ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥರಾಗಿ ಇಂದು ಪದಗ್ರಹಣ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೋವಿಡ್-19 ವಿರುದ್ಧದ ಭಾರತದ ಹೋರಾಟದಲ್ಲಿ ಮುಂಚೂಣಿ ಪಾತ್ರವನ್ನು ವಹಿಸುತ್ತಿರುವ ಡಾ. ಹರ್ಷವರ್ಧನ್ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ 34 ಸದಸ್ಯರ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥರನ್ನಾಗಿ ಕೆಲದಿನಗಳ ಹಿಂದೆಯಷ್ಟೇ ನೇಮಕ ಮಾಡಲಾಗಿತ್ತು. ಇಂದು ಅವರು ತಮ್ಮ ಹುದ್ದೆಯನ್ನು ಅಲಂಕರಿಸಿದ್ದಾರೆ. ಜಪಾನಿನ ಡಾ.ಹಿರೊಕಿ ನಕತನಿ ಅವರ ಉತ್ತರಾಧಿಕಾರಿಯಾಗಿ ಹರ್ಷವರ್ಧನ್ ಹುದ್ದೆಗೇರಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ” ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕಚೇರಿಯನ್ನು ಪ್ರವೇಶಿಸುತ್ತಿದ್ದೇನೆ ಎಂಬ ಅರಿವು ನನಗಿದೆ. ಮುಂದಿನ ಎರಡು ದಶಕಗಳಲ್ಲಿ ಹಲವು ಆರೋಗ್ಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬ ಬಗ್ಗೆಯೂ ನಮಗೆ ತಿಳಿದಿದೆ. ಈ ಎಲ್ಲಾ ಸವಾಲುಗಳ ಬೇಡಿಕೆಯು ಹಂಚಿಕೆಯ ಜವಾಬ್ದಾರಿಯಾಗಿದೆ” ಎಂದಿದ್ದಾರೆ.
I feel privileged to take charge as Chairman of the World Health Organisation’s Executive Board at its 147th session held virtually.I believe that health is central to economic performance and to enhancing human capabilities.@WHO @PMOIndia @MEAIndia @MoHFW_INDIA #EB147 #COVID19 pic.twitter.com/pBn7LrE4Yh
— Dr Harsh Vardhan (@drharshvardhan) May 22, 2020
ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ-ಪೂರ್ವ ಏಷ್ಯಾ ಗುಂಪು, ಮೂರು ವರ್ಷಗಳ ಅವಧಿಗೆ ಭಾರತದ ನಾಮ ನಿರ್ದೇಶಕರನ್ನು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದವು.
ಕಳೆದ ಮಂಗಳವಾರ ವಿಶ್ವ ಆರೋಗ್ಯ ಅಸೆಂಬ್ಲಿಯ 194 ದೇಶಗಳು ಭಾರತದ ನಾಮ ನಿರ್ದೇಶಕರನ್ನು ನಿಯೋಜಿಸುವ ಪ್ರಸ್ತಾವನೆಗೆ ಸಹಿ ಹಾಕಿದ್ದವು.
ಪ್ರಾದೇಶಿಕ ಗುಂಪುಗಳಲ್ಲಿ ಒಂದು ವರ್ಷಗಳ ಅವಧಿಗೆ ರೋಟೇಶನ್ ಆಧಾರದಲ್ಲಿ ಮುಖ್ಯಸ್ಥರನ್ನು ನೇಮಕ ಮಾಡಲಾಗುತ್ತದೆ. ಆದರೆ ಕಳೆದ ವರ್ಷ, ಭಾರತದ ನಾಮ ನಿರ್ದೇಶಕರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡುವುದೆಂದು ಘೋಷಣೆ ಮಾಡಲಾಗಿದೆ. ಇದು ಪೂರ್ಣಾವಧಿ ಅಸೈನ್ಮೆಂಟ್ ಅಲ್ಲ, ಹೀಗಾಗಿ ಸಚಿವರು ಕಾರ್ಯಕಾರಿ ಮಂಡಳಿಯ ಸಭೆಗೆ ಹಾಜರಾದರೆ ಸಾಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯಲ್ಲಿ 34 ಸದಸ್ಯರು ಇದ್ದಾರೆ. ವರ್ಷಕ್ಕೆ ಎರಡು ಬಾರಿ ಇದು ಸಭೆ ಸೇರುತ್ತದೆ. ಜನವರಿ ಮತ್ತು ಮೇ ತಿಂಗಳಲ್ಲಿ ಆರೋಗ್ಯ ಅಸೆಂಬ್ಲಿಯಲ್ಲಿ ಸಭೆ ಆಯೋಜನೆಗೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.