ನವದೆಹಲಿ: “ಚೀನಾದೊಂದಿಗಿನ ನಮ್ಮ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಉಭಯ ರಾಷ್ಟ್ರಗಳ ಮಿಲಿಟರಿ ಕಮಾಂಡರ್ಗಳ ನಡುವೆ ಮಾತುಕತೆಗಳು ನಿರಂತರವಾಗಿ ನಡೆಯುತ್ತಿದೆ” ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾನೆ ಶನಿವಾರ ಹೇಳಿದ್ದಾರೆ.
“ಚೀನಾದೊಂದಿಗಿನ ನಮ್ಮ ಗಡಿಯುದ್ದಕ್ಕೂ ಇಡೀ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ನಾನು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ನಾವು ಕಾರ್ಪ್ಸ್ ಕಮಾಂಡರ್ ಮಟ್ಟದಿಂದ ಪ್ರಾರಂಭವಾದ ಮಾತುಕತೆಗಳ ಸರಣಿಯನ್ನೇ ನಡೆಸುತ್ತಿದ್ದೇವೆ ಮತ್ತು ಸಮಾನ ಶ್ರೇಣಿಯ ಕಮಾಂಡರ್ಗಳ ನಡುವೆ ಕೆಳಸ್ಥರದಲ್ಲಿ ನಡೆಯುತ್ತಿರುವ ಸಭೆಗಳನ್ನು ಕೂಡ ಅನುಸರಿಸುತ್ತಿದ್ದೇವೆ” ಎಂದಿದ್ದಾರೆ.
“ಇದರ ಪರಿಣಾಮವಾಗಿ, ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಗಳು ಕಂಡು ಬಂದಿವೆ ಮತ್ತು ನಾವು ನಿರಂತರವಾಗಿ ನಡೆಯುತ್ತಿರುವ ಮಾತುಕತೆಯ ಮೂಲಕ ಪ್ರಸ್ತುತ ಇರುವ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಲಿದ್ದೇವೆ ಎಂದು ನಾವು ಭಾವಿಸುತ್ತೇವೆ” ಎಂದು ಜನರಲ್ ಹೇಳಿದರು.
ಶುಕ್ರವಾರ ಉಭಯ ತಂಡಗಳು ಹೆಚ್ಚಿನ ಮಾತುಕತೆಗಳನ್ನು ನಡೆಸಿದವು. ಬಿಕ್ಕಟ್ಟನ್ನು ಬಗೆಹರಿಸುವ ಸಲುವಾಗಿ ಈ ಬಾರಿ ಮೇಜರ್ ಜನರಲ್ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಮೇ ಆರಂಭದಲ್ಲಿ ಲಡಾಖ್ನ ಪಾಂಗೊಂಗ್ ಸರೋವರ ಪ್ರದೇಶದಲ್ಲಿ ಚೀನಾದ ಹೆಲಿಕಾಪ್ಟರ್ಗಳೊಂದಿಗೆ ನಡೆದ ಚಕಮಕಿ ಮತ್ತು ಅತಿಕ್ರಮಣದಂತಹ ಘಟನೆಗಳು ಉದ್ವಿಗ್ನತೆಯನ್ನು ಸೃಷ್ಟಿ ಮಾಡಿದೆ. ಇದಾದ ನಂತರ ನಡೆದ ಐದನೇ ಸುತ್ತಿನ ಮಾತುಕತೆ ಇದಾಗಿದೆ.
ಪೂರ್ವ ಲಡಾಕ್ನ ಕೆಲವು ಭಾಗಗಳಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಹಿಂದಕ್ಕೆ ಬರಲು ಪ್ರಾರಂಭಿಸಿದ್ದಾರೆ ಎಂದು ಈ ವಾರದ ಆರಂಭದಲ್ಲಿ ಸರ್ಕಾರಿ ಮೂಲಗಳು ದೃಢಪಡಿಸಿವೆ. ಗಮನಾರ್ಹ ಸಂಖ್ಯೆಯ ಚೀನೀ ಸೈನಿಕರು ಮೂರು ಕಿಲೋಮೀಟರ್ಗಳಷ್ಟು ಹಿಂದಕ್ಕೆ ಸರಿದಿದ್ದಾರೆ ಮತ್ತು ಸೂಚನೆಯಂತೆ ಭಾರತೀಯ ಸೇನೆ ತನ್ನ ಕೆಲವು ಸೈನಿಕರನ್ನು ಹಿಂದಕ್ಕೆ ಕರೆಸಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.