ನವದೆಹಲಿ: ಹಿರಿಯ ಅಧಿಕಾರಿಗಳ ಮೌಲ್ಯಮಾಪನ ವರದಿಯನ್ನು ಗಮನಿಸಿದರೆ, ಈ ಬಾರಿ ಸಂಸತ್ ಭವನದಲ್ಲಿ ಎಂದಿನಂತೆ ಸಹಜವಾಗಿ ಸಂಸತ್ತಿನ ಅಧಿವೇಶನ ನಡೆಯುವುದು ಅಸಂಭವ ಎಂದು ತೋರುತ್ತಿದೆ ಎಂದು ವರದಿಗಳು ತಿಳಿಸಿವೆ.
ಮಂಗಳವಾರ ಸಲ್ಲಿಸಿದ ವರದಿಯು, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಲೋಕಸಭೆ ಕೊಠಡಿ, ಸೆಂಟ್ರಲ್ ಹಾಲ್ ಮತ್ತು ವಿಜ್ಞಾನ ಭವನಗಳು ಸಂಪೂರ್ಣ ಬಲದಿಂದ ಅಧಿವೇಶನವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದಿದೆ.
ವರದಿಯ ಪ್ರಕಾರ, ಲೋಕಸಭಾ ಕೊಠಡಿಯಲ್ಲಿ ಕೇವಲ 60 ಸಂಸದರಿಗೆ ಮಾತ್ರ ಸಾಮಾಜಿಕ ಅಂತರದ ಮಾನದಂಡಗಳೊಂದಿಗೆ ಆಸನ ವ್ಯವಸ್ಥೆಯನ್ನು ಕಲ್ಪಿಸಬಹುದು, ಅತೀದೊಡ್ಡ ಕೊಠಡಿ ಎನಿಸಿದ ಸೆಂಟ್ರಲ್ ಹಾಲ್ನಲ್ಲಿ 100ರಷ್ಟು ಸದಸ್ಯರಿಗೆ ಮಾತ್ರ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಕೊಠಡಿಗಳ ಸಾಮರ್ಥ್ಯದ ಬಗ್ಗೆ ಮೌಲ್ಯಮಾಪನ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಕೆಳಮನೆ ಮತ್ತು ಮೇಲ್ಮನೆಗಳ ಒಟ್ಟು ಬಲ ಕ್ರಮವಾಗಿ 543 ಮತ್ತು 245 ಆಗಿದೆ. ಹೀಗಾಗಿ ಅಧಿವೇಶನದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತೀರ ಕಷ್ಟವಾಗಿದೆ.
ವರದಿಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ, ರಾಜ್ಯಸಭೆಯ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿ ವರ್ಚುವಲ್ ಅಧಿವೇಶನಗಳನ್ನು ನಡೆಸುವ ಸಾಧ್ಯತೆಗಳು ಮತ್ತು ಸಿದ್ಧತೆಯ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.
ಸೆಮಿ-ವರ್ಚುವಲ್ ಅಧಿವೇಶನದ ಸಾಧ್ಯತೆಯನ್ನು ಸಹ ಚರ್ಚಿಸಲಾಗುತ್ತಿದೆ, ಇದರಲ್ಲಿ ಕೆಲ ಸದಸ್ಯರು ಆಯಾ ಸ್ಥಳಗಳಿಂದ ವರ್ಚುವಲ್ ಆಗಿ ಭಾಗವಹಿಸಬಹುದು, ಕೆಲವರು ಅಧಿವೇಶನಕ್ಕೆ ಖುದ್ದಾಗಿ ಹಾಜರಾಗಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.