ನವದೆಹಲಿ: ಕೊರೋನಾವೈರಸ್ ಸಾಂಕ್ರಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ದೇಶವ್ಯಾಪಿಯಾಗಿ ವಿಧಿಸಲಾದ ಲಾಕ್ಡೌನ್ ಸಂದರ್ಭದಲ್ಲಿ ದೇಶದ ಪ್ರಮುಖ ಸರ್ಕಾರೇತರ ಸಂಸ್ಥೆಯಾದ ಅಕ್ಷಯ ಪಾತ್ರ ಫೌಂಡೇಶನ್ ನಿರ್ಗತಿಕರಿಗೆ 6.3 ಕೋಟಿ ಊಟವನ್ನು ಪೂರೈಕೆ ಮಾಡಿದೆ.
“ಜೂನ್ 11 ರವರೆಗೆ ನಾವು ದೇಶದಾದ್ಯಂತದ 17 ರಾಜ್ಯಗಳಲ್ಲಿ ದಿನಗೂಲಿ ಕಾರ್ಮಿಕರಿಗೆ, ಕೈಗಾರಿಕಾ ಕಾರ್ಮಿಕರಿಗೆ, ನಿರ್ಮಾಣ ಕಾರ್ಮಿಕರಿಗೆ ಮತ್ತು ಇತರ ದುರ್ಬಲ ಸಮುದಾಯದ ಜನರಿಗೆ 6.3 ಕೋಟಿ ಊಟವನ್ನು ಪೂರೈಕೆ ಮಾಡಿದ್ದೇವೆ” ಎಂದು ಪ್ರತಿಷ್ಠಾನದ ಉಪಾಧ್ಯಕ್ಷ ಚಂಚಲಪತಿ ದಾಸ್ ಮಾಹಿತಿಯನ್ನು ನೀಡಿದ್ದಾರೆ.
6.3 ಕೋಟಿಯಲ್ಲಿ 3.4 ಕೋಟಿ ತಿನ್ನಲು ಸಿದ್ಧ ಆಹಾರಗಳು ಮತ್ತು 6,86,092 ಆಹಾರ ಕಿಟ್ಗಳು ಸೇರಿವೆ, ಅಗತ್ಯ ದಿನಸಿ ಸಾಮಗ್ರಿಗಳು 2.8 ಕೋಟಿಗಳಷ್ಟು ಸೇರಿವೆ ಎಂದು ಹೇಳಿದ್ದಾರೆ.
ಫೌಂಡೇಶನ್ ತನ್ನ ಬೃಹತ್ ಅಡಿಗೆ ಮನೆಗಳಲ್ಲಿ ಬೇಯಿಸಿದ ಆಹಾರಗಳನ್ನು ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್ಗಢ, ದಾದ್ರಾ ಮತ್ತು ನಗರ ಹವೇಲಿ, ದೆಹಲಿ (ಎನ್ಸಿಆರ್), ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಒರಿಸ್ಸಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ತ್ರಿಪುರಾ ಮುಂತಾದ ರಾಜ್ಯಗಳಲ್ಲಿ ಬಡ ಜನರಿಗೆ ಪೂರೈಕೆ ಮಾಡುತ್ತಿದೆ.
“ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಆಹಾರದ ಅಭದ್ರತೆಯನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶ, ಆಹಾರದ ಅಭದ್ರತೆಯು ಮೂಲಭೂತ ಪೋಷಕಾಂಶಗಳ ಅಸಮರ್ಪಕತೆಯನ್ನು ಸೃಷ್ಟಿಸುತ್ತದೆ, ಇದು ದುರ್ಬಲರಿಗೆ ಆರೋಗ್ಯದ ಅಪಾಯಗಳನ್ನು ಹೆಚ್ಚಿಸುತ್ತದೆ” ಎಂದು ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಶ್ರೀಧರ್ ವೆಂಕಟ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇನ್ಫೋಸಿಸ್ ಮಾಜಿ ನಿರ್ದೇಶಕ ಟಿ.ವಿ. ಮೋಹನ್ದಾಸ್ ಪೈ ಅವರು ಸಹ-ಸಂಸ್ಥಾಪಕತ್ವದಲ್ಲಿ 2000 ರಲ್ಲಿ ಸ್ಥಾಪನೆಯಾದ ಅಕ್ಷಯ ಪಾತ್ರ ಫೌಂಡೇಶನ್ ವಿಶ್ವದ ಅತಿದೊಡ್ಡ ಲಾಭರಹಿತ ಸಂಸ್ಥೆಯಾಗಿದ್ದು, ಶಾಲಾ ದಿನಗಳಲ್ಲಿ ಮಧ್ಯಾಹ್ನದ ಬಿಸಿ ಊಟವನ್ನು 18 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.