ಷದ್ ತಿಳಿಸಿದ್ದಾನೆ.
ಇನ್ನು ಈತ ತಯಾರಿಸಿರುವ ಬೈಕ್ ನಲ್ಲಿ ಸೀಟು ಮತ್ತು ಹ್ಯಾಂಡಲ್ ಗಳಿಗೆ ಹೊಂದಿಕೊಂಡಂತೆ ಪೆಟ್ರೋಲ್ ಟ್ಯಾಂಕ್ ಸಹ ಇದ್ದು, ಒಂದು ಲೀ. ಗಳಷ್ಟು ಪೆಟ್ರೋಲ್ ಹಾಕಬಹುದಾಗಿದೆ. ಅಲ್ಲದೆ ಫುಲ್ ಟ್ಯಾಂಕ್ ಪೆಟ್ರೋಲ್ ಇದ್ದರೆ ಈ ಬೈಕ್ ನಲ್ಲಿ 50 ಕಿ.ಮೀ. ಗಳಷ್ಟು ಪ್ರಯಾಣ ಮಾಡುವುದೂ ಸಾಧ್ಯ ಎಂದು ಇದರ ನಿರ್ಮಾತೃ ಅರ್ಷದ್ನ ಅಭಿಪ್ರಾಯ. ತಂದೆಯ ಅಂಗಡಿಯಲ್ಲಿದ್ದ ಬೇರೆ ಬೈಕ್ ಗಳ ಅನವಶ್ಯಕವೆನಿಸಿದ ಸ್ಕ್ರ್ಯಾಪ್ ಟಯರ್ಗಳು, ಡಿಸ್ಕ್ ಬ್ರೇಕ್, ಎಲ್ ಇ ಡಿ ಲೈಟ್ಸ್, ಹ್ಯಾಂಡಲ್, ಸೈಕಲ್ನ ಸೀಟ್ ಮೊದಲಾದವುಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಇದಕ್ಕಾಗಿ ಒಂದೂವರೆ ತಿಂಗಳು, 10,000 ರೂ. ಮತ್ತು ಬುದ್ಧಿಶಕ್ತಿ ಯನ್ನು ಬಳಕೆ ಮಾಡಿರುವುದಾಗಿಯೂ ತಿಳಿಸಿದ್ದಾನೆ.
“ತಂದೆಯ ಅಂಗಡಿಯಲ್ಲಿ ಕಬ್ಬಿಣದ ಪೈಪ್ ಮತ್ತು ಮೋಟಾರು ಬೈಕ್ಗಳ ಎಂಜಿನ್ಗಳನ್ನು ಕಂಡು, ತಾನಿದನ್ನು ಬಳಸಿಕೊಂಡು ಒಂದು ಬೈಕ್ ತಯಾರಿಸುವುದಾಗಿ ತಿಳಿಸಿದೆ. ಆದರೆ ಆರಂಭದಲ್ಲಿ ತಂದೆ ಇದಕ್ಕೆ ಒಪ್ಪಲಿಲ್ಲ. ಆದರೆ ನಾನು ಈ ಕೆಲಸವನ್ನು ಮಾಡಲೇ ಬೇಕೆಂದು ಹಠ ತೊಟ್ಟು ಆರಂಭಿಸಿದೆ. ನಂತರ ತಂದೆಯೂ ನನಗೆ ಮಾರ್ಗದರ್ಶನ ನೀಡಿದರು. ಸುಮಾರು ಒಂದೂವರೆ ತಿಂಗಳಿನ ಬಳಿಕ ಇದರ ಕೆಲಸ ಯಶಸ್ವಿಯಾಗಿ ಸಂಪೂರ್ಣವಾಯಿತು ಎಂದೂ ಅರ್ಷದ್ ತಿಳಿಸಿದ್ದಾನೆ.
ಮನಸ್ಸಿದ್ದರೆ ಮಾರ್ಗ ಇದೆ ಎಂಬುದಕ್ಕೆ ಅರ್ಷದ್ ಉದಾಹರಣೆ,, ಮೋಟಾರ್ ಸೈಕಲ್ ತಯಾರು ಮಾಡುವ ಮೂಲಕವೇ ಮಾದರಿ ಎನಿಸಿದ್ದಾನೆ. ತಂದೆಗೆ ಅನಗತ್ಯ ಎನಿಸಿದ ವಸ್ತುಗಳನ್ನೇ ಬಳಸಿ, ಒಂದು ಬಳಕೆಗೆ ಯೋಗ್ಯವಾದ ವಸ್ತುವನ್ನು ತಯಾರಿಸಿರುವ ಅರ್ಷದ್ ಕೆಲಸವನ್ನು ಮೆಚ್ಚಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.