ಒಡಿಶಾ: ಕೊರೋನಾ ಎಂಬ ಮಹಾಮಾರಿಯ ಕಾಟಕ್ಕೆ ದೇಶವೇ ಇನ್ನಿಲ್ಲದಂತೆ ತೊಂದರೆ ಅನುಭವಿಸುತ್ತಿದೆ. ಪಶ್ಚಿಮ ಬಂಗಾಳ, ಒಡಿಶಾದಲ್ಲಿಯೂ ಕೊರೋನಾ ರಣಕೇಕೆ ಹಾಕುತ್ತಿದೆ. ಇಂತಹ ಸ್ಥಿತಿಯನ್ನು ನಿಭಾಯಿಸಲು ಆ ರಾಜ್ಯಗಳು ಶ್ರಮ ಪಡುತ್ತಿರುವಾಗಲೇ, ಅಂಫಾನ್ ಚಂಡಮಾರುತವೂ ಅಲ್ಲಿನ ಪರಿಸ್ಥಿತಿಯ ಮೇಲೆ ಅಡ್ಡ ಪರಿಣಾಮ ಬೀರಿದೆ. ಜನರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಈ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿರುವ ಪ್ರಧಾನಿ ಮೋದಿ ಅವರೂ ಪಶ್ಚಿಮ ಬಂಗಾಳಕ್ಕೆ 1000 ಕೋಟಿ ರೂ. ಗಳ ಪರಿಹಾರವನ್ನು ಒದಗಿಸಿದ್ದಾರೆ.
ದೇಶದ ಯಾವುದೇ ಭಾಗದಲ್ಲಿ ಪ್ರಾಕೃತಿಕ ಅಥವಾ ಮಾನವ ನಿರ್ಮಿತ ವಿಕೋಪಗಳಾಗಲಿ, ಅಲ್ಲಿ ಜನರ ಸೇವೆ ಮಾಡುವ ಸಲುವಾಗಿ ದೇಶಪ್ರೇಮಿ ಸಂಘಟನೆ ಆರೆಸ್ಸೆಸ್ ಸದಾ ಸಿದ್ಧವಾಗಿರುತ್ತದೆ. ಕೊರೋನಾ ಸಂದರ್ಭದಲ್ಲಿ ದೇಶದೆಲ್ಲೆಡೆ ತಮಗೆ ಅಪಾಯ ಬಂದೊದಗಬಹುದೆಂಬ ಆತಂಕವನ್ನು ಲೆಕ್ಕಿಸದೆ ಆರೆಸ್ಸೆಸ್ ಜನರ ಸೇವೆಯಲ್ಲಿ ತೊಡಗಿರುತ್ತದೆ. ಸದ್ಯ ಕೊರೋನಾ ಮತ್ತು ಅಂಫಾನ್ನಿಂದ ಅತಂತ್ರವಾಗಿರುವ ಪಶ್ಚಿಮ ಬಂಗಾಳ ಮತ್ತು ಒಡಿಶಾಗಳನ್ನು ಮತ್ತೆ ಚೇತರಿಸಿಕೊಳ್ಳುವಂತೆ ಮಾಡುವ ಸಲುವಾಗಿ ಅಲ್ಲಿನ ಸಂಘದ ಸ್ವಯಂಸೇವಕರು ಪಣತೊಟ್ಟಿದ್ದಾರೆ. ಅಲ್ಲಿನ ಜನರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ.
ಕೊರೋನಾದಿಂದ ಮನೆ ಸೇರಿದ್ದ ಜನರನ್ನು ಅಂಫಾನ್ ಬೀದಿಗೆ ಬೀಳಿಸಿದೆ. ಈ ಭೀಕರತೆಗೆ ಸುಮಾರು 86 ಮಂದಿ ಜೀವವನ್ನೇ ಕಳೆದುಕೊಂಡಿರುವುದಾಗಿಯೂ ಮಾಹಿತಿಗಳಿವೆ. ಇನ್ನುಳಿದಂತೆ ಅದೆಷ್ಟೋ ಜನರು ಮನೆ ಮಠ, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಸಂಕಷ್ಟವನ್ನನುಭವಿಸುತ್ತಿದ್ದಾರೆ. ಹೀಗೆ ಬದುಕು ಕಳೆದುಕೊಂಡವರಿಗೆ ಸದ್ಯದ ಸ್ಥಿತಿಯಲ್ಲಿ ಉಸಿರಾಡುವಂತೆ ಮಾಡಲು ಮತ್ತು ಮತ್ತೆ ಚೇತರಿಸಿಕೊಳ್ಳುವಂತೆ ಮಾಡುವಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಪಣತೊಟ್ಟಿದ್ದಾರೆ. ನಿಸ್ವಾರ್ಥ ಸೇವೆಯ ಮೂಲಕ ಜನರ ಕಣ್ಣೀರೊರೆಸುವ ಕೆಲಸವನ್ನು ಮಾಡುತ್ತಿದ್ದಾರೆ.
ಅಂಫಾನ್ನಿಂದ ಹಾಳು ಬಿದ್ದ ರಸ್ತೆಗಳ ದುರಸ್ತಿ, ಸಂತ್ರಸ್ತ ಜನರಿಗೆ ಆಹಾರ ವಿತರಣೆ, ಅಗತ್ಯ ವಸ್ತುಗಳನ್ನು ತಲುಪಿಸಿಕೊಡುವ ಮೂಲಕ ಅಲ್ಲಿನ ಜನರಲ್ಲಿ ಮರುಜೀವ ತುಂಬುವ ಕೆಲಸವನ್ನು ಸ್ವಯಂಸೇವಕರು ಮಾಡುತ್ತಿದ್ದಾರೆ. ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ಆರೆಸ್ಸೆಸ್ ಮತ್ತು ಉತ್ಕಲ್ ಬೀಪನ್ನಾ ಸಹಾಯತಾ ಸಮಿತಿ(UBSS) ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು ಅಗತ್ಯವಿರುವವರಿಗೆ ಆಹಾರ ಕಿಟ್, ದಿನಸಿ ವಸ್ತುಗಳನ್ನು ನೀಡುವ ಕೆಲಸವನ್ನೂ ಮಾಡುತ್ತಿದೆ. ಅಂಫಾನ್ನಿಂದಾಗಿ ಮನೆಯೊಳಗೆ ಸಿಲುಕಿಕೊಂಡಿರುವ ಜನರಿಗೂ ಆಹಾರ ವಸ್ತುಗಳನ್ನು ತಲುಪಿಸುವ ಕಾರ್ಯವನ್ನು ಈ ಸಂಘಟನೆಗಳು ಮಾಡುತ್ತಿವೆ.
ಪಶ್ಚಿಮ ಬಂಗಾಳದಲ್ಲಿ ಅಂಫಾನ್ನಿಂದಾಗಿ ರಸ್ತೆಗುರುಳಿರುವ ಮರಗಳ ತೆರವು ಕಾರ್ಯಾಚರಣೆ, ಆಂಬುಲೆನ್ಸ್ಗಳ, ಫೈರ್ ಎಂಜಿನ್ಗಳ ಸುಗಮ ಸಂಚಾರಕ್ಕೆ ಅವಕಾಶವಾಗುವಂತೆ ಹಾಳುಬಿದ್ದ ರಸ್ತೆಗಳ ದುರಸ್ತಿ ಮೊದಲಾದ ಕಾರ್ಯವನ್ನು ಆರೆಸ್ಸೆಸ್ ಯಾವುದೇ ಲಾಭದ ನಿರೀಕ್ಷೆ ಇಲ್ಲದೆಯೇ ಮಾಡುತ್ತಿದೆ. ಹಾಬ್ರಾ ಜಿಲ್ಲೆಯಲ್ಲಿ ಸರ್ಕಾರ ಆರಂಭಿಸಿರುವ ಪುನರ್ವಸತಿ ಕೇಂದ್ರಗಳಿಗೂ ಅಂಫಾನ್ನಿಂದ ತೊಂದರೆಗೊಳಗಾಗಿರುವ ಜನರನ್ನು ತಲುಪಿಸುವ ಕಾರ್ಯವನ್ನು ಸಂಘ ಮಾಡುತ್ತಿದೆ. ಜೊತೆಗೆ ಜನರಿಗೆ ಆಹಾರ ಪೂರೈಕೆ, ಅಗತ್ಯ ವಸ್ತುಗಳ ಪೂರೈಕೆಗೂ ಅರೆಸ್ಸೆಸ್ ಕ್ರಮ ಕೈಗೊಂಡಿದೆ.
ದೇಶದ ಯಾವುದೇ ಭಾಗಕ್ಕೆ, ಯಾವುದೇ ರಾಜ್ಯಕ್ಕೆ ಏನೇ ಸಮಸ್ಯೆ ಬರಲಿ, ತಮ್ಮ ಜೀವದ ಹಂಗನ್ನು ಲೆಕ್ಕಿಸದೆ ಆರೆಸ್ಸೆಸ್ ಸ್ವಯಂಸೇವಕರು ಸೇವಾಕಾರ್ಯಕ್ಕೆ ಧುಮುಕುತ್ತಾರೆ. ತಮ್ಮ ಜೀವಕ್ಕೊದಗಬಹುದಾದ ಆಪತ್ತನ್ನೂ ಲೆಕ್ಕಿಸದೆ ಜನರ ರಕ್ಷಣೆ, ಪ್ರಾಣಿ, ಪಕ್ಷಿಗಳ ರಕ್ಷಣೆಯಲ್ಲಿ ತೊಡಗುತ್ತಾರೆ. ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳದೆ, ನಾವೆಲ್ಲರೂ ಒಂದು, ಇತರರ ಸಮಸ್ಯೆ ನಮಗೂ ಸಮಸ್ಯೆಯೇ ಎಂದು ಭಾವಿಸುವ ಸಂಘದ ಮನಃಸ್ಥಿತಿ ನಿಜಕ್ಕೂ ಆದರಣೀಯ ಮತ್ತು ಅನುಕರಣೀಯ.
Source : Organiser
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.