ನವದೆಹಲಿ: ಜಗತ್ತಿಗೆ ವೈರಸ್ಸನ್ನು ಹರಡಿಸಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿರುವ ಚೀನಾ, ಇದೀಗ ಗಡಿಯಲ್ಲಿ ಭಾರತದೊಂದಿಗೆ ಗುದ್ದಾಟಕ್ಕೆ ಮುಂದಾಗಿದೆ. ಆದರೆ ಭಾರತ ಚೀನಾದ ಕುತಂತ್ರಕ್ಕೆ ದಿಟ್ಟ ಉತ್ತರವನ್ನು ನೀಡಿದೆ. ಚೀನಾದೊಂದಿಗಿನ ಗಡಿಯುದ್ದಕ್ಕೂ ನಡೆಸುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸದಿರಲು ಭಾರತ ನಿರ್ಧರಿಸಿದೆ.
ಪೂರ್ವ ಲಡಾಕ್ ಪ್ರದೇಶದಲ್ಲಿ ಚೀನಾ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜನೆ ಮಾಡಿ ಭಾರತದ ಭೂ ಪ್ರದೇಶವನ್ನು ಅತಿಕ್ರಮಿಸಲು ಮುಂದಾಗುತ್ತಿದೆ. ಆದರೆ ಭಾರತೀಯ ಸೈನಿಕರು ಇದಕ್ಕೆ ಯಾವ ರೀತಿಯಲ್ಲೂ ಆಸ್ಪದ ನೀಡುತ್ತಿಲ್ಲ. ಹೀಗಾಗಿ ಉಭಯ ಸೇನೆಗಳ ನಡುವೆ ಗುದ್ದಾಟ, ಸಂಘರ್ಷ ಏರ್ಪಟ್ಟಿದೆ. ಚೀನಾದ ಕುತಂತ್ರಕ್ಕೆ ಭಾರತೀಯ ಯೋಧರು ದಿಟ್ಟ ಉತ್ತರವನ್ನು ನೀಡುತ್ತಿದ್ದಾರೆ.
ಪೂರ್ವ ಲಡಾಕ್ ಮತ್ತು ಸಿಕ್ಕಿಂ ಪ್ರದೇಶಗಳಲ್ಲಿ ಭಾರತ ನಡೆಸುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡಲು ಚೀನಾ ಅವಿರತ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಭಾರತ ಮಾತ್ರ ಚೀನಾದ ಬೆದರಿಕೆಗೆ ಬಗ್ಗದಿರಲು ನಿರ್ಧರಿಸಿದೆ.
ಗಡಿಯಲ್ಲಿ ನಡೆಯುತ್ತಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲು ಭಾರತದ ನಾಯಕತ್ವ ತೀರ್ಮಾನ ತೆಗೆದುಕೊಂಡಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು 3 ಪಡೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಮೇ 5ರಿಂದ ಚೀನಾ ಮತ್ತು ಭಾರತೀಯ ಸೇನಾ ಪಡೆಗಳ ನಡುವೆ ಲಡಾಖ್ ಪ್ರದೇಶದಲ್ಲಿ ಬಿಕ್ಕಟ್ಟು ಉದ್ಭವಿಸಿದೆ. ಹಲವು ಪ್ರಯತ್ನಗಳ ಬಳಿಕವೂ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಭಾರತ ಕೂಡ ಚೀನಾದ ಬೆದರಿಕೆಗೆ ಸೊಪ್ಪು ಹಾಕದಿರಲು ನಿರ್ಧರಿಸಿದೆ.
ಲಡಾಕ್, ಸಿಕ್ಕಿಂ, ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಗಳಲ್ಲಿ ನಡೆಯುತ್ತಿರುವ ಪ್ರಮುಖ ಯೋಜನೆಗಳನ್ನು ಮುಂದುವರೆಸುವಂತೆ ಕೇಂದ್ರ ರಕ್ಷಣಾ ಸಚಿವರು ಮಿಲಿಟರಿ ನಾಯಕತ್ವಕ್ಕೆ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.