ನವದೆಹಲಿ: ಉತ್ತರ ಭಾರತದ ರಾಜ್ಯಗಳಲ್ಲಿ ಬಿಸಿಲ ಪ್ರತಾಪ ವಿಕೋಪಕ್ಕೆ ತಿರುಗಿದೆ. 48 ಡಿಗ್ರಿ ತಾಪಮಾನ ಕೆಲವು ಕಡೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನವು 46 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇವರ ಮಹಾರಾಷ್ಟ್ರ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಮತ್ತು ಹಲವು ಉತ್ತರ ಭಾರತೀಯ ರಾಜ್ಯಗಳಲ್ಲಿ ಈ ವಾರ ಬಿಸಿಗಾಳಿ ಸಂಭವಿಸುವ ಸಾಧ್ಯತೆಯಿದೆ ಎಂದು ಅದು ಎಚ್ಚರಿಸಿದೆ.
ಮೇ 28 ರ ಬಳಿಕವಷ್ಟೇ ಬಿಸಿಲ ತಾಪದಿಂದ ಸ್ವಲ್ಪ ನಿರಾಳತೆ ಸಿಗಬಹುದು, ಈ ವೇಳೆ ಮಳೆ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ವಿಜ್ಞಾನಿ ನರೇಶ್ ಕುಮಾರ್ ಅವರು ಹೇಳಿದ್ದಾರೆ.
“ಬಿಸಿಗಾಳಿ ಪರಿಸ್ಥಿತಿಯು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಸಂಭವಿಸಬಹುದು. ಮುಂದಿನ ಐದು ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡಿಗಢ, ದೆಹಲಿ, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ವಿದರ್ಭ ಮತ್ತು ತೆಲಂಗಾಣ ಗಳಲ್ಲಿ ಬಿಸಿಗಾಳಿಯ ಪ್ರಕೋಪ ಹೆಚ್ಚಾಗಬಹುದು” ಎಂದು ಹವಾಮಾನ ಇಲಾಖೆಯ ಡೈಲಿ ಬುಲಿಟಿನ್ ಹೇಳಿದೆ.
ಹಲವು ಭಾಗಗಳಲ್ಲಿ ತಾಪಮಾನವು 46-48 ಡಿಗ್ರಿ ಸೆಲ್ಸಿಯಸ್ ಇರುವ ಸಂಭವನೀಯತೆ ಇದೆ ಎಂದಿದೆ.
ಈ ವರ್ಷದ ಬೇಸಿಗೆಯಲ್ಲಿ ಹೊರಡಿಸಲಾದ ಮೊದಲ ಬಿಸಿಗಾಳಿ ರೆಡ್ ಅಲರ್ಟ್ ಇದಾಗಿದೆ. ಹವಾಮಾನ ಇಲಾಖೆಯು ವಾತಾವರಣದ ಪದ್ಧತಿಗೆ ಅನುಗುಣವಾಗಿ ಪರಿಸ್ಥಿತಿಯನ್ನು ನೋಡಿಕೊಂಡು ಬಣ್ಣಗಳಲ್ಲಿ ಅಲರ್ಟ್ ಹೊರಡಿಸುತ್ತದೆ. ಗ್ರೀನ್, ಎಲ್ಲೋ, ಆರೆಂಜ್ ಮತ್ತು ರೆಡ್ ಅಲರ್ಟ್ ಅನ್ನು ಹೊರಡಿಸಲಾಗುತ್ತದೆ. ಪ್ರಸ್ತುತ ರೆಡ್ ಅಲರ್ಟ್ ಅನ್ನು ಹೊರಡಿಸಲಾಗಿದೆ.
” ಮಧ್ಯಾಹ್ನ ಒಂದರಿಂದ ಐದು ಗಂಟೆ ತನಕ ಮನೆಯಿಂದ ಹೊರಬರದಂತೆ, ಈ ವೇಳೆ ಬಿಸಿಲು ಪ್ರತಾಪ ಹೆಚ್ಚಿರುತ್ತದೆ” ಎಂದು ಭಾರತೀಯ ಹವಾಮಾನ ಇಲಾಖೆಯ ರೀಜಿನಲ್ ಮೆಟ್ರೋ ಲಾಜಿಕಲ್ ಸೆಂಟರ್ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಅವರು ಹೇಳಿದ್ದಾರೆ.
ಲಕ್ಷಾಂತರ ವಲಸಿಗ ಕಾರ್ಮಿಕರು ನಡೆದುಕೊಂಡು ತಮ್ಮ ತವರಿಗೆ ಸೇರುತ್ತಿರುವ ಈ ಸಂದರ್ಭದಲ್ಲಿ ಇಂತಹ ಎಚ್ಚರಿಕೆ ಹೆಚ್ಚು ಆತಂಕವನ್ನು ತಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.