ನವದೆಹಲಿ : ವಿಶ್ವಸಂಸ್ಥೆಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮೇಲ್ವಿಚಾರಣಾ ತಂಡದ ವರದಿಯನ್ನು ಭಾರತದ ವಿದೇಶಾಂಗ ಸಚಿವಾಲಯ ತಪ್ಪಾಗಿ ನಿರೂಪಿಸಿದೆ ಎಂಬ ಪಾಕಿಸ್ಥಾನದ ಹೇಳಿಕೆಯನ್ನು ಭಾರತ ಶುಕ್ರವಾರ ಬಲವಾಗಿ ತಿರಸ್ಕರಿಸಿದೆ ಮತ್ತು ಆ ದೇಶವನ್ನು ಭಯೋತ್ಪಾದನೆಯ ಮೂಲ ಕೇಂದ್ರ ಎಂಬುದನ್ನು ಪುನರುಚ್ಛರಿಸಿದೆ ಎಂಬ ಬಗ್ಗೆ ವರದಿಗಳು ತಿಳಿಸಿವೆ.
ವಿದೇಶಾಂಗ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದು, “ತಮ್ಮ ದೇಶದ ಮಣ್ಣನ್ನು ಭಯೋತ್ಪಾದಕರು ಇತರ ದೇಶಗಳ ಮೇಲೆ ಭಯೋತ್ಪಾದನಾ ದಾಳಿ ನಡೆಸಲು ಬಳಸಿದ್ದಾರೆಂದು ಒಪ್ಪಿಕೊಳ್ಳುವ ಮೂಲಕ ಪಾಕಿಸ್ಥಾನದ ನಾಯಕತ್ವ ದಾಖಲೆ ಬರೆದಿದೆ” ಎಂದಿದ್ದಾರೆ.
“ಯುಎನ್ ವರದಿಯ ಬಗ್ಗೆ ಆಪಾದನೆ ಮಾಡುವ ಬದಲು, ಪಾಕಿಸ್ಥಾನವು ತನ್ನ ನಿಯಂತ್ರಣದಲ್ಲಿರುವ ಪ್ರದೇಶಗಳಿಂದ ಹೊರಹೊಮ್ಮುವ ಭಯೋತ್ಪಾದನೆಯನ್ನು ಯಾವ ರೀತಿಯಲ್ಲಿ ಮಟ್ಟಹಾಕಬಹುದು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಅದನ್ನು ಕೊನೆಗೊಳಿಸಬೇಕು. ಯುಎನ್ ಮತ್ತು ಅಂತರರಾಷ್ಟ್ರೀಯ ಸಮುದಾಯಕ್ಕೆ ಪಾಕಿಸ್ಥಾನವು ಭಯೋತ್ಪಾದಕರ ಮೂಲ ಕೇಂದ್ರವಾಗಿದೆ ಎಂಬ ವಾಸ್ತವ ಚೆನ್ನಾಗಿ ತಿಳಿದಿದೆ” ಎಂದು ಶ್ರೀವಾಸ್ತವ್ ಹೇಳಿದ್ದಾರೆ.
“ಪಾಕಿಸ್ಥಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಕಳೆದ ವರ್ಷ ಪಾಕಿಸ್ಥಾನವು 30,000-40,000 ಭಯೋತ್ಪಾದಕರಿಗೆ ಆತಿಥ್ಯ ನೀಡಿದೆ ಎಂದು ತಮ್ಮ ಪ್ರಧಾನ ಮಂತ್ರಿಗಳು ಒಪ್ಪಿಕೊಂಡಿದ್ದನ್ನು ನೆನಪಿಸಿಕೊಳ್ಳುವುದು ಉತ್ತಮ. ಹಿಂದೆ ಭಯೋತ್ಪಾದಕರು ಇತರ ದೇಶಗಳ ಮೇಲೆ ದಾಳಿ ನಡೆಸಲು ನಮ್ಮ ದೇಶದ ಮಣ್ಣನ್ನು ಬಳಸಿದ್ದಾರೆಂದು ಪಾಕಿಸ್ಥಾನದ ನಾಯಕತ್ವವು ಒಪ್ಪಿಕೊಂಡು ದಾಖಲೆ ಬರೆದಿದೆ” ಎಂದು ಹೇಳಿದ್ದಾರೆ.
‘2019ರಲ್ಲಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು, ವಾಷಿಂಗ್ಟನ್ನ ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ನಲ್ಲಿ ಮಾತನಾಡುತ್ತಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಫ್ಘಾನಿಸ್ಥಾನ ಅಥವಾ ಕಾಶ್ಮೀರದ ಕೆಲವು ಭಾಗಗಳಲ್ಲಿ ತರಬೇತಿ ಪಡೆದ ಸುಮಾರು 30,000 ರಿಂದ 40,000 ಭಯೋತ್ಪಾದಕರು ನಮ್ಮ ದೇಶದಲ್ಲಿದ್ದಾರೆ ಎಂದು ಖಾನ್ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.