ಮುಂಬಯಿ: ಭಾರತಕ್ಕೆ ವಿಸ್ತರಣಾವಾದದಲ್ಲಿ ಆಸಕ್ತಿಯಿಲ್ಲ, ಪಾಕಿಸ್ಥಾನ ಅಥವಾ ಚೀನಾದ ಭೂಮಿಯು ಭಾರತಕ್ಕೆ ಬೇಕಾಗಿಲ್ಲ. ದೇಶವು “ಶಾಂತಿ ಮತ್ತು ಸೌಹಾರ್ದತೆ”ಯನ್ನು ಮಾತ್ರ ಬಯಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅವರು ಗುಜರಾತ್ನಲ್ಲಿ ನಡೆದ ಬಿಜೆಪಿಯ ವರ್ಚುವಲ್ ‘ಜನ ಸಂವಾದ’ ಸಮಾವೇಶದಲ್ಲಿ ಮಾತನಾಡಿ, ಲಡಾಖ್ನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಉಲ್ಲೇಖ ಮಾಡಿದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದರು.
ಎರಡನೇ ಅವಧಿಯ ಮೊದಲ ವರ್ಷವನ್ನು ಪೂರ್ಣಗೊಳಿಸಿದ ನರೇಂದ್ರ ಮೋದಿ ಸರ್ಕಾರದ ಕೆಲಸದ ಕುರಿತು ಮಾತನಾಡಿದ ಗಡ್ಕರಿ, ಆಂತರಿಕ ಮತ್ತು ಬಾಹ್ಯ ಭದ್ರತೆಯ ವಿಷಯಗಳೊಂದಿಗೆ ವ್ಯವಹರಿಸುವ ಮೂಲಕ ಶಾಂತಿಯನ್ನು ತಂದಿರುವುದು ನಮ್ಮ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.
“ಮಾವೋವಾದಿ ಸಮಸ್ಯೆಯನ್ನು ಬಹುತೇಕ ಗೆದ್ದಕೊಂಡಿದ್ದು ಅಥವಾ ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಯಿಂದ ದೇಶವನ್ನು ಭದ್ರಪಡಿಸುವುದು ಹೀಗೆ ಮೋದಿ ಸರ್ಕಾರ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ನಮಗೆ ಶಾಂತಿ ಬೇಕು, ಹಿಂಸಾಚಾರವಲ್ಲ ಮತ್ತು ಇದನ್ನು ಬಲಿಷ್ಠರಿಗೆ ಮಾತ್ರ ಸ್ಥಾಪನೆ ಮಾಡಲು ಸಾಧ್ಯ” ಎಂದಿದ್ದಾರೆ.
“ನಾವು ವಿಸ್ತರಣಾವಾದಿಗಳಾಗುವ ಮೂಲಕ ಭಾರತವನ್ನು ಬಲಪಡಿಸಬಾರದು. ಶಾಂತಿಯನ್ನು ಸ್ಥಾಪಿಸಲು ಭಾರತವನ್ನು ಸದೃಢಗೊಳಿಸಲು ನಾವು ಬಯಸುತ್ತೇವೆ” ಎಂದಿದ್ದಾರೆ.
ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಭಾರತವು ಭೂತಾನ್ ಭೂಮಿಯನ್ನು ಕಸಿದುಕೊಳ್ಳಲು ಎಂದಿಗೂ ಪ್ರಯತ್ನಿಸಲಿಲ್ಲ ಎಂದರು. 1971ರ ಪಾಕಿಸ್ಥಾನದ ಯುದ್ಧವನ್ನು ಗೆದ್ದ ನಂತರವೂ ಬಾಂಗ್ಲಾದೇಶದಲ್ಲಿ ಸ್ವತಂತ್ರ ಸರ್ಕಾರವನ್ನು ಸ್ಥಾಪಿಸಲು ಭಾರತ ಸಹಾಯ ಮಾಡಿತು ಎಂದಿದ್ದಾರೆ.
“ನಮ್ಮ ದೇಶವು ಯುದ್ಧವನ್ನು ಗೆದ್ದ ನಂತರ ಶೇಖ್ ಮುಜಿಬುರ್ ರಹಮಾನ್ ಅವರನ್ನು ಬಾಂಗ್ಲಾದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡಿದೆವು, ಮತ್ತು ನಂತರ ನಮ್ಮ ಸೈನಿಕರು ಮರಳಿದರು” ಎಂದಿದ್ದಾರೆ.
“ನಾವು ಒಂದು ಇಂಚು ಭೂಮಿಯನ್ನು ಸಹ ತೆಗೆದುಕೊಂಡಿಲ್ಲ. ಪಾಕಿಸ್ಥಾನ ಅಥವಾ ಚೀನಾದ ಭೂಮಿಯನ್ನು ನಾವು ಎಂದಿಗೂ ಬಯಸುವುದಿಲ್ಲ. ನಮಗೆ ಬೇಕಾಗಿರುವುದು ಶಾಂತಿ, ಸೌಹಾರ್ದತೆ, ಪ್ರೀತಿ ಮತ್ತು ಒಟ್ಟಿಗೆ ಕೆಲಸ ಮಾಡುವುದು” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.