ಮುಂಬೈ: ಇತ್ತೀಚೆಗಷ್ಟೇ ಸಿಎಎ ವಿಚಾರವಾಗಿ ಹುಟ್ಟಿಕೊಂಡ ರಾಜಕೀಯ ಪ್ರೇರಿತ ಮತೀಯ ಭಿನ್ನಾಭಿಪ್ರಾಯ ಇಡೀ ದೇಶವನ್ನೇ ಧಾರ್ಮಿಕ ನೆಲೆಯಲ್ಲಿ ಎರಡು ಭಾಗವಾಗುವಂತೆ ಮಾಡಿತ್ತು. ಆದರೆ ಇಂತಹ ಸನ್ನಿವೇಶದ ನಡುವೆಯೂ ದೇಶದಲ್ಲಿ ಮಾನವೀಯತೆ ಎಂಬುದು ಸಾಮರಸ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಮಹಾರಾಷ್ಟ್ರದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಮುಸ್ಲಿಂ ದಂಪತಿಗೆ ಮಾಡಿದ ಸಹಾಯವೇ ಸಾಕ್ಷಿಯಾಗಿದೆ. ಆ ಮೂಲಕ ಭಾರತದಲ್ಲಿ ಹುಟ್ಟಿದ ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಆರೆಸ್ಸೆಸ್ ಸ್ವಯಂಸೇವಕರು ಜಗತ್ತಿಗೆ ಸಾರಿದ್ದಾರೆ.
ಕೊರೋನಾ ವೈರಸ್ ಕಾರಣದಿಂದಾಗಿ ದೇಶವೇ ಲಾಕ್ಡೌನ್ ಆಗಿದೆ. ಇಂತಹ ಸಂದರ್ಭದಲ್ಲಿ ಗುಜರಾತ್ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಮುಸ್ಲಿಂ ಕುಟುಂಬವೊಂದು ಕಾಲ್ನಡಿಗೆಯಲ್ಲಿ ತಮ್ಮ ಸ್ವಸ್ಥಾನಕ್ಕೆ ತೆರಳುವ ಸಲುವಾಗಿ ಕಾಲ್ನಡಿಗೆಯಲ್ಲಿಯೇ ಪ್ರಯಾಣ ಆರಂಭಿಸಿರುತ್ತಾರೆ. ಗಂಡ ನೂರ್ ಮೊಹಮ್ಮದ್ ತನ್ನ ಗರ್ಭಿಣಿ ಹೆಂಡತಿ ಇಸ್ರತ್ ಮತ್ತು ಮಗುವಿನ ಜೊತೆಗೆ ನಡೆಯುವ ಮೂಲಕವೇ ಉತ್ತರ ಪ್ರದೇಶವನ್ನು ತಲುಪಲು ಬಯಸುತ್ತಾರೆ. ಈ ಮಧ್ಯೆ ಮಹಾರಾಷ್ಟ್ರದ ಜಲ್ಗಾಂವ್ ಪ್ರದೇಶ ತಲುಪಿದಾಗ ಇಸ್ರತ್ಗೆ ದಾರಿಯಲ್ಲಿಯೇ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಲಾಕ್ಡೌನ್ ಕಾರಣದಿಂದ ಸಹಾಯಕ್ಕೂ ಯಾರೂ ಸಿಗುವುದಿಲ್ಲ.
ಇಂತಹ ಸಂದರ್ಭದಲ್ಲಿ ಕೊರೋನಾ ದಿಂದ ಭಾರತವನ್ನು ಕಾಪಾಡಲು ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ, ದೇಶ ಸೇವೆ ಮಾಡುತ್ತಿರುವ ಆರೆಸ್ಸೆಸ್ ಸ್ವಯಂಸೇವಕರಿಗೆ ಸುದ್ದಿ ತಿಳಿಸಲಾಗುತ್ತದೆ. ಆ ಪ್ರದೇಶದಲ್ಲಿ ಜನ ಸೇವೆಯನ್ನು ಮಾಡುತ್ತಿದ್ದ ಕವಿ ಖಾಸರ್ ಎಂಬ ಸ್ವಯಂ ಸೇವಕ ಮತ್ತು ಆರೆಸ್ಸೆಸ್ನ ಸೇವಾಲಯ ತಕ್ಷಣವೇ ಆ ಮುಸ್ಲಿಂ ದಂಪತಿಯ ನೆರವಿಗೆ ಧಾವಿಸುತ್ತದೆ. ಯಾವುದೇ ಭೇದಭಾವ ವಿಲ್ಲದೆಯೇ ಮನುಷ್ಯತ್ವದ ನೆಲೆಯಲ್ಲಿ ಅವರಿಗೆ ನೆರವನ್ನು ನೀಡುತ್ತದೆ.
ಸ್ವಯಂಸೇವಕ ಕಾಸರ್ ಅಗತ್ಯ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು, ಆಂಬುಲೆನ್ಸ್ ಒಂದರ ಮೂಲಕ ಇಸ್ರತ್ ಇದ್ದ ಸ್ಥಳವನ್ನು ತಲುಪುತ್ತಾರೆ. ಅದಾಗಲೇ ಆಕೆಗೆ ಹೆರಿಗೆ ನೋವು ಹೆಚ್ಚಾಗಿ ರಕ್ತ ಸ್ರಾವವೂ ಆಗಿ ರಸ್ತೆಯಲ್ಲೇ ನರಳುತ್ತಿರುತ್ತಾರೆ. ಆ ಕೂಡಲೇ ಅವರನ್ನು ಆಂಬುಲೆನ್ಸ್ನಲ್ಲಿ ಮಲಗಿಸಿ, ಕಾಸರ್ ಅವರೇ ಹೆರಿಗೆ ಮಾಡಿಸುತ್ತಾರೆ. ಬಳಿಕ ಸಮೀಪದ ಜಲ್ಗಾಂವ್ನ ಸರಸಂಘಚಾಲಕ ಡಾ. ವಿಲಾಸ್ ಭೋಲ್ ನಡೆಸುತ್ತಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ತದನಂತರ ಹೆಚ್ಚಿನ ಚಿಕಿತ್ಸೆಗೆ ತಾಯಿ ಮತ್ತು ಮಗುವನ್ನು ಆರೆಸ್ಸೆಸ್ ಸ್ವಯಂಸೇವಕರು ಗೋದಾವರಿ ಆಸ್ಪತ್ರೆಗೂ ದಾಖಲಿಸುತ್ತಾರೆ.
ಕ್ಲಪ್ತ ಸಮಯದಲ್ಲಿ ಒದಗಿ ಬಂದ ಆರೆಸ್ಸೆಸ್ನ ಸ್ವಯಂಸೇವಕರ ಕಾರ್ಯವನ್ನು ಮೆಚ್ಚಿದ ವೈದ್ಯರು ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಸ್ವಯಂಸೇವಕರ ಈ ಸಮಯಪ್ರಜ್ಞೆಯಿಂದ ತಾಯಿ ಮತ್ತು ಮಗುವಿನ ಜೀವಕ್ಕೆ ಏನೂ ತೊಂದರೆಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದು, ಸಂಘದ ಸಮಾಜಸೇವೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ಸಂಘದ ಸ್ವಯಂಸೇವಕರ ಕಾರ್ಯಕ್ಕೆ ಮುಸ್ಲಿಂ ದಂಪತಿಯೂ ಧನ್ಯವಾದ ತಿಳಿಸಿದ್ದಾರೆ. ಕಾಸರ್ ಅವರನ್ನು ದೇವರಿಗೆ ಹೋಲಿಸಿರುವ ದಂಪತಿ ‘ಆಪ್ ತೋ ಖುದಾ ಹೋ’ ಎಂದು ಹೇಳಿದ್ದು, ಅವರ ಸೇವೆಗೆ ಕೃತಜ್ಞತೆಗಳನ್ನು ಸಮರ್ಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.