ನವದೆಹಲಿ: ರೈಲುಗಳಲ್ಲಿಯೂ ಕೊರೋನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದಕ್ಕೆ ಪೂರಕವಾಗುವಂತೆ ಭಾರತೀಯ ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಟಿಕೆಟ್ ಪರಿಶೀಲನಾ ಸಿಬ್ಬಂದಿಗಳು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆಯೂ ಇಲಾಖೆ ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ರೈಲುಗಳಲ್ಲಿ ಟಿಕೆಟ್ ಪರಿಶೀಲನೆ ನಡೆಸುವ ಸಿಬ್ಬಂದಿಗಳು ಟಿಕೆಟ್ ಅನ್ನು ಕೈಯಲ್ಲಿ ಮುಟ್ಟದೆ, ಭೂತಗನ್ನಡಿಯ ಮೂಲಕವೇ ಪರಿಶೀಲನೆ ನಡೆಸಲಿದ್ದಾರೆ. ಈ ವರೆಗೆ ಸಮವಸ್ತ್ರವಾದ ಕಪ್ಪು ಕೋಟು, ಟೈ ಧರಿಸುತ್ತಿದ್ದ ಟಿಟಿಇ ಗಳು ಇನ್ನು ಮುಂದೆ ತಾವು ಸಿಬ್ಬಂದಿಗಳು ಎಂದು ತಿಳಿಸುವ ಸಲುವಾಗಿ ಬ್ಯಾಡ್ಜ್ ಗಳನ್ನು ಧರಿಸಲಿದ್ದಾರೆ. ಜೊತೆಗೆ ಮಾಸ್ಕ್, ಗ್ಲೌಸ್, ಪಿಪಿಇ ಗಳನ್ನು ಧರಿಸುವ ಮೂಲಕವೇ ಕಾರ್ಯ ನಿರ್ವಹಿಸುವಂತೆಯೂ ಈ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ರೈಲು ಟಿಕೆಟ್ ಚೆಕ್ಕಿಂಗ್ ಸಂದರ್ಭದಲ್ಲಿ ಸಿಬ್ಬಂದಿಗಳು ಸಾವಿರಾರು ಮಂದಿ ಪ್ರಯಾಣಿಕರನ್ನು ಭೇಟಿ ಮಾಡಬೇಕಾಗಿದ್ದು, ಈ ಸಂದರ್ಭದಲ್ಲಿ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಇಂತಹ ಹೊಸ ಕ್ರಮಕ್ಕೆ ಮುಂದಾಗಿದೆ. ಇ ಟಿಕೆಟ್ ಅಥವಾ ಸಾಮಾನ್ಯ ಟಿಕೆಟ್ ಯಾವುದೇ ಇರಲಿ, ಮುಂದಿನ ದಿನಗಳಲ್ಲಿ ಅವುಗಳನ್ನು ಕೈಯಿಂದ ಸ್ಪರ್ಷಿಸದೆಯೇ, ಭೂತಗನ್ನಡಿಗಳ ಮೂಲಕ ದೂರದಿಂದಲೇ ಪರಿಶೀಲನೆ ನಡೆಸಲಿದ್ದಾರೆ ಎಂಬ ಮಾಹಿತಿಯನ್ನು ಇಲಾಖೆ ಸ್ಪಷ್ಟಪಡಿಸಿದೆ.
ಇನ್ನು ಕಳೆದ ಕೆಲವು ದಿನಗಳಿಂದಲೇ ವಲಸಿಗ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ‘ಶ್ರಮಿಕ್’ ರೈಲುಗಳನ್ನು ಆರಂಭಿಸಿತ್ತು. ಸದ್ಯ ದೇಶದಾದ್ಯಂತ ಪ್ರಯಾಣಿಕ ರೈಲುಗಳ ಸೇವೆಯನ್ನು ಆರಂಭಿಸಲಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗಸೂಚಿಯನ್ನು ಅಳವಡಿಸಿಕೊಂಡಿರುವುದಾಗಿಯೂ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.